ಮಂಡ್ಯದ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾರಿ ತಪ್ಪಿದ ಹಿಂದೂಗಳು ಕಾಂಗ್ರೆಸ್ಸಿಗರಾಗುತ್ತಾರೆ ಮತ್ತು ಅವರು ಜಿಹಾದಿಗಳಿಗೆ ಸಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ (ಸೆ.16): ಮುಸ್ಲಿಂ ಸಮುದಾಯದ ದಾರಿ ತಪ್ಪಿದ ವ್ಯಕ್ತಿ ಜಿಹಾದಿ ಆಗುವಂತೆ, ಹಿಂದೂತ್ವದಲ್ಲಿ ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ. ಜಿಹಾದಿಗಳಿಗೂ ಹಾಗೂ ಕಾಂಗ್ರೆಸ್ಸಿಗರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದು, ಸದ್ಯ ರಾಜ್ಯ ರಾಜಕಾರಣದಲ್ಲಿ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, 'ಹಿಂದೂ-ಮುಸ್ಲಿಂ ಎಲ್ಲರೂ ಅಣ್ಣ-ತಮ್ಮಂದಿರ ರೀತಿಯಲ್ಲಿ ಇದ್ದಾರೆ. ಎರಡು ಸಮುದಾಯದಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ದಾರಿ ತಪ್ಪಿದ ವ್ಯಕ್ತಿ ಜಿಹಾದಿ ಆಗುತ್ತಾನೆ. ಅದೇ ರೀತಿ ಹಿಂದೂತ್ವದಲ್ಲೂ ಅಂತಹವರು ಇದ್ದು, ದಾರಿ ತಪ್ಪಿದವರು ಕಾಂಗ್ರೆಸ್ಸಿಗರು ಆಗುತ್ತಾರೆ' ಎಂದು ವಾಗ್ದಾಳಿ ನಡೆಸಿದರು.

ಜಿಹಾದಿಗಳು ಹಾಗೂ ಕಾಂಗ್ರೆಸ್ಸಿಗರು ಇಬ್ಬರೂ ದೇಶಕ್ಕೆ ಗಂಡಾಂತರ ತರುವ ವ್ಯಕ್ತಿಗಳಾಗುತ್ತಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವು ತನ್ನ ಜಿಹಾದಿ ನಡವಳಿಕೆಯನ್ನು ಬಿಟ್ಟು, ದೇಶಭಕ್ತಿ ಹಾಗೂ ನಾವೆಲ್ಲರೂ ಒಂದೇ ಎಂಬ ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಹೈಡ್ರಾಮಾ:

ಇನ್ನೊಂದೆಡೆ, ಮದ್ದೂರಿನ ಪೇಟೆ ಬೀದಿಯಲ್ಲಿ ಸಾಮೂಹಿಕ ಗಣೇಶ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು. ಒಟ್ಟು 108 ಗಣೇಶ ಮೂರ್ತಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಹಿಂದೂ ಯುವಕರು ಹೆಜ್ಜೆ ಹಾಕಿದರು. ಮೆರವಣಿಗೆಯು ಮಸೀದಿ ಹಾಗೂ ದರ್ಗಾ ಇರುವ ಪ್ರದೇಶದ ಬಳಿಗೆ ಆಗಮಿಸುತ್ತಿದ್ದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮೆರವಣಿಗೆಯು ಪೇಟೆ ಬೀದಿಯಲ್ಲಿರುವ ದರ್ಗಾ ಬಳಿಗೆ ಬರುತ್ತಿದ್ದಂತೆ ಹಿಂದೂ ಕಾರ್ಯಕರ್ತರು ದರ್ಗಾ ಮುಂಭಾಗದ ರಸ್ತೆಯಲ್ಲೇ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿ ತಮ್ಮ ಆಕ್ರೋಶ ಹಾಗೂ ಭಕ್ತಿ ಮೆರೆದರು. ಬಿಗಿ ಭದ್ರತೆಯ ನಡುವೆಯೂ ಮದ್ದೂರಿನಲ್ಲಿ ನಡೆದ ಈ ವಿದ್ಯಮಾನಗಳು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಛಲವಾದಿ ನಾರಾಯಣಸ್ವಾಮಿ ಅವರ ಈ ವಿವಾದಾತ್ಮಕ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.