ರಾಜ್ಯ ಸರ್ಕಾರದ ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದ್ದು, ಇದರ ಬೆನ್ನಲ್ಲೇ ರಾಜ್ಯದ ಜನತೆಗೆ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಮಾಡಿದ ಅತ್ಯಂತ ಗಂಭೀರವಾದ ಮೋಸ ಬೆಳಕಿಗೆ ಬಂದಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಕಾರ್ಕಳ (ಜೂ.16): ರಾಜ್ಯ ಸರ್ಕಾರದ ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದ್ದು, ಇದರ ಬೆನ್ನಲ್ಲೇ ರಾಜ್ಯದ ಜನತೆಗೆ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಮಾಡಿದ ಅತ್ಯಂತ ಗಂಭೀರವಾದ ಮೋಸ ಬೆಳಕಿಗೆ ಬಂದಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ. ಅವರು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

150 ಕೋಟಿ ರುಪಾಯಿಗಳ ಭಾರಿ ವೆಚ್ಚದಲ್ಲಿ ತಯಾರಿಸಲಾದ ಜಾತಿ ಗಣತಿ ವರದಿಯಲ್ಲಿ ದತ್ತಾಂಶದ ಲೋಪವಿದ್ದು, ಈ ಬಗ್ಗೆ ಬಿಜೆಪಿ ಪದೇಪದೆ ಎಚ್ಚರಿಕೆ ನೀಡಿದರೂ, ಸಿದ್ದರಾಮಯ್ಯ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ, ತಮ್ಮ ಉಡಾಫೆ ನಡವಳಿಕೆಯನ್ನು ಮುಂದುವರಿಸಿದ್ದರು ಎಂದು ಅವರು ಆರೋಪಿಸಿದರು.

ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಿದ ಸರ್ಕಾರ, ನಂದಿಬೆಟ್ಟದ ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಅಂಗೀಕರಿಸಲು ಮುಂದಾಗಿತ್ತು. ಆದರೆ ವರದಿಯ ದತ್ತಾಂಶಗಳಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಹಸ್ತಕ್ಷೇಪಿಸಿ ಈ ವರದಿಯನ್ನು ತಿರಸ್ಕರಿಸಿದ್ದು, ಅದು ಕಸದ ಬುಟ್ಟಿಗೆ ಬಿದ್ದಂತಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ಇದು ಕೇವಲ ಸಿದ್ದರಾಮಯ್ಯನವರ ತಪ್ಪಲ್ಲ, ಕಾಂಗ್ರೆಸ್ ಹೈಕಮಾಂಡ್ ಕೂಡಾ ಹಿಂದುಳಿದ ವರ್ಗಗಳ ಭಾವನೆಗಳಿಗೆ ಧಕ್ಕೆ ನೀಡಿದೆ. ಕಳೆದ ಹತ್ತು ವರ್ಷಗಳಿಂದ ಸಿದ್ದರಾಮಯ್ಯ ಅವರು ಈ ವಿಚಾರವನ್ನು ರಾಜಕೀಯ ಸಾಧನಕ್ಕೆ ಬಳಸಿಕೊಂಡು ಜನರನ್ನು ತೊಂದರೆಗೊಳಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಮುದಾಯಗಳ ನಡುವೆ ಅಸಮಾಧಾನ ಮತ್ತು ವಿಚ್ಛಿದ್ರತೆ ಹುಟ್ಟಿದೆ ಎಂದು ಅವರು ದೂರಿದರು. ಈ ಎಲ್ಲ ರಾಜಕೀಯ ಅವ್ಯವಹಾರಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.