Asianet Suvarna News Asianet Suvarna News

ಆಪ್‌ ಅಧಿಕಾರಕ್ಕೆ ಬಂದರೆ ಜಾತಿ ಆಧಾರದಲ್ಲಿ ಮೀಸಲು: ಮುಖ್ಯಮಂತ್ರಿ ಚಂದ್ರು

ಬಿಜೆಪಿ ಸರ್ಕಾರ ಘೋಷಿಸಿರುವ ಮೀಸಲಾತಿ ಬರೀ ಚುನಾವಣಾ ಗಿಮಿಕ್‌. ಇದು ಯಶಸ್ವಿಯಾಗಲ್ಲ. ಜಾತಿ ಗಣತಿ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ಸಂಪೂರ್ಣ ಪುನರ್‌ ಮೀಸಲು ಘೋಷಿಸಿದಾಗ ಮಾತ್ರ ಅನ್ಯಾಯವಾಗಲ್ಲ. 

Caste based reservation if AAP comes to power Says Mukhyamantri Chandru gvd
Author
First Published Mar 31, 2023, 10:22 PM IST

ಹುಬ್ಬಳ್ಳಿ (ಮಾ.31): ಬಿಜೆಪಿ ಸರ್ಕಾರ ಘೋಷಿಸಿರುವ ಮೀಸಲಾತಿ ಬರೀ ಚುನಾವಣಾ ಗಿಮಿಕ್‌. ಇದು ಯಶಸ್ವಿಯಾಗಲ್ಲ. ಜಾತಿ ಗಣತಿ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ಸಂಪೂರ್ಣ ಪುನರ್‌ ಮೀಸಲು ಘೋಷಿಸಿದಾಗ ಮಾತ್ರ ಅನ್ಯಾಯವಾಗಲ್ಲ. ಆಪ್‌ ಅಧಿಕಾರಕ್ಕೆ ಬಂದರೆ ಆ ಕೆಲಸ ಮಾಡುತ್ತದೆ ಎಂದು ಆಮ್‌ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ್ಯಾವ ಜಾತಿಯವರು ಎಷ್ಟೆಷ್ಟುಜನಸಂಖ್ಯೆಯಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಆ ನಿಟ್ಟಿನಲ್ಲಿ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಮಾಡಿಸಿದ್ದ ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು. 

ಅದನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಬಿಡಬೇಕು. ಅದಾದ ಬಳಿಕ ಮೀಸಲಾತಿಯನ್ನು ಪುನರ್‌ ಮೀಸಲುಗೊಳಿಸಬೇಕು. ಅಂದಾಗ ಮಾತ್ರ ಮೀಸಲಾತಿ ಸಮನಾಗಿ ಎಲ್ಲರಿಗೂ ದೊರೆಯಲಿದೆ ಎಂದರು. ಆದರೆ ಈಗ ಬಿಜೆಪಿ ಸರ್ಕಾರ ಬರೀ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದಕ್ಕಾಗಿ ಒಬ್ಬರಿಗೆ ಕೊಟ್ಟಿರುವುದನ್ನು ಕೈಬಿಟ್ಟು, ಮತ್ತೊಬ್ಬರಿಗೆ ಹಂಚುವ ಕೆಲಸ ಮಾಡಿದೆ ಅಷ್ಟೇ. ಒಳಮೀಸಲಾತಿ ಕೂಡ ವೈಜ್ಞಾನಿಕವಾಗಿ ನಡೆಸಿಲ್ಲ. ಇವರೆಡು ಜಾರಿಯಾಗಲ್ಲ. ಆದಕಾರಣ ಜಾತಿ ಗಣತಿ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸಬೇಕು. ಆ ಕೆಲಸವನ್ನು ಆಪ್‌ ಅಧಿಕಾರಕ್ಕೆ ಬಂದರೆ ಖಂಡಿತ ಮಾಡುತ್ತೇವೆ ಎಂದರು.

Chikkamagaluru: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ಹಣ ವಶ

ಬೂದಿ ಮುಚ್ಚಿದ ಕೆಂಡ: ಆಮ್‌ ಆದ್ಮಿ ಪಕ್ಷವು ಬೂದಿ ಮುಚ್ಚಿದ ಕೆಂಡ ಇದ್ದಂತೆ. ಅದು ಕೆಂಡ ಎಂಬುದು ಗೊತ್ತಾಗಲ್ಲ. ಅದರ ಶಾಕ್‌ ತಗುಲಿದಾಗಲೇ ಬೂದಿ ಅಲ್ಲ ಕೆಂಡ ಎನ್ನುವುದು ಗೊತ್ತಾಗುವುದು. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಪ್‌ ಮೊದಲು ಲೆಕ್ಕಕ್ಕೆ ಇಲ್ಲ ಎಂಬಂತೆ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಎಲ್ಲ ಸ್ಥಾನಗಳನ್ನು ಕಸಿದುಕೊಂಡು ಅಧಿಕಾರದ ಗದ್ದುಗೆ ಏರಿದ್ದೇವೆ. ಅದೇ ರೀತಿ ಇದೀಗ ಕರ್ನಾಟಕದಲ್ಲೂ ಆಪ್‌ ಲೆಕ್ಕಕ್ಕೇ ಇಲ್ಲ ಅಂತ ರಾಜಕೀಯ ಪಕ್ಷಗಳು ಭಾವಿಸಿವೆ. ಇಲ್ಲೂ ಅಲ್ಲಿನಂತೆ ಕಮಾಲ್‌ ಮಾಡುತ್ತೇವೆ. ಇಲ್ಲೂ ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಎಲ್ಲೆಡೆ ಉತ್ತಮ ವಾತಾವರಣವಿದೆ. ನಮ್ಮ ಪಕ್ಷ ಈ ಮೊದಲೇ ಹೇಳಿದಂತೆ ಕೆಂಡ ಇದ್ದಂತೆ. 

ಎಷ್ಟುಸ್ಥಾನ ಬರುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. 130 ಬರಬಹುದು. 150 ಬರಬಹುದು. ಆದರೆ ಈ ಸಲ ಮೂರು ಪಕ್ಷಗಳು ದರೋಡೆಕೋರರು, ಕುಟುಂಬದಲ್ಲಿ ಗಿರಕಿ ಹೊಡೆಯುವ ಪಕ್ಷಗಳು ಎಂಬುದು ಜನರಿಗೆ ಅರ್ಥವಾಗಿದೆ. ಹೀಗಾಗಿ ಈ ಮೂರು ಪಕ್ಷಗಳಿಗೂ ಪರ್ಯಾಯವಾಗಿ ಆಪ್‌ ಅನಿವಾರ್ಯ ಎಂಬುದು ಜನರಿಗೆ ಮನವರಿಕೆಯಾಗಿದೆ ಎಂದರು. ಸದ್ಯ 80 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನುಳಿದ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ನುಡಿದರು. ಇಲ್ಲಿನ ಪ್ರಚಾರಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಆಗಮಿಸಲಿದ್ದಾರೆ. ನಮ್ಮ ಪಕ್ಷದ ಪ್ರಚಾರ ಅತ್ಯುತ್ತಮವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!

ಶೂನ್ಯ ಭ್ರಷ್ಟಾಚಾರ, ಝಿರೋ ಕಮಿಷನ್‌ ಆಡಳಿತ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಮತ್ತು ಅಗತ್ಯ ಬಜೆಟ್‌, ಪ್ರತಿ ಮನೆಗೆ ವಿದ್ಯುತ್‌, ಶಿಕ್ಷಣ ಹೀಗೆ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ, ಉಪಾಧ್ಯಕ್ಷ ರೋಹನ ಐನಾಪುರ, ಮಲ್ಲಿಕಾರ್ಜುನ ಹಿರೇಮಠ, ಅನಂತ ಕುಮಾರ ಬುಗಡಿ, ಪೂರ್ವ ಕ್ಷೇತ್ರದ ಅಭ್ಯರ್ಥಿ ಬಸವರಾಜ ತೇರದಾಳ, ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ವಿಕಾಸ ಸೊಪ್ಪಿನ ಸೇರಿದಂತೆ ಹಲವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios