ಬಜೆಟ್ ಮುಗಿಯುತ್ತಿದ್ದಂತೆಯೇ ಜೆಡಿಎಸ್ ಮೇಲೆ ಬಾಣ ಬಿಡಲು ಕಾದು ಕುಳಿತ ಬಿಎಸ್ವೈ
ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು (ಗುರುವಾರ) ಬಜೆಟ್ ಮಂಡಿಸಲಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಅಸ್ತ್ರ ಸದನದಲ್ಲಿ ಪ್ರಯೋಗವಾಗುವ ಸಾಧ್ಯತೆ ಇದೆ. ಏನದು..?
ಬೆಂಗಳೂರು,(ಮಾ.05) : ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ 24 ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿಯವರನ್ನು ಉಪ ಸಭಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು, ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬಳಿಕ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಬಿಎಸ್ವೈ ನಿರ್ಧರಿಸಿದ್ದಾರೆ.
ಒಂದೆಡೆ ಸಂಪುಟ ಸಂಭ್ರಮ: ಮತ್ತೊಂದೆಡೆ ಬಿಎಸ್ವೈಗೆ ಹೊಸ ಸಂದೇಶ ರವಾನಿಸಿದ ಬಿಜೆಪಿ ಶಾಸಕ
ಕೃಷ್ಣಾರೆಡ್ಡಿಯವರ ಸ್ಥಾನಕ್ಕೆ ಸವದತ್ತಿ ಬಿಜೆಪಿ ಶಾಸಜ ಆನಂದ್ ಮಾಮನಿಯನ್ನು ಆಯ್ಕೆ ಮಾಡಲು ಬಿ.ಎಸ್.ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಆನಂದ್ ಮಾಮನಿ, ಸಚಿವ ಸ್ಥಾನ ಕೈ ತಪ್ಪಿದಾಗ ಅಸಮಾಧಾನ ಹೊರಹಾಕಿದ್ದರು. ಸಚಿವ ಸ್ಥಾನ ಕೊಡದಿದ್ದರೂ ಪರವಾಗಿ ಉಪ ಸಭಾಪತಿಯನ್ನ ಕೆಳಗಿಳಿಸಿ ತಮ್ಮನ್ನ ನೇಮಿಸಿ ಎಂದು ಆನಂದ್ ಮಾಮನಿ ಹೇಳಿಕೊಂಡಿದ್ದರು.
ಇದೀಗ ಯಡಿಯೂರಪ್ಪ, ಆನಂದ್ ಮಾಮನಿಯವರಿಗೆ ಉಪ-ಸಭಾಧ್ಯಕ್ಷರ ಹುದ್ದೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಸಭಾಪತಿಯಾಗಿದ್ದ ಕೃಷ್ಣಾರೆಡ್ಡಿ ಜಾಗಕ್ಕೆ ಆನಂದ್ ಮಾಮನಿ ನೇಮಕವಾಗುವ ಎಲ್ಲಾ ಸಾಧ್ಯತೆಗಳಿವೆ.
ನಿಯಮಗಳ ಪ್ರಕಾರ ಅವಿಶ್ವಾಸ ನಿರ್ಣಯ ಮಂಡಿಸಲು 14 ದಿನಗಳ ಮುಂಚಿತವಾಗಿಯೇ ನೋಟಿಸ್ ನೀಡಬೇಕು. ಈಗಾಗಲೇ ಸಾಮಾನ್ಯವಾಗಿ ವಿಧಾನಸಭೆಯ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಗಳು ತೀರಾ ಕಡಿಮೆ.
ಕೃಷ್ಣಾರೆಡ್ಡಿ ಗೌರವಯುತವಾಗಿ ರಾಜೀನಾಮೆ ನೀಡದಿದ್ದರೆ ಬಜೆಟ್ ಮಂಡನೆ ಬಳಿಕ ಅವಿಶ್ವಾಸ ನಿರ್ಣಯ ಮಂಡಿಸುವುದು ಬಹಿತೇಕ ಖಚಿತ.