Asianet Suvarna News Asianet Suvarna News

ಬಿಜೆಪಿ ಸರ್ಕಾರದ ಎರಡೂ ಎಂಜಿನ್‌ ಫೇಲ್‌: ಎಂ.ಬಿ.ಪಾಟೀಲ ವಾಗ್ದಾಳಿ

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೀಲಿ ಹಾಕಿವೆ. 40 ಪರ್ಸೆಂಟ್‌ ಲಂಚ ಈ ಸರ್ಕಾರದ ಬಹುದೊಡ್ಡ ಸಾಧನೆ. ಬೆಲೆ ಏರಿಕೆ, ಉದ್ಯಮಿಗಳ ಸಾಲ ಮನ್ನಾವೇ ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದ ಎಂ.ಬಿ.ಪಾಟೀಲ. 

Both the Engines of the BJP Government Failed Says MB Patil grg
Author
First Published Apr 29, 2023, 1:08 PM IST

ವಿಜಯಪುರ(ಏ.29):  ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಮರ್ಥ, ಸಮರ್ಪಕ ಆಡಳಿತ ನೀಡುವಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಎನ್ನುವ ಬಿಜೆಪಿಯ ಎರಡೂ ಎಂಜಿನ್‌ಗಳು ಫೇಲ್‌ ಆಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ತಿಕೋಟಾ ಪಟ್ಟಣದಲ್ಲಿ ಕೈಗೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೀಲಿ ಹಾಕಿವೆ. 40 ಪರ್ಸೆಂಟ್‌ ಲಂಚ ಈ ಸರ್ಕಾರದ ಬಹುದೊಡ್ಡ ಸಾಧನೆ. ಬೆಲೆ ಏರಿಕೆ, ಉದ್ಯಮಿಗಳ ಸಾಲ ಮನ್ನಾವೇ ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.

NARENDRA MODI: ನಾಳೆ ಗುಮ್ಮಟನಗರಕ್ಕೆ ಪ್ರಧಾನಿ ಮೋದಿ, ಎಲ್ಲೆಡೆ ಭಾರೀ ಭದ್ರತೆ!

ಕಣ್ಣೀರಿಗೆ ಕರಗದಿರಿ:

ಚುನಾವಣೆಯಲ್ಲಿ ತಮ್ಮ ವಿರುದ್ಧ ಧ್ವನಿ ಎತ್ತಲೂ ವಿರೋಧಿಗಳ ಬಳಿ ಯಾವುದೇ ವಿಷಯವಿಲ್ಲ. ಹಾಗಾಗಿ ಅನುಕಂಪ ಗಿಟ್ಟಿಸಿಕೊಳ್ಳಲು ಮೊಸಳೆ ಕಣ್ಣೀರು ಹಾಕುವುದು, ಅಡ್ಡಲಾಗಿ ಬೀಳುವುದು ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು. ಇಂಥ ಕಣ್ಣೀರಿಗೆಲ್ಲ ಮತದಾರರು ಕರಗಬಾರದು ಎಂದು ಎಂಬಿಪಾ ಹೇಳಿದರು.

ಈ ಭಾಗದಲ್ಲಿ ಅನುಷ್ಠಾನವಾಗಬೇಕಿದ್ದ ಎಫ್‌ಐಸಿ ಕಾಮಗಾರಿಯನ್ನು ವಿರೋಧಿಗಳು ಪ್ಯಾಕೇಜ್‌ ಮೂಲಕ ಲಂಚ ಪಡೆಯುವ ಸಲುವಾಗಿ ಬಂದ್‌ ಇರಿಸಿದ್ದಾರೆ. ಜನ ಮತ್ತು ರೈತ ವಿರೋಧಿಯಾಗಿರುವ ಇಂಥವರ ಪರ ಇರುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಅಂಥ ಮತದಾರರ ಮನವೊಲಿಸಿ ಕಾಂಗ್ರೆಸ್ಸಿಗೆ ಮತ ಹಾಕಿಸಬೇಕು ಎಂದು ಹೇಳಿದರು.

ತಿಕೋಟಾ ನಮ್ಮೂರು. ಅಭಿವೃದ್ಧಿ ಪರ್ವದ ಚುನಾವಣೆಯಾಗಬೇಕು. ಈ ಪಟ್ಟಣದಲ್ಲಿ ಎಲ್ಲ ಕೆಲಸಗಳಾಗಿವೆ. ಮಿನಿ ವಿಧಾನಸೌಧಗಳಾಗಿವೆ. ಸಬ್‌ ರಜಿಸ್ಟ್ರಾರ್‌ ಕಚೇರಿಯಾಗಿದೆ. ಜಲಸಂಪನ್ಮೂಲ ಸಚಿವನಾಗಿ ಯಾವುದೇ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಒಳಪಡದ ತಿಕೋಟಾ ಹೋಬಳಿಗೆ ಛಲದಿಂದ ನೀರು ತಂದು ಕೊಟ್ಟಿದ್ದೇನೆ. .3600 ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆ ಜಾರಿ ಮಾಡಿದ್ದೇನೆ. ಈಗ ನೀರು ಬಂದಿದೆ. ಈ ಭಾಗದಲ್ಲಿ ಸಮೃದ್ಧಿಯಾಗಿದೆ ಎಂದು ಹೇಳಿದರು.

ಹ​ನು​ಮ ದೇಗುಲ ಇದ್ದೆಡೆ ರಾಮಮಂದಿರ ನಿರ್ಮಾಣ: ಯುಪಿ ಸಿಎಂ ಯೋಗಿ

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ತಮ್ಮಣ್ಣ ಹಂಗರಗಿ, ಬಸಯ್ಯ ವಿಭೂತಿ, ರಾಮು ದೇಸಾಯಿ, ಎಚ್‌.ಎಂ.ಬಾಗವಾನ, ಜಗದೀಶ ಪಾಟೀಲ, ವಿಜುಗೌಡ ಪಾಟೀಲ, ಮಲ್ಕು ಹಂಜಗಿ, ಗಂಗಪ್ಪ ಕರಜಗಿ, ಭೀಮು ನಾಟಿಕಾರ, ಹಾಜಿಸಾಬ ಕೊಟ್ಟಲಗಿ, ಲೇಪು ಕೊಣ್ಣೂರ, ತಿಪ್ಪಣ್ಣ ಕೊಣ್ಣೂರ, ಮಾಳು ಗುಗದಡ್ಡಿ, ಪ್ರಕಾಶ ಸೊನ್ನದ ಮುಂತಾದವರು ಉಪಸ್ಥಿತರಿದ್ದರು.

ಅತ್ತರೆ ಬರಲ್ಲ ಮತ...

ಅತ್ತರೆ ಮತಗಳು ಬರಲ್ಲ. ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಮುಖ್ಯಮಂತ್ರಿಯೇ ಆಗುತ್ತಿದ್ದರು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಮತಯಾಚಿಸುವಾಗ ಕೆಲವರು ಅಳುತ್ತಾರೆ, ಅಡ್ಡ ಬೀಳುತ್ತಾರೆ, ಅಂಗಲಾಚುತ್ತಾರೆ. ಇದು ಅನುಕಂಪ ಗಿಟ್ಟಿಸುವ ಯತ್ನವಷ್ಟೇ. ಆದರೆ, ಇದೇ ಅರ್ಹತೆ ಆಗಬಾರದು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಜಿ.ಕೆ.ಪಾಟೀಲ ಹೇಳಿದರು. ಮತದ ಮಹತ್ವವನ್ನು ಪ್ರತಿಯೊಬ್ಬ ಮತದಾರರು ಅರಿತುಕೊಳ್ಳಬೇಕು. ಸದಾ ತಮ್ಮ ಶ್ರೇಯಸ್ಸು ಬಯಸುವ ಹಿತಚಿಂತಕರ ಪರ ಮತ ಚಲಾಯಿಸಬೇಕು. ಮತದಾರರು ತಮ್ಮ ಮತ ಅಪಮೌಲ್ಯ ಆಗಬಾರದು ಎಂಬ ಪ್ರಜ್ಞೆ ಇಟ್ಟುಕೊಂಡು ಅರ್ಹರಿಗೆ ಮತ ಹಾಕಬೇಕು. ಒಬ್ಬ ಜನಪ್ರತಿನಿಧಿ ಮತ್ತು ಜನನಾಯಕನಿಗೆ ಇರಬೇಕಾದ ಎಲ್ಲಾ ಅರ್ಹತೆಗಳು ಎಂ.ಬಿ.ಪಾಟೀಲರಿಗೆ ಇವೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಜಿ.ಕೆ ಪಾಟೀಲ ಹೇಳಿದರು.

Follow Us:
Download App:
  • android
  • ios