ಬೊಮ್ಮಾಯುಲ್ಲಾ ಖಾನ್, ಜಬ್ಬಾರ್ ಖಾನ್, ಬಿಜೆಪಿಯ ಸಿದ್ರಾಮುಲ್ಲಾಖಾನ್ ಅಸ್ತ್ರಕ್ಕೆ ಕಾಂಗ್ರೆಸ್ ತಿರುಗೇಟು!
ಸಿಟಿ ರವಿ ಇತ್ತೀಚೆಗೆ ಸಿದ್ರಾಮುಲ್ಲಾ ಖಾನ್ ಎಂಬ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಪರ ವಿರೋಧಗಳು, ವಿದಾಗಳು ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಪರೂಪದ ಫೋಟೋಗಳನ್ನಿಟ್ಟು ತಿರುಗೇಟು ನೀಡಿದೆ. ಬೊಮ್ಮಾಯುಲ್ಲಾ ಖಾನ್, ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್, ಮಹಮದ್ ಗಡ್ಕರಿ ಶೇಕ್ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದೆ.
ಬೆಂಗಳೂರು(ಡಿ.06): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಯಾತ್ರೆ, ಸಮಾವೇಶ, ವಾಕ್ಸಮರ, ಆರೋಪ, ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಹೋರಾಟ ಹೊಸ ಹೊಸ ವೇದಿಕೆ ಸೃಷ್ಟಿಸುತ್ತಿದೆ. ಇತ್ತೀಚೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಭಾಷಣದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಸಿದ್ರಾಮುಲ್ಲಾ ಖಾನ್ ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹೆಸರನ್ನೇ ಕರೆದು ಭಾರಿ ವಿವಾದ ಸೃಷ್ಟಸಿದ್ದರು. ಈ ಕುರಿತು ಪರ ವಿರೋಧಗಳು, ಸಮರ್ಥನೆ, ಆರೋಪಗಳು ನಡೆದಿತ್ತು. ಇದೀಗ ಕಾಂಗ್ರೆಸ್ ಬಿಜೆಪಿ ನಾಯಕರ ಕೆಲ ಫೋಟೋಗಳನ್ನು ಟ್ವೀಟ್ ಮಾಡಿ ಇವರನ್ನು ಏನೆಂದು ಕರೆಯಬಹುದು ಎಂದು ಪ್ರಶ್ನಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಆರ್ ಅಶೋಕ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಫೋಟೋಗಳನ್ನು ಟ್ವೀಟ್ ಮಾಡಿದೆ. ಬಳಿಕ ಬೊಮ್ಮಾಯುಲ್ಲಾ ಖಾನ್, ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್, ಮಹಮದ್ ಗಡ್ಕರಿ ಶೇಕ್ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದೆ.
ಮುಸ್ಲಿಮ್ ಸಮಾರಂಭವೊಂದರಲ್ಲಿ ಪಾಲ್ಗೊಂಡ ಬಸವರಾಜ್ ಬೊಮ್ಮಾಯಿವರ ಹಳೇ ಫೋಟೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಳಿಕ ಇವರನ್ನು ಬೊಮ್ಮಾಯುಲ್ಲಾ ಖಾನ್ ಎಂದು ಕರೆಯಬಹುದೇ ಎಂದು ಟ್ವೀಟ್ ಮಾಡಿದೆ. ಇನ್ನು ಮೊಹಮ್ಮದ್ ಗಡ್ಕರಿಗೆ ಇವರನ್ನು ಮೊಹಮ್ಮದ್ ಗಡ್ಕರಿ ಶೇಕ್ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದೆ. ಇಷ್ಟಕ್ಕೇ ನಿಲ್ಲಿಸದ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಹಾಗೂ ಆರ್ ಅಶೋಕ್ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಇವರಿಗೆ ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್ ಎಂದು ಕರೆಯಬಹುದೇ ಎಂದಿದೆ.
ಸಿದ್ರಾಮುಲ್ಲಾ ಖಾನ್ ಹೇಳಿಕೆ: ಸಿ.ಟಿ ರವಿ ನಿವಾಸದ ಬಳಿ ಕಾಂಗ್ರೆಸ್ ಪ್ರೊಟೆಸ್ಟ್
ಇದೀಗ ಕಾಂಗ್ರೆಸ್ ಈ ಟ್ವೀಟ್ ಭಾರಿ ಸಂಚಲನ ಪಡೆದುಕೊಂಡಿದೆ. ಸಿಟಿ ರವಿ ನೀಡಿದ ಸಿದ್ರಾಮುಲ್ಲಾ ಖಾನ್ ಹೇಳಿಕೆಯನ್ನೇ ಅಸ್ತ್ರವಾಗಿಸಿದ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವೀಟ್ ಸಮರ ಆರಂಭಿಸಿದೆ. ಇದೀಗ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್ ಈ ಅಸ್ತ್ರಕ್ಕೆ ಇದೀಗ ಬಿಜೆಪಿ ಪ್ರತ್ಯಾಸ್ತ್ರ ಹುಡುಕುತ್ತಿದೆ.
ಸಿದ್ರಾಮುಲ್ಲಾಖಾನ್ ಹೇಳಿಕೆಗೆ ಸಿ.ಟಿ.ರವಿ ಮನೆ ಬಳಿ ಘರ್ಷಣೆ
ಶಾಸಕ ಸಿ.ಟಿ.ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಜರಿದಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ಸಿ.ಟಿ.ರವಿಯವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದಾಗ, ಮಾತಿನ ಚಕಮಕಿ, ಕಲ್ಲು ತೂರಾಟ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಿದ್ರಾಮುಲ್ಲಾ ಖಾನ್ ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆ, ಸಿಟಿ ರವಿ ಮಾತಿಗೆ ಕೆರಳಿದ ಕಾಂಗ್ರೆಸ್
ಸಿದ್ರಾಮುಲ್ಲಾಖಾನ್ ಅಂತ ಹೆಸರು ಬದಲಿಸಿ’
ಸಿದ್ದರಾಮಯ್ಯ ಅವರು ಸಿದ್ರಾಮುಲ್ಲಾಖಾನ್ ಎಂಬುದು ಇಡೀ ಜಗತ್ತಿಗೆ ಗೊತ್ತು. ಹೀಗಾಗಿ, ಸಿದ್ದರಾಮಯ್ಯನವರು ತಮ್ಮ ಹೆಸರನ್ನು ಸಿದ್ರಾಮುಲ್ಲಾ ಖಾನ್ ಎಂದು ಬದಲಾಯಿಸಿಕೊಳ್ಳುವುದು ಒಳಿತು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು. ಅಲ್ಲದೆ, ಇದೇ ವಿಚಾರ ಮುಂದಿಟ್ಟುಕೊಂಡು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ನಿವಾಸಕ್ಕೆ ಮುತ್ತಿಗೆ ಹಾಕಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.