ಬಿಜೆಪಿ ನಾಯಕರು ಜಗದೀಶ ಶೆಟ್ಟರ ಅವರನ್ನು ಸೋಲಿಸಲು ಒಂದಂಶದ ಅಭಿಯಾನ ನಡೆಸಿದ್ದಾರೆ. ಆದರೆ, ಅವರ ಕನಸನ್ನು ಸೆಂಟ್ರಲ್‌ ಕ್ಷೇತ್ರದ ಮತದಾರರು ನನಸು ಮಾಡುವುದಿಲ್ಲ. ಬಿಜೆಪಿಗರು ಏನೇ ಷಡ್ಯಂತ್ರ ಮಾಡಿದರೂ ಅದು ಫಲಿಸದು. ನನ್ನ ಗೆಲವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ (ಮೇ.9) : ಬಿಜೆಪಿ ನಾಯಕರು ಜಗದೀಶ ಶೆಟ್ಟರ ಅವರನ್ನು ಸೋಲಿಸಲು ಒಂದಂಶದ ಅಭಿಯಾನ ನಡೆಸಿದ್ದಾರೆ. ಆದರೆ, ಅವರ ಕನಸನ್ನು ಸೆಂಟ್ರಲ್‌ ಕ್ಷೇತ್ರದ ಮತದಾರರು ನನಸು ಮಾಡುವುದಿಲ್ಲ. ಬಿಜೆಪಿಗರು ಏನೇ ಷಡ್ಯಂತ್ರ ಮಾಡಿದರೂ ಅದು ಫಲಿಸದು. ನನ್ನ ಗೆಲವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish shettar) ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿ.ಎಸ್‌. ಯಡಿಯೂರಪ್ಪ(BS Yadiyurappa) ಅಧಿಕಾರದಿಂದ ಕೆಳಕ್ಕಿಳಿಯಲು ಬಿ.ಎಲ್‌.ಸಂತೋಷ(BL Santosh) ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಟಿಕೆಟ್ ಹಂಚಿಕೆಯಲ್ಲಿ ಬಿಎಲ್ ಸಂತೋಷ್ ಪಾತ್ರ ಎಷ್ಟಿರಲಿದೆ?!

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗ ಬಿಜೆಪಿಗರು ಮನೆ ಮನೆಗೆ ಹೋಗಿ ಪಕ್ಷದ ಹೆಸರು ಹೇಳದೆ, ಹಿಂದುಗಳ ಪರ ಇರುವವರಿಗೆ ಓಟು ಹಾಕಿ ಎನ್ನುತ್ತಿದ್ದಾರೆ. ಸೋಲಿನ ಭೀತಿಯಿಂದ ಬಿಜೆಪಿ ತನ್ನ ಕೊನೆಯ ಅಸ್ತ್ರವಾಗಿ ಜನರ ಧಾರ್ಮಿಕ ಭಾವನೆ ಕೆರಳಿಸುತ್ತಿದೆ. ಆದರೆ, ಹಿಂದೂ ಸಂಘಟನೆಗಳ ಪ್ರಮುಖರೇ ಈ ಸಲ ಬಿಜೆಪಿ ವಿರುದ್ಧ ಇದ್ದಾರೆ ಎಂದರು.

ಬೆಂಬಲಿಗರಿಗೆ ಬೆದರಿಕೆ:

ನನ್ನ ಜೊತೆ ಇರುವವರನ್ನು ಬೆದರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನನ್ನ ಬೆಂಬಲಿಗರನ್ನು ಒತ್ತಾಯಪೂರ್ವಕವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಿಡಿದಿಟ್ಟುಕೊಂಡು ಬೆದರಿಸುವುದು, ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಜೋಶಿ ಅವರೇ ಪ್ರಾಮಾಣಿಕವಾಗಿ ರಾಜಕಾರಣ ಮಾಡಿ ಎಂದು ಎಚ್ಚರಿಸಿದರು.

ಮಾಜಿ ಸಂಸದ ವಿಜಯ ಸಂಕೇಶ್ವರ ತಮ್ಮ ವಿರುದ್ಧ ಮಾತನಾಡುತ್ತಿರುವುದಕ್ಕೆ ಒತ್ತಡವೇ ಕಾರಣ. ಅವರ ಮೇಲೆ ಯಾವುದೋ ಒತ್ತಡ ಹಾಕಿದ್ದಾರೆ ಎಂದು ನಗೆಯಾಡಿದರು.

ಗುಲಾಮಿತನ:

ಬಿ.ಎಲ್‌. ಸಂತೋಷ್‌ ರಾಜ್ಯ ರಾಜಕಾರಣದಲ್ಲಿ ಅನಗತ್ಯ ಮೂಗು ತೂರಿಸುತ್ತಿದ್ದಾರೆ. ಎಲ್ಲರೂ ತಮ್ಮ ಗುಲಾಮರಂತೆ ಇರಬೇಕು ಎಂದು ಬಯಸುತ್ತಾರೆ. ಯಾರು ಅವರು ಹೇಳಿದಂತೆ ಕೇಳುವುದಿಲ್ಲವೋ ಅವರ ರಾಜಕೀಯ ಜೀವನವನ್ನೇ ಮುಗಿಸಿಬಿಡುತ್ತಾರೆ. ಜನ ಬೆಂಬಲ ಇರುವ ಲಿಂಗಾಯತ ನಾಯಕರೇ ಅವರ ಟಾರ್ಗೆಟ್‌. ಅಂಥವರಿಗೆ ಟಿಕೆಟ್‌ ನಿರಾಕರಿಸುತ್ತಾರೆ ಎಂದು ಕಿಡಿಕಾರಿದರು.

ಬಿಎಸ್‌ವೈ ಚುನಾವಣೆಗೇಕೆ?

ಬಿ.ಎಲ್‌. ಸಂತೋಷ ಕುತಂತ್ರದಿಂದಲೇ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕಳೆಗಿಳಿದರು. ಆದರೆ, ವಯಸ್ಸಿನ ಕಾರಣದಿಂದ ಅವರೇ ರಾಜೀನಾಮೆ ನೀಡಿದರು ಎಂದು ಬಿಂಬಿಸಲಾಗಿದೆ. ಯಡಿಯೂರಪ್ಪಗೆ ವಯಸ್ಸಾಗಿದ್ದರೆæ, ಅವರನ್ನೇಕೆ ಚುನಾವಣಾ ಪ್ರಚಾರಕ್ಕೆ ರಾಜ್ಯಾದ್ಯಂತ ಓಡಾಡಿಸುತ್ತೀರಿ? ಎಂದು ಪ್ರಶ್ನಿಸಿದರು.

ಯಾಕೆ ತನಿಖೆ ನಡೆಸಿಲ್ಲ:

ಬಿ.ಎಲ್‌. ಸಂತೋಷ ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ಅದೇ ರೀತಿ ವರ್ಷದ ಹಿಂದೆ ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್‌ ರಾಜಕೀಯ ಜೀವನ ಮುಗಿಸುತ್ತೇವೆ ಎಂದು ಹೇಳಿದ್ದ ನಳಿನ್‌ಕುಮಾರ ಅವರ ಆಡಿಯೋ ವೈರಲ್‌ ಆಗಿತ್ತು. ಪಕ್ಷಕ್ಕೆ ಮುಜುಗರ ತರುವ ಸುದ್ದಿಗಳಿದ್ದರೆ ಅವುಗಳನ್ನು ಫೇಕ್‌ ಎಂದು ಹೇಳುವ ಬಿಜೆಪಿಗರು, ಕೇವಲ ದೂರು ನೀಡಿ ಕೈ ತೊಳೆದುಕೊಳ್ಳುತ್ತಾರೆ. ನಿಜಕ್ಕೂ ಅವು ಫೇಕ್‌ ಅಥವಾ ತಿರುಚಿದ ಸುದ್ದಿಗಳೇ ಆಗಿದ್ದರೆ, ಅವುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ಪ್ರಶ್ನಿಸಿದರು.

ಮೋದಿ ಹೆಸರಲ್ಲಿ ಮತ:

ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕೆ ಮತ ನೀಡಿ ವ್ಯಕ್ತಿಗಲ್ಲ ಎಂದು ನನ್ನ ವಿರುದ್ಧ ಪ್ರಚಾರ ಮಾಡುತ್ತಾರೆ. ಹಾಗಾದರೆ, ಸಂಸತ್ತಿನಿಂದ ಹಿಡಿದು ಗ್ರಾಪಂ ವರೆಗಿನ ಚುನಾವಣೆಗಳಲ್ಲಿ ಪಕ್ಷದ ಹೆಸರಲ್ಲಿ ವೋಟು ಕೇಳದೇ ಪ್ರಧಾನಿ ಮೋದಿ ಹೆಸರಲ್ಲಿ ಏಕೆ ಕೇಳುತ್ತಿದ್ದೀರಿ? ಎಂದು ಪ್ರಶ್ನಿಸಿದರು ಶೆಟ್ಟರ್‌!

ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇಲ್ಲದಾಗಿದೆ. ಪ್ರತಿಯೊಂದಕ್ಕೂ ಮೋದಿ ಅವರನ್ನೇ ಓವರ್‌ ಪ್ರೊಜೆಕ್ಟ್ ಮಾಡಲಾಗುತ್ತಿದೆ. ಎಲ್ಲವೂ ಅವರ ಹೆಸರಿನಲ್ಲಿಯೇ ನಡೆಯುತ್ತಿದೆ. ಅವರು ಹೇಳಿದ್ದೆ ಅಂತಿಮ ಎನ್ನುವ ವಾತಾವರಣ ಬಿಜೆಪಿಯಲ್ಲಿದೆ. ಅದಕ್ಕೆ ನಿನ್ನೆ ಬೆಂಗಳೂರಿನಲ್ಲಿ ನಡೆದ ರೋಡ್‌ ಶೋ ಸಾಕ್ಷಿ, ಆ ರೋಡ್‌ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡರು ಸೇರಿದಂತೆ ಯಾರೊಬ್ಬರೂ ಇರಲಿಲ್ಲ. ಎಲ್ಲರನ್ನೂ ಮೂಲೆಗುಂಪು ಮಾಡಿ ಕೇವಲ ಮೋದಿ ಮಾತ್ರ ವಿಜೃಂಭಿಸಿದ್ದನ್ನು ನೋಡಿದರೆ, ವ್ಯಕ್ತಿ ಮುಖ್ಯನೋ ಪಕ್ಷ ಮುಖ್ಯನೋ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್‌ ನೀಡಿದರು.

ಮುಂದಿನ ಬಾರಿ ಬಿಜೆಪಿ ಸರ್ಕಾರ ಬಂದ್ರೆ ಸಿಎಂ ಸಿ ಟಿ ರವಿನಾ, ಬಿ ಎಲ್ ಸಂತೋಷ್‌..?

ಕಾಂಗ್ರೆಸ್‌ ಬಾಗಿಲಿಗೆ ಬೊಮ್ಮಾಯಿ:

ಹಿಂದೆ ಯಡಿಯೂರಪ್ಪ ಕೆಜೆಪಿ ಕಟ್ಟಲು ಪ್ರೇರಣೆ ಕೊಟ್ಟವರೇ ಬಸವರಾಜ ಬೊಮ್ಮಾಯಿ, ನಿರಾಣಿ ಸೇರಿದಂತೆ ಹಲವರು. ಆದರೆ ಅವರೇ ಅವರೊಂದಿಗೆ ಹೋಗದೇ ಕೈಕೊಟ್ಟಿದ್ದರು. ಬಳಿಕ ಬೊಮ್ಮಾಯಿ, ತಮ್ಮ ರಾಜಕೀಯ ಭವಿಷ್ಯಕ್ಕೆ ಕಾಂಗ್ರೆಸ್‌ ಕದ ತಟ್ಟಿದ್ದರು. ಆಗ ಅವರ ಐಡಿಯಾಲಜಿ ಎಲ್ಲಿ ಹೋಗಿತ್ತು ಎಂದು ಶೆಟ್ಟರ್‌ ಪ್ರಶ್ನಿಸಿದರು.