ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿದ ಡಿಕೆಶಿ ವಿರುದ್ಧ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೆ ಹೇಳಬಾರದಿತ್ತು ಎಂದು ಹೇಳಿದ್ದಾರೆ. ಡಿಕೆಶಿ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಎಂದಿದ್ದಾರೆ.

ಬೆಂಗಳೂರು (ಆ.26): ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ಕ್ಷಮೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

"ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆ ರೀತಿ ಹೇಳಿದ್ದರೆ ತಪ್ಪಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಾಗೆ ಹೇಳಬಾರದಿತ್ತು. ಕಾಂಗ್ರೆಸ್ ಪಕ್ಷವು ಹಲವು ದಶಕಗಳ ಇತಿಹಾಸ ಹೊಂದಿದೆ. ಬಿಜೆಪಿ ತ್ರಿವರ್ಣ ಧ್ವಜವನ್ನು ವಿರೋಧಿಸುವ ಪಕ್ಷ," ಎಂದು ಹರಿಪ್ರಸಾದ್ ಹೇಳಿದರು. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಶೇ. 50-60ರಷ್ಟು ಜನರ ಬೆಂಬಲವಿದೆ ಎಂದು ಅವರು ಹೇಳಿದರು.

ಡಿಕೆಶಿ, ನಾನು ಕಾಂಗ್ರೆಸ್ ಪಕ್ಷ ಕಟ್ಟಿದ್ದಲ್ಲ. ಸುಮಾರು ದಶಕಗಳ ಹಿಂದೆ ಕಟ್ಟಿದ ಪಕ್ಷ ಇದು. ಪ್ರಾರ್ಥನೆಗಳನ್ನ ಹೇಳಿದ್ದು ತಪ್ಪು. ಅಧ್ಯಕ್ಷರಾಗಿ ಹೇಳುವುದು ತಪ್ಪು. ಡಿಸಿಎಂ ಆಗಿ ಹೇಳಿದರೆ ಯಾವುದೇ ತಪ್ಪಿಲ್ಲ. ತ್ರಿವರ್ಣ ಧ್ವಜದ ವಿರುದ್ಧ ಇರುವ ಪಕ್ಷ ಬಿಜೆಪಿ. 50%, 60% ಜನ ಬೆಂಬಲಿಸಿರುವ ಪಕ್ಷ ಕಾಂಗ್ರೆಸ್ ಪಕ್ಷ. ನಾನು ಕಾಂಗ್ರೆಸ್ ಕಾರ್ಯಕರ್ತ ಆ ರೀತಿ ಹೇಳಬಾರದು ಎಂದಿದ್ದಾರೆ.

ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತಾಡಿಲ್ಲ. ಅವರ ಹೇಳಿಕೆ‌ ತದ್ವಿರುದ್ದವಾಗಿರಬಹುದು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಯಾರೂ ಮಾತನಾಡಿರಲಿಲ್ಲ ಎಂದಿದ್ದಾರೆ. ಷ್ಠೆಯ ಬಗ್ಗೆ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಿಷ್ಠೆ ಅನ್ನೋದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಫ್ಲೋ ನಲ್ಲಿ ಬಂದಿದೆ ಡಿಸಿಎಂ ಅಂತ ಹೇಳಿದ್ದಾರೆ.

'ಕಾಂಗ್ರೆಸ್‌ನಲ್ಲಿ ಸಾಫ್ಟ್‌ ಹಿಂದುತ್ವ ಇಲ್ಲ'

ಬಿ.ಕೆ. ಹರಿಪ್ರಸಾದ್ ಅವರು 'ಸಾಫ್ಟ್ ಹಿಂದುತ್ವ'ದ ಬಗ್ಗೆ ಮಾತನಾಡಿದ ಡಿಕೆಶಿ ಹೇಳಿಕೆಯನ್ನು ತಳ್ಳಿಹಾಕಿದರು. "ಕಾಂಗ್ರೆಸ್‌ನಲ್ಲಿ ಸಾಫ್ಟ್‌ ಅಥವಾ ಹಾರ್ಡ್‌ ಹಿಂದುತ್ವ ಎಂದು ಏನೂ ಇಲ್ಲ. ನಾವು ನಾರಾಯಣ ಗುರು, ಕನಕದಾಸ, ಮಹಾತ್ಮ ಗಾಂಧೀಜಿಯವರ ತತ್ತ್ವಗಳನ್ನು ಪಾಲಿಸುತ್ತೇವೆ. ಆದರೆ ಬಿಜೆಪಿಯವರು ನಾಥೂರಾಂ ಗೋಡ್ಸೆ ಮತ್ತು ಸಾವರ್ಕರ್ ಅವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ," ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

'ಧರ್ಮಸ್ಥಳ ವಿವಾದದಲ್ಲಿ ಬಿಜೆಪಿ ಬೇಳೆ ಬೇಯಿಸಿಕೊಳ್ಳುತ್ತಿದೆ'

ಧರ್ಮಸ್ಥಳ ವಿವಾದದ ಬಗ್ಗೆ ಮಾತನಾಡಿದ ಹರಿಪ್ರಸಾದ್, "ಇಬ್ಬರು ವ್ಯಕ್ತಿಗಳಿಂದ ಧರ್ಮಸ್ಥಳದಂತಹ ಪುಣ್ಯಕ್ಷೇತ್ರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಈ ಹಿಂದೆ ಕಟೀಲ್ ಮತ್ತು ಸುನೀಲ್ ಕುಮಾರ್ ಅವರೇ ಈ ವಿವಾದವನ್ನು ಆರಂಭಿಸಿದ್ದರು. ಈಗ ಬಿಜೆಪಿಗರು ನ್ಯಾಯ ಕೊಡಿಸಲು ಹೊರಟಿದ್ದಾರೆ. ಅವರಿಗೆ ಹಸಿವು, ನಿರುದ್ಯೋಗ ಮತ್ತು ಬಡತನದ ಬಗ್ಗೆ ಮಾತನಾಡಲು ಸಮಯವಿಲ್ಲ. ದೇವಸ್ಥಾನ ಮತ್ತು ಮುರಕಲು ಗೋಡೆಗಳ ಬಗ್ಗೆ ಮಾತ್ರ ಮಾತನಾಡುತ್ತಿರುತ್ತಾರೆ" ಎಂದು ಆರೋಪಿಸಿದರು.