ಬಿಹಾರದಿಂದಲೇ ಸಂಸದ ತೇಜಸ್ವಿ ಸೂರ್ಯಗೆ ಅಗ್ನಿಪರೀಕ್ಷೆ ಶುರು
ಇಂದಿನಿಂದಲೇ ಬಿಹಾರ ಪ್ರವಾಸ ಆರಂಭಿಸಲಿರುವ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ | ಬಿಹಾರದಲ್ಲಿ ನಿರುದ್ಯೋಗದಂಥ ಯುವಕರ ಸಮಸ್ಯೆಗಳೇ ಬಿಜೆಪಿ ಸವಾಲು |ನಿರುದ್ಯೋಗದ ಕುರಿತು ಮಾತನಾಡಲು ಒಂದು ದಿನವೂ ಕೆಲಸ ಮಾಡದವರಿಗೆ ನೈತಿಕತೆ ಇಲ್ಲ ಎಂದ ತೇಜಸ್ವಿ
ನವದೆಹಲಿ (ಸೆ. 28): ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಅವರು ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಬಿಹಾರಕ್ಕೆ ಮೊದಲ ಪ್ರವಾಸ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ.
ಸೋಮವಾರವೇ ಬಿಹಾರಕ್ಕೆ ತೆರಳಿ ಪಕ್ಷ ಸಂಘಟನೆಗಿಳಿಯುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ಕನ್ನಡಿಗನೊಬ್ಬನಿಗೆ ಪಕ್ಷದಲ್ಲಿ ಸಿಕ್ಕ ಈ ಹೊಸ ಜವಾಬ್ದಾರಿ, ಅದರ ಬೆನ್ನಿಗೇ ಎದುರಾಗಿರುವ ಸವಾಲುಗಳು ಸೇರಿ ಅನೇಕ ವಿಚಾರಗಳ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದು, ಆ ಕುರಿತ ಪೂರ್ಣ ವಿವರ ಇಲ್ಲಿದೆ.
ಮೊದಲ ಪ್ರವಾಸ ಬಿಹಾರ ಅಂತೀರಿ, ಅಲ್ಲಿ ನಿಮಗೆ ಮೊದಲು ಎದುರಾಗೋದೇ ಯುವಕರಿಗೆ ಸಂಬಂಧಿಸಿದ ನಿರುದ್ಯೋಗ ಮತ್ತಿತರ ಸಮಸ್ಯೆ. ಇದರ ಬಗ್ಗೆ ಏನಂತೀರಿ?
ಬಿಹಾರದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡುವವರು ಅವರ ಜೀವಮಾನವಿಡೀ ಒಂದೇ ಒಂದು ದಿನ ಕೂಡ ಸರಿಯಾಗಿ ಕೆಲಸ ಮಾಡಿದವರಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಈ ರೀತಿ ಮಾತನಾಡುವ ‘ರಾಜಕೀಯ ಯುವರಾಜರು’ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆಲ್ಲ ತಮ್ಮ ನಿರುದ್ಯೋಗವೇ ದೊಡ್ಡ ಸಮಸ್ಯೆಯಾಗಿದೆಯೇ ಹೊರತು ಜನಸಾಮಾನ್ಯರ ನಿರುದ್ಯೋಗವಲ್ಲ. ಒಂದೇ ಒಂದು ದಿನ ಉದ್ಯೋಗ ಮಾಡದವರಿಗೆ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ. ಉದ್ಯೋಗವೇ ಮಾಡದ ವ್ಯಕ್ತಿಗಳಿಂದ ಉದ್ಯೋಗ ಸೃಷ್ಟಿಸಾಧ್ಯವಿಲ್ಲ. ಮೋದಿಯವರು ಅತ್ಯಂತ ತಳಮಟ್ಟದಿಂದ ಬೆಳೆದು ಬಂದವರು, ಅವರಿಗೆ ಬಡತನ, ನಿರುದ್ಯೋಗದ ಬಗ್ಗೆ ಸ್ಪಷ್ಟಅರಿವಿದೆ. ಹಾಗಾಗಿ ಮೋದಿಯವರ ಜೊತೆ ಯುವಕರಿದ್ದಾರೆ.
ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್
ಬಿಹಾರ, ಪಶ್ಚಿಮ ಬಂಗಾಳ ಚುನಾವಣೆ ಹೊತ್ತಲ್ಲಿ ಯುವಮೋರ್ಚಾ ಅಧ್ಯಕ್ಷರಾಗಿ ನಿಮ್ಮ ಮುಂದಿರುವ ಸವಾಲುಗಳೇನು?
ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಿ ಬೆಳೆಯಬೇಕು ಎಂಬುದು ನಮ್ಮ ಪಕ್ಷದ ಘೋಷಣೆ. ಬಿಹಾರ ಇರಲಿ, ಪಶ್ಚಿಮ ಬಂಗಾಳವೇ ಇರಲಿ ಅಥವಾ ದಕ್ಷಿಣ ಭಾರತದ ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳೇ ಆಗಿರಲಿ. ಇಲ್ಲೆಲ್ಲ ನಮ್ಮ ಪಕ್ಷ ಇನ್ನೂ ಬೆಳೆಯಬೇಕಿದೆ. ಯಾವಾಗ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತೋ ಆಗ ಪಕ್ಷ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ ಎಂಬ ಖುಷಿ ಸಿಗುತ್ತದೆ ಎಂದು ನಮ್ಮ ಗೃಹ ಸಚಿವರು ಹಿಂದೊಮ್ಮೆ ಹೇಳಿದ್ದರು. ಪಕ್ಷ ಎಲ್ಲೆಲ್ಲಿ ತಲುಪಿಲ್ಲವೋ ಅಲ್ಲಿಗೆ ಪಕ್ಷವನ್ನು ಕೊಂಡೊಯ್ಯುವುದು, ಯಾರನ್ನು ಪಕ್ಷ ಈವರೆಗೆ ಮುಟ್ಟಿಲ್ಲವೋ ಅವರ ಬಳಿ ಪಕ್ಷವನ್ನು ತಲುಪಿಸುವುದು ಹಾಗೂ ಅತ್ಯಂತ ಸಾಮಾನ್ಯ ವರ್ಗದ ಯುವಕರನ್ನು ಕರೆತಂದು ಅವರಿಂದ ಅತ್ಯಂತ ಶಕ್ತಿಶಾಲಿ ನೇತೃತ್ವವನ್ನು ದೇಶಕ್ಕೆ ನೀಡುವುದು ಬಹುದೊಡ್ಡ ಜವಾಬ್ದಾರಿ ಮತ್ತು ಅವಕಾಶ. ನಮ್ಮ ಪಕ್ಷದ ಯುವ ಕಾರ್ಯಕರ್ತರ ಜೊತೆ ಸೇರಿ ನಾನು ಈ ಕೆಲ ಮಾಡುತ್ತೇನೆ ಅನ್ನುವ ನಂಬಿಕೆ ಇದೆ.
ಹೊಸ ಜವಾಬ್ದಾರಿ ಕುರಿತು ನಿಮ್ಮ ಮೊದಲ ಪ್ರತಿಕ್ರಿಯೆ ಏನು?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಘಟನಾ ಕಾರ್ಯದರ್ಶಿ ಬಿ.ಎಲ….ಸಂತೋಷ್ ಇವರೆಲ್ಲ ನನ್ನಂಥ ಸಾಮಾನ್ಯ ಕಾರ್ಯಕರ್ತನ ಮೇಲೆ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಸಂತೋಷದ ವಿಷಯ ಅಂದ್ರೆ ಇದೇ ಮೊದಲ ಬಾರಿಗೆ ಒಬ್ಬ ಕನ್ನಡಿಗನಿಗೆ ಯುವಮೋರ್ಚಾ ಅಧ್ಯಕ್ಷ ಪಟ್ಟಸಿಕ್ಕಿರುವುದು. ಇದೆಲ್ಲ ಕನ್ನಡಿಗರ ಆಶೀರ್ವಾದ. ಕನ್ನಡ ನಾಡು, ನುಡಿ, ಜಲ ಇವುಗಳನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಕನ್ನಡದ ಯುವಕರು ಒಟ್ಟಿಗೆ ಸೇರಿ ಮಾಡುವಂಥ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶಕೊಟ್ಟಿದ್ದಕ್ಕೆ ವಿಶೇಷವಾಗಿ ಪಕ್ಷಕ್ಕೆ, ಕನ್ನಡಿಗರಿಗೆ ಧನ್ಯವಾದಗಳು.
ಅಮಿತ್ ಶಾ ಭೇಟಿಯಾದ ತೇಜಸ್ವಿ ಸೂರ್ಯ: ಮಹತ್ವದ ಚರ್ಚೆ..!
ಬಿಜೆಪಿ ರಾಷ್ಟ್ರೀಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕನ್ನಡಿಗರಿಗೆ ಅತಿ ಹೆಚ್ಚು ಸ್ಥಾನ ಸಿಕ್ಕಿದೆ. ಇದನ್ನು ಕರ್ನಾಟಕ ಬಿಜೆಪಿ ಹೇಗೆ ನೋಡಬೇಕು?
ಬಿಜೆಪಿ, ಆರೆಸ್ಸೆಸ್ನಲ್ಲಿ ರಾಷ್ಟ್ರದ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಕನ್ನಡಿಗರ ಯೋಗದಾನ ಇದ್ದೇ ಇದೆ. ಈ ಬಾರಿಯ ವಿಶೇಷ ಅಂದರೆ ದಕ್ಷಿಣ ರಾಜ್ಯಗಳ ಪ್ರತಿನಿಧಿಗಳು ರಾಷ್ಟ್ರೀಯ ತಂಡದಲ್ಲಿರುವಂತೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬಿಜೆಪಿ ಮತ್ತಷ್ಟುಬೆಳೆಯಲು ಅವಕಾಶ ಇದೆ.
- ಡೆಲ್ಲಿ ಮಂಜು