'ಬೈ ಎಲೆಕ್ಷನ್ ಬಳಿಕ ಅಡ್ರಸ್ ಕಳೆದುಕೊಳ್ಳುವ ಕಾಂಗ್ರೆಸ್ : 3 ಕ್ಷೇತ್ರಗಳಲ್ಲಿ ಜಯ ಖಚಿತ'
ಜನರು ಚುನಾವಣೆಯಲ್ಲಿ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. 17 ರ ನಂತರ ಬೆಳಗಾವಿ, ಬಸವಕಲ್ಯಾಣ ಮತ್ತು ಮಸ್ಕಿಯಲ್ಲಿ ಕಾಂಗ್ರೆಸ್ ಅಡ್ರಸ್ ಕಳೆದುಕೊಳ್ಳಲಿದ್ದು, ಈ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟುಗೆಲ್ಲಲಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸಿಂಧನೂರು (ಏ.11): ಎಲ್ಲಾ ಕಡೆ ಬಿಜೆಪಿ ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಅಡ್ರಸ್ ಕಳೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಶನಿವಾರ ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್ ಏನೇನೋ ಮಾತನಾಡುತ್ತಿದೆ. ಲೋಕಸಭೆಯಲ್ಲಿ ಅವರ ಯೋಗ್ಯತೆಗೆ ಒಂದು ಸ್ಥಾನ ಗೆದ್ದಿದ್ದಾರೆ. ಮೊನ್ನೆ ನಡೆದ ಉಪಚುನಾವಣೆಯಲ್ಲಿ 15ರಲ್ಲಿ 12 ಕಡೆ ಬಿಜೆಪಿ ಗೆದ್ದಿದೆ. ಜನರು ಚುನಾವಣೆಯಲ್ಲಿ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. 17 ರ ನಂತರ ಬೆಳಗಾವಿ, ಬಸವಕಲ್ಯಾಣ ಮತ್ತು ಮಸ್ಕಿಯಲ್ಲಿ ಕಾಂಗ್ರೆಸ್ ಅಡ್ರಸ್ ಕಳೆದುಕೊಳ್ಳಲಿದ್ದು, ಈ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟುಗೆಲ್ಲಲಿದೆ.
ಶೀಘ್ರ ರಾಜ್ಯದ ನಾಯಕತ್ವ ಬದಲಾವಣೆ : ಯಾರಿಗೆ ಸಿಎಂ ಪಟ್ಟ..? ..
ಭ್ರಮೆಯಲ್ಲಿರುವ ಕಾಂಗ್ರೆಸ್: ಕಾಂಗ್ರೆಸ್ ಹಣ, ಅಧಿಕಾರ, ತೋಳ್ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಹಾಲು ಉತ್ಪಾದಕರಿಗೆ ಪೋ›ತ್ಸಾಹಧನ ಕೊಟ್ಟಿದ್ದು ಬಿಜೆಪಿ ಸರ್ಕಾರವಾಗಿದೆ. ಯಡಿಯೂರಪ್ಪ ಕೊಟ್ಟಭರವಸೆಯನ್ನು ಎಂದೂ ತಪ್ಪಿಲ್ಲ. ಕ್ಷೇತ್ರಕ್ಕೆ ಏನು ಕೇಳುತ್ತಿರೋ ಅದನ್ನು ಪ್ರಾಮಾಣಿಕವಾಗಿ ಕೊಡುತ್ತೇನೆ. ಯಡಿಯೂರಪ್ಪ ಏನಾದರು ಹೇಳಬೇಕಾದರೆ ಜವಾಬ್ದಾರಿಯಿಂದ ಹೇಳುತ್ತಾನೆ. ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆÜ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಜಾತಿಗೊತ್ತಿಲ್ಲ: ನನಗೆ ಜಾತಿಗೊತ್ತಿಲ್ಲ. ಎಲ್ಲರನ್ನು ಒಂದೇ ತಾಯಿ ಮಕ್ಕಳಂತೆ ಕಾಣುತ್ತೇನೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ. ಕಳೆದ ಹಲವು ವರ್ಷಗಳಿಂದ ರಾಜ್ಯದ ಅಭಿವೃದ್ಧಿ ಮಾಡಿದ್ದೇವೆ. ನೀರಾವರಿಗೆ ಆದ್ಯತೆ ನೀಡಲಾಗಿದೆ. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿ ಕ್ವಿಂಟಲ್ಗೆ 1850, ಜೋಳಕ್ಕೆ 2620 ಕೊಟ್ಟು ಖರೀದಿಸಲಾಗುವುದು. ಇಲ್ಲಿ ಸಿದ್ಧ ಉಡುಪು ಘಟಕ ಸ್ಥಾಪನೆಗೆ ಮಹಿಳೆಯರು ಮನವಿ ಮಾಡಿದ್ದಾರೆ. ಮೊದಲ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ನಂತರ ಘಟಕ ಸ್ಥಾಪನೆಗೆ ಮುಂದೆ ಬಂದವರಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.
ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಚುನಾವಣೆ ಬಳಿಕ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲಾಗುವುದು. ಇದರ ಜೊತೆಗೆ ಈ ಭಾಗದ ಕನಕ ನಾಲಾ ಯೋಜನೆ ಮೂಲಕ ನೀರಾವರಿ ಕಲ್ಪಿಸಲಾಗುವುದು. ಎರಡು ವರ್ಷದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯನ್ನಾಗಿ ಮಾಡುತ್ತೇವೆ. ಉಪಚುನಾವಣೆ ಆದ ಮೇಲೆ 50 ಸಾವಿರ ಜನರನ್ನು ಸೇರಿಸಿ ವಿಜಯೋತ್ಸವ ಮಾಡೋಣ. ಅಲ್ಲಿ ಮಸ್ಕಿ ಕ್ಷೇತ್ರಕ್ಕೆ ಏನು ಬೇಕೋ ಪಟ್ಟಿಮಾಡಿಕೊಡಿ ಎಲ್ಲವನ್ನು ನಾವು ಮಾಡಿಕೊಡುವುದಾಗಿ ಭರವಸೆ ನೀಡಿದರು.