ಒಂದು ವೇಳೆ, ಬಿಜೆಪಿ ಅಧಿಕಾರಾವಧಿಯಲ್ಲಿಯೂ ಹಗರಣ ನಡೆದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವುಗಳ ಬಗ್ಗೆ ತನಿಖೆ ನಡೆಸಲಿ. ಸುಮ್ಮನೆ ಆರೋಪ ಮಾಡಿ, ಪ್ರತಿಪಕ್ಷಗಳನ್ನು ಬೆದರಿಸುವ ಅಗತ್ಯವಿಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು. 

ಬೆಂಗಳೂರು (ಜು.20): ಒಂದು ವೇಳೆ, ಬಿಜೆಪಿ ಅಧಿಕಾರಾವಧಿಯಲ್ಲಿಯೂ ಹಗರಣ ನಡೆದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವುಗಳ ಬಗ್ಗೆ ತನಿಖೆ ನಡೆಸಲಿ. ಸುಮ್ಮನೆ ಆರೋಪ ಮಾಡಿ, ಪ್ರತಿಪಕ್ಷಗಳನ್ನು ಬೆದರಿಸುವ ಅಗತ್ಯವಿಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ಸಂಪೂರ್ಣ ಸರ್ಕಾರವೇ ಭಾಗಿಯಾಗಿದೆ. 

Add Asianetnews Kannada as a Preferred SourcegooglePreferred

ಆದರೆ, ಸದನದಲ್ಲಿ ಸಿಎಂ ಸ್ಪಷ್ಟ ಉತ್ತರ ನೀಡದೆ ಪ್ರತಿಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನಾಗೇಂದ್ರಗೂ, ಹಗರಣಕ್ಕೂ ಸಂಬಂಧವಿಲ್ಲವೆಂದಾದ ಮೇಲೆ ಸಚಿವ ಸ್ಥಾನಕ್ಕೆ ಅವರಿಂದ ಯಾಕೆ ರಾಜೀನಾಮೆ ಪಡೆದಿರಿ?. ವಾರಕ್ಕೂ ಮೊದಲು ಹಗರಣಕ್ಕೂ, ನಮಗೂ ಸಂಬಂಧವಿಲ್ಲವೆಂದು ಏಕೆ ಹೇಳಿದಿರಿ?. ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು. ಹಣಕಾಸು ಇಲಾಖೆ ಹೊಂದಿರುವ ಸಿಎಂ ಬುಡಕ್ಕೆ ಹಗರಣ ಬಂದಿದೆ ಎಂದರು. ಬಿಜೆಪಿ ಕಾಲದಲ್ಲಿಯೂ ಹಗರಣ ನಡೆದಿದ್ದು ತನಿಖೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. 

ಯಾವ ಸಂದರ್ಭದಲ್ಲಿ, ಯಾವ ಹಗರಣ ನಡೆದಿದೆ ಎಂಬುದನ್ನು ತನಿಖೆ ಮಾಡಲಿ. ಈ ವಿಚಾರದಲ್ಲಿ ಅವರನ್ನು ಯಾರು ತಡೆದಿದ್ದಾರೆ. ನಮ್ಮ ಪ್ರಶ್ನೆಗೆ ಸಿಎಂ ಸಮರ್ಪಕ ಉತ್ತರ ನೀಡಿಲ್ಲ. ನಮಗೆ ಬೆದರಿಕೆ ಹಾಕುವ ಅವಶ್ಯಕತೆ ಇಲ್ಲ. ವಾಲ್ಮೀಕಿ ಹಗರಣ ಸರ್ಕಾರದ ಬುಡಕ್ಕೆ ಬರುತ್ತಿರುವ ಅರಿವು ಸಿಎಂಗಿದೆ. ವಾಲ್ಮೀಕಿ, ಮುಡಾ ಹಗರಣದಿಂದ ಸರ್ಕಾರ, ಸಿಎಂ ಆತಂಕದಲ್ಲಿದ್ದಾರೆ. ಸದನದಲ್ಲಿ ಸಿಎಂ ಅವರು ನಾಗೇಂದ್ರ ಅವರ ಹೆಸರು ಬಿಟ್ಟು ಡೆತ್ ನೋಟ್ ಓದುವ ಪ್ರಯತ್ನ ಮಾಡಿದ್ದಾರೆ. 

Valimiki Scam: ಸಿದ್ದರಾಮಯ್ಯ ರಾಜೀನಾಮೆ ಸನ್ನಿಹಿತ: ವಿಜಯೇಂದ್ರ ಭವಿಷ್ಯ

ನಾಗೇಂದ್ರ ಅವರನ್ನು ಬಚಾವ್ ಮಾಡುವ ಉದ್ದೇಶ ಹೊಂದಿದ್ದಾರೆ. ವಾಲ್ಮೀಕಿ ಹಗರಣವನ್ನು ಅಧಿಕಾರಿಗಳ ತಲೆಗೆ ಹೊರಿಸುವ ಯತ್ನ ನಡೆದಿದೆ ಎಂದು ವಿಜಯೇಂದ್ರ ದೂರಿದರು. ಇದಕ್ಕೂ ಮೊದಲು ಬಳ್ಳಾರಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಜನತೆಗೆ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಅಧಿಕಾರಕ್ಕೆ ಬಂದ 15 ತಿಂಗಳಲ್ಲೇ ಜನತೆ ಆ ಪಕ್ಷದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನದ್ದು ಭ್ರಷ್ಟ, ಬೇಜವಾಬ್ದಾರಿ ಸರ್ಕಾರ ಎಂದು ಟೀಕಿಸಿದರು.