ಹಿಂದುಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಬಾಲಿಶತನ ತೋರಿದೆ.

ಬೆಂಗಳೂರು (ಜ.19): ಹಿಂದುಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಬಾಲಿಶತನ ತೋರಿದೆ. ಮಾತಿನಲ್ಲಿ ಹಿಡಿತವಿಲ್ಲದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು ಕಾಂಗ್ರೆಸ್‌ನ ಅವನತಿಗೆ ಅಡಿಗಲ್ಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ರಾಮ ಸೀತೆ ಎಲ್ಲರೂ ಟೂರಿಂಗ್‌ ಟಾಕೀಸ್‌ ಬೊಂಬೆಗಳಂತೆಯೇ ಕಾಣುತ್ತಾರೆ. ಹಿಂದೆ ಇವರೇ ರಾಮನನ್ನು ಕಾಲ್ಪನಿಕ ವ್ಯಕ್ತಿ, ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಗುಜರಾತ್‌ನ ಸೋಮನಾಥ ದೇವಾಲಯ ಪುನರುಜ್ಜೀವನಗೊಂಡಾಗ ಅದಕ್ಕೆ ಪ್ರಧಾನಿ ನೆಹರು ಹೋಗಲಿಲ್ಲ. ಮುಸ್ಲಿಂರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸುಪ್ರಿಂಕೋರ್ಟ್‌ ತೀರ್ಪಿಗೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಮಂದಿರ ಒಂದೇ ಇಟ್ಟುಕೊಂಡು ಬಿಜೆಪಿ ಮುಖಂಡರಿಂದ ರಾಜಕಾರಣ: ಸಚಿವ ಎಚ್.ಕೆ.ಪಾಟೀಲ್‌

ದೇಗುಲ ಸ್ವಚ್ಛಗೊಳಿಸಿದ ವಿಜಯೇಂದ್ರ, ಅಶೋಕ್‌: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಭಾನುವಾರ ವಿವಿಧೆಡೆ ದೇಗುಲಗಳ ಸ್ವಚ್ಛತಾ ಕಾರ್ಯ ನಡೆಸಿದರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹುಚ್ಚೂರಾಯಸ್ವಾಮಿ ದೇಗಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬೆಂಗಳೂರಿನ ಜಯನಗರದ ವಿನಾಯಕ ದೇಗುಲದಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು.

ಕಾಂಗ್ರೆಸ್‌ಗೆ ಶ್ರೀರಾಮನೇ ಬುದ್ದಿ ಕಲಿಸಲಿ: ಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಹೋಗದಿರುವುದು ದುರ್ಬುದ್ಧಿ ಹಾಗೂ ಕುತಂತ್ರ ರಾಜಕಾರಣ. ಇವರಿಗೆ ಆ ಶ್ರೀರಾಮನೇ ಬುದ್ಧಿ ಕಲಿಸುತ್ತಾನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಜನರು ಶ್ರೀರಾಮ ಮಂದಿರದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಯುತ್ತಿರುವಾಗ, ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ತನ್ನ ದುರ್ಬುದ್ಧಿ ಹಾಗೂ ಕುತಂತ್ರ ರಾಜಕಾರಣ ತೋರಿದೆ ಎಂದು ಆಕ್ರೋಶ ಹೊರಹಾಕಿದರು.

ಐದು ಸಂಪುಟಗಳು ಎಚ್ಕೆ ರಾಜಕೀಯ ಪರಿಶ್ರಮ, ತ್ಯಾಗ, ತಾಳ್ಮೆ ಸಂಕೇತ: ಯು.ಟಿ.ಖಾದರ್

ಮುಸ್ಲಿಮರ ಓಲೈಕೆಗಾಗಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅವರಾದರೂ ನಮ್ಮ ಕೈ ಹಿಡಿಯಲಿ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ಇದು ಕಾಂಗ್ರೆಸ್‌ಗೆ ಹಿಂದಿನಿಂದಲೇ ಬೆಳೆದು ಬಂದ ಚಾಳಿ ಎಂದು ಹರಿಹಾಯ್ದರು. ಹಿಂದೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುವಾಗ ರಾಮ ಹುಟ್ಟಿರುವುದಕ್ಕೆ ಜನ್ಮ ಪ್ರಮಾಣ ಪತ್ರ ಇದೆಯೇ ಎಂದು ಕಾಂಗ್ರೆಸ್‌ ಕೇಳಿತ್ತು. ರಾಮಜನ್ಮಭೂಮಿಯ ಕುರುಹುಗಳ ಬಗ್ಗೆ ಸಂದೇಹವನ್ನೂ ವ್ಯಕ್ತಪಡಿಸಿದ್ದರು. ರಾಮಾಯಾಣ ಕಾಲ್ಪನಿಕ, ಅದು ನಡೆದೇ ಇಲ್ಲ ಎಂದು ಅವರು ವಾದಿಸಿದ್ದರು. ಹಿಂದೂಗಳನ್ನು ಕಂಡರೆ ಕಾಂಗ್ರೆಸ್‌ಗೆ ಮೊದಲಿಂದಲೂ ಅಲರ್ಜಿ. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಈ ರೀತಿ ತೀರ್ಮಾನ ಕೈಗೊಂಡಿರುವುದರಿಂದ ಹಿಂದೂಗಳನ್ನು ಕಡೆಗಣಿಸಿದಂತಾಗಿದೆ ಎಂದರು.