ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್​ ನಡೆಯ ಕುರಿತು ಎಂಎಲ್​ಸಿ ಎಚ್​. ವಿಶ್ವನಾಥ್ ಲೇವಡಿ ಮಾಡಿದ್ದಾರೆ. 

ಮೈಸೂರು (ಡಿ. 16): ಜೆಡಿಎಸ್ ಒಂದು ಸಲ ಕಾಂಗ್ರೆಸ್ ಇನ್ನೊಂದು ಸಲ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದು, ಇದಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. 

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿ ಇಂದು (ಬುಧವಾರ) ಮಾತನಾಡಿದ ಅವರು, ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಆ ಮಗುವಿಗೆ ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಮಗು ಹೋಗುತ್ತದೆ. ಹೀಗಾಗಿ, ಅವರ ಬಗ್ಗೆ ಹೆಚ್ಚು ಮಾತನಾಡೋದು ಬೇಡ ವ್ಯಂಗ್ಯವಾಡಿದರು.

ಇದೇ ವೇಳೆ ವಿಧಾನಪರಿಷತ್‌ನಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಸಾರ್ವಭೌಮ‌ ಸದನದ ಬಾಗಿಲನ್ನು ಕಾಂಗ್ರೆಸ್​ನವರು ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ? ನಿನ್ನೆ ಇಡೀ ರಾಜ್ಯ ಸದನವನ್ನು ವೇದನೆಯಿಂದ ನೋಡಿದೆ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದರು. 

ಗ್ಲಾಸ್ ಪುಡಿ ಪುಡಿ, ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಹೊಡೆದಾಟ!

ಭಾರತದ ಎಲ್ಲ ಸದನಗಳನ್ನು ನಮ್ಮ ವಿಧಾನ ಪರಿಷತ್‌ ಮೀರಿ‌ ನಿಂತಿದೆ. ತನ್ನದೇ ಆದ ಸಂಸ್ಕೃತಿಯನ್ನು ಇಡೀ ದೇಶದಲ್ಲಿ ಬಿಂಬಿಸಿದೆ. ಅಂತಹ ವಿಧಾನ ಪರಿಷತ್‌ನ ವಿಶಿಷ್ಟ ಸ್ಥಾನವನ್ನು ನಾವೆಲ್ಲರೂ ಸೇರಿ ಕಳೆದಿದ್ದೇವೆ. ಯಾರು ಜನತಂತ್ರ ವ್ಯವಸ್ಥೆಯ ಬಗ್ಗೆ ಭಾಷಣ ಮಾಡಿದರೋ ಅವರೇ ನಿನ್ನೆ ಅದನ್ನ ಸದನದಲ್ಲಿ ಅದನ್ನ ಕೊಚ್ಚಿ ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸದನವನ್ನ ನಾವು ದೇವಾಲಯ ಅಂದಿದ್ದೆವು. ಅದಕ್ಕೆ ಪ್ರಧಾನಿ ಲೋಕಸಭೆಗೆ ಹಣೆಯಿಟ್ಟು ನಮಸ್ಕಾರ ಮಾಡಿ ಹೋಗಿದ್ದರು. ಅಂತಹ ಸಾರ್ವಭೌಮ ಸದನದ ಬಾಗಿಲನ್ನು ಕಾಂಗ್ರೆಸ್​ನವರು ಬೂಟಿನ‌ ಕಾಲಿನಲ್ಲಿ ಒದ್ದರು. ಭಾರತಾಂಬೆ ನಮ್ಮನ್ನು ಕ್ಷಮಿಸಲಿ, ಅಧಿಕಾರ ಕೊಟ್ಟ ಜನರು ನಮ್ಮನ್ನು ಕ್ಷಮಿಸಲಿ. ನಿನ್ನೆಯ ಘಟನೆ ಖಂಡನೀಯವಾದುದು ಎಂದರು.