ಆಸ್ಪತ್ರೆಯಲ್ಲಿದ್ದ ಆನಂದ್ ಸಿಂಗ್ ಭೇಟಿಗೆ ಬಿಜೆಪಿ ಶಾಸಕ ಹೋಗಿದ್ದು ಹೇಗೆ..?
ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕರೋರ್ವರು ಭೇಟಿ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಬೆಂಗಳೂರು : ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಮಾರಾಮಾರಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಪುರ ಶಾಸಕ ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ ನಾಯಕರ ಕಣ್ತಪ್ಪಿಸಿ ಬಿಜೆಪಿ ಶಾಸಕ ರಾಜುಗೌಡ ಭೇಟಿ ಮಾಡಲು ಪ್ರಯತ್ನಿಸಿದ ಘಟನೆ ಭಾನುವಾರ ನಡೆಯಿತು.
ಆನಂದ್ ಸಿಂಗ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದ ರಾಜುಗೌಡ ಅವರಿಗೆ ಭೇಟಿಯನ್ನು ನಿರಾಕರಿಸಲಾಗಿದೆ. ಆಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ನೆಪದಲ್ಲಿ ಆಸ್ಪತ್ರೆಯೊಳಗೆ ದಾಖಲಾದ ರಾಜುಗೌಡ ಎಲ್ಲರ ಕಣ್ತಪ್ಪಿಸಿ ಆರನೇ ಅಂತಸ್ತಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅವರ ಕೋಣೆಯವರೆಗೂ ಹೋಗಿದ್ದಾರೆ. ಈ ವೇಳೆ ಅವರನ್ನು ತಡೆದ ಕಾಂಗ್ರೆಸ್ ನಾಯಕರು ಆನಂದ್ ಸಿಂಗ್ ಭೇಟಿಗೆ ಅವಕಾಶ ನೀಡದೆ ಅವರನ್ನು ಕಳುಹಿಸಿದ್ದಾರೆ.
ಹೀಗಂತ ಖುದ್ದು ರಾಜುಗೌಡ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆನಂದ್ ಸಿಂಗ್ ಅವರನ್ನು ಭೇಟಿ ಮಾಡಲು ವಿಫಲ ಪ್ರಯತ್ನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ನಾನು ಸಿಬ್ಬಂದಿಯ ಕಣ್ತಪ್ಪಿಸಿ ಆರನೇ ಮಹಡಿಯಲ್ಲಿ ಆನಂದ್ ಸಿಂಗ್ ಚಿಕಿತ್ಸೆ ಪಡೆಯುತ್ತಿರುವ ಕೊಠಡಿವರೆಗೂ ತೆರಳಿದ್ದೆ. ಆದರೆ, ಅಲ್ಲಿ ಮತ್ತೆ ನನಗೆ ಅವಕಾಶ ನೀಡಲಿಲ್ಲ ಎಂದು ವಿವರಿಸಿದರು.
ಆಸ್ಪತ್ರೆಯಲ್ಲಿ ಆನಂದ್ ಸಿಂಗ್ ಭೇಟಿಗೆ ಹೋದರೆ ವೈದ್ಯರು ಅವಕಾಶ ನೀಡಲಿಲ್ಲ. ಅವರು ಯಾವ ವಾರ್ಡ್ನಲ್ಲಿದ್ದಾರೆ ಎಲ್ಲಿದ್ದಾರೆ ಎಂಬುದನ್ನೂ ತಿಳಿಸಲಿಲ್ಲ. ಅವರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಗುಪ್ತವಾಗಿ ಇಟ್ಟಿರುವುದು ನೋಡಿದರೆ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಬೆಳಗ್ಗೆ ನನಗೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ರಕ್ತ ಪರೀಕ್ಷೆಗೆ ಒಳಗಾಗುತ್ತೇನೆ ಎಂದು ಹೇಳಿ ಆಸ್ಪತ್ರೆಗೆ ಪ್ರವೇಶಿಸಿ ರಕ್ತ ಪರೀಕ್ಷೆಯನ್ನೂ ಮಾಡಿಸಿಕೊಂಡೆ. ಬಳಿಕ ಸಾಕಷ್ಟುಕಷ್ಟಪಟ್ಟು 6ನೇ ಮಹಡಿವರೆಗೆ ತೆರಳಿದೆ. ಆದರೆ, ಅಲ್ಲೂ ನನಗೆ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ನಾನು ಬಿಜೆಪಿ ಶಾಸಕನಾಗಿ ಬಂದಿಲ್ಲ. ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ ಎಂದರೂ ಅವಕಾಶ ನೀಡಲಿಲ್ಲ ಎಂದರು.