ನನಗಿಂತಲೂ 10 ಪಟ್ಟು ಪ್ರಬಲ ಹುಲಿಗಳು ನನ್ನ ಕುಟುಂಬದಲ್ಲಿದ್ದಾರೆ: ಸಾಹುಕಾರ ಅಚ್ಚರಿ ಹೇಳಿಕೆ
* ರಮೇಶ್ ಜಾರಕಿಹೊಳಿ ಅಬ್ಬರದ ಮಾತು
* ನನಗಿಂತ 10 ಪಟ್ಟು ಹುಲಿಗಳು ನಮ್ಮ ಕುಟುಂಬದಲ್ಲಿದ್ದಾರೆ ಎಂದ ರಮೇಶ್ ಜಾರಕಿಹೊಳಿ
* ಶಾಸಕ ಸ್ಥಾನಕ್ಕೆ ರಾಜೀನಾಮೆ ಬಗ್ಗೆಯೂ ಪ್ರತಿಕ್ರಿಯೆ
ಬೆಳಗಾವಿ, (ಜೂನ್.25): ನನಗಿಂತ 10 ಪಟ್ಟು ಹುಲಿಗಳು ನಮ್ಮ ಕುಟುಂಬದಲ್ಲಿದ್ದಾರೆ. ಶಾಸಕ ಸ್ಥಾನಕ್ಕೆ ನನ್ನ ಸಹೋದರರು ಇದ್ದಾರೆ. ಮಕ್ಕಳಿದ್ದಾರೆ. ಇನ್ನೂ ಬಹಳಷ್ಟು ಹುಲಿಗಳಿದ್ದಾರೆ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ಇಂದು (ಶುಕ್ರವಾರ) ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಮುಂಬೈಗೆ ಹೋಗಿದ್ದು, ರಾಜೀನಾಮೆ ಕೊಡುವುದು ನಿಜ. ಆದರೆ ಯಾವಾಗ ರಾಜೀನಾಮೆ ಕೊಡುತ್ತೇನೆಂದು ಹೇಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್: ಖಚತಪಡಿಸಿದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿಯನ್ನು ಮೂಲೆಗುಂಪು ಮಾಡಿದರೆ ಮುಗೀತು ಎಂದು ಅಂದುಕೊಂಡಿದ್ದರು. ಆದರೆ ಹಾಗೆ ಅಂದುಕೊಂಡಿದ್ದರೆ ಅದರ ನಮ್ಮಲ್ಲಿ ಹತ್ತು ಪಟ್ಟು ಹುಲಿಗಳಿದ್ದೇವೆ, ನಾವು ರೆಡಿ ಇದ್ದೇವೆ. ಅಸಮಾಧಾನ ಕೆಲವೊಂದು ಬಹಿರಂಗಪಡಿಸಲು ಬರುವುದಿಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆ, ಕಾನೂನು ತೊಡಕುಗಳಿವೆ. ಕೆಲವು ದಿವಸ ಟೈಮ್ ಕೊಡಿ ಮಾತಾಡುತ್ತೇನೆ ಎಂದು ವಿವರಿಸಿದರು. ದೇವರು ನನಗೆ ಸರ್ಕಾರ ತೆಗೆದು, ಸರ್ಕಾರ ರಚಿಸುವ ಶಕ್ತಿ ನೀಡಿದ್ದಾನೆ. ನಾನು ಸಚಿವ ಸ್ಥಾನಕ್ಕಾಗಿ ರಾಜಕೀಯ ಮಾಡುವಷ್ಟು ಸಣ್ಣವನಲ್ಲ ಎಂದರು.
ಇನ್ನು 8 ರಿಂದ 10 ದಿನ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ಅಲ್ಲಿಯವರೆಗೂ ನಾನು ಏನನ್ನೂ ಮಾತನಾಡುವುದಿಲ್ಲ. ನಾನು ಮನಸ್ಸು ನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ ಎಂದು ಒಪ್ಪಿಕೊಂಡರು.
ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನಿಸಿದಲ್ಲಿ ಈ ಬಗ್ಗೆ ಮುಂಬೈನಲ್ಲಿ ತೀರ್ಮಾನಿಸುತ್ತೇನೆ. ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡುತ್ತೇನೆ. ಆದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು, ನಾನೇಕೆ ಆ ಪಕ್ಷಕ್ಕೆ ಹೋಗಲಿ ? ಎಂದು ಪ್ರಶ್ನಿಸಿರುವ ಅವರು, ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.