* ನೂತನ ಸಿಎಂ ಬೊಮ್ಮಾಯಿಗೆ ಬಸನಗೌಡ ಪಾಟೀಲ್​ ಯತ್ನಾಳ್ ಅಭಿನಂದನೆ * ಗಡ್ಡ ತೆಗೆದಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್* ಪಕ್ಷದಲ್ಲಿ ಮೊದಲ ಹಂತದ ಬದಲಾವಣೆಯಾಗಿದೆ ಎಂದ ಬಿಜೆಪಿ ಶಾಸಕ 

ಬೆಂಗಳೂರು, (ಜು.28): ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ​ ಬೊಮ್ಮಾಯಿಯವರಿಗೆ ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ಅಭಿನಂದನೆ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯಪುರದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಗಡ್ಡ ತೆಗೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗಡ್ಡ ಬಿಟ್ಟಾಗ ಶಿವಾಜಿಯಾಗಿದ್ದೆ, ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ ಎಂದರು.

ಸಿಎಂ ಆದ ಮೊದಲ ದಿನವೇ ಮಹತ್ವದ ಘೋಷಣೆ ಮಾಡಿದ ಬಸವರಾಜ ಬೊಮ್ಮಾಯಿ..!

ನೂತನ ಸಿಎಂ, ಬಿಎಸ್​ವೈ ಅವರ ನೆರಳಾಗಿ ಕೆಲಸ ಮಾಡ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ. ಬಿಎಸ್​ವೈ ಅವರ ನೆರಳಾಗಿ ಕೆಲಸ ಮಾಡಲ್ಲ, ಬಿಜೆಪಿ ಶಾಸಕರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ನನ್ನ ಪ್ರಾಮಾಣಿಕತೆ, ಸಾಮರ್ಥ್ಯ, ಸಂಘಟನೆ ನೋಡಿ ಅಟಲ್​ ಬಿಹಾರಿ ವಾಜಿಪೇಯಿ ಅವರು ನನಗೆ ಕೇಂದ್ರದಲ್ಲಿ ಸ್ಥಾನ ನೀಡಿದ್ದರು. ಹೈಕಮಾಂಡ್​ ಆದೇಶ ಮಾಡಿದರೆ ನಾನು ಕೂಡ ಸಚಿವನಾಗುತ್ತೇನೆ, ಹೈಕಮಾಂಡ್​ನ ಆದೇಶಗಳಿಗೆ ಬದ್ಧನಾಗಿರ್ತೇನೆ ಎಂದು ವಿಶ್ವಾಸ ವ್ಯಕ್ತಡಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದಲ್ಲಿ ಮೊದಲ ಹಂತದ ಬದಲಾವಣೆ ಪ್ರಾರಂಭವಾಗಿದೆ. ನಾನು ಯಾವುದೇ ಹುದ್ದೆಗಳಿಗೆ ಲಾಬಿ ಮಾಡುವವನಲ್ಲ. ಮಂತ್ರಿಗಿರಿಗಾಗಿ ಯಾರ ಮನೆ ಬಾಗಿಲಿಗೂ ಹೋಗುವವನಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್‌ವೈ ಮತ್ತು ಅವರ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಯಡಿಯೂರಪ್ಪನವರನ್ನ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು.