* ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ* ನನ್ನಿಂದಲೇ ಬಿಜೆಪಿ ಎನ್ನುವವರನ್ನೇ ಹೈಕಮಾಂಡ್ ಮನೆಯಲ್ಲಿ ಕೂರಿಸಿದೆ* ವಿಜಯೇಂದ್ರಗೆ ಯತ್ನಾಳ್ ಟಾಂಗ್

ವಿಜಯಪುರ, (ಏ.11): ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶತಾಯಗತಾಯವಾಗಿ ಬೊಮ್ಮಾಯಿ ಸಂಪುಟ ಸೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಹೈಕಮಾಂಡ್‌ ಗಮನಸೆಳೆಯಲು ವಿಜಯೇಂದ್ರ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಮೊನ್ನೇ ನಡೆದ ಡಾ. ಶಿವಕುಮಾರ ಸ್ವಾಮೀಜಿ ಜಯಂತೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಅಚ್ಚುಕಟ್ಟಾಗಿ ನಿಭಾಯಿಸಿರುವುದಕ್ಕೆ ಇದಕ್ಕೆ ಪೂರಕವಾಗಿದೆ. ಇದರ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಚ್ಚು ಸ್ವಾಮಿ ಬೆನ್ನತ್ತಿದ್ರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ, ಬೊಮ್ಮಾಯಿಗೆ ಯತ್ನಾಳ್ ಖಡಕ್ ಎಚ್ಚರಿಕೆ

ಭಾನುವಾರ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನಿಂದಲೇ ಬಿಜೆಪಿ ಎನ್ನುವವರನ್ನೇ ಹೈಕಮಾಂಡ್ ಮನೆಯಲ್ಲಿ ಕೂಡಿಸಿದೆ, ಇನ್ನು ವಿಜಯೇಂದ್ರ ಯಾವ ಗಿಡದ ತಪ್ಪಲು? ವಿಜಯೇಂದ್ರ ಮೊನ್ನೆ ಮೊನ್ನೆ ನಮ್ಮ ಮುಂದೆಯೇ ಹುಟ್ಟಿದ ಹುಡುಗ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಇನ್ನು ಮುಂದೆ ವಂಶಪಾರಂಪರೆಗೆ ಅವಕಾಶವಿಲ್ಲ, ಪರಿವಾರ ವಾದ್ ಬಿಜೆಪಿಯಲ್ಲಿ ನಡೆಯಲ್ಲ ಎಂದು ಪ್ರಧಾನ ಮಂತ್ರಿಗಳು ನಾಲ್ಕೈದು ಬಾರಿ ಹೇಳಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್ ಕೊಡುವ ಕಾಲ ಬಿಜೆಪಿಯಲ್ಲಿ ಹೋಯ್ತು. ಮೊನ್ನೆ ಉತ್ತರ ಪ್ರದೇಶದಲ್ಲಿ ಈ ಪ್ರಯೋಗ ಆಗಿದೆ ಎಂದು ವಿಜಯೇಂದ್ರಗೆ ಟಾಂಗ್ ಕೊಟ್ಟರು.

ಅಪ್ಪನ ಜಾಗ ನನಗೆ ಬೇಕು, ಅಪ್ಪನ ಸ್ಥಳ ನನಗೆ ಕೊಡಿ ಎನ್ನುವುದು ಇನ್ನು ಮುಂದೆ ಯಾವುದೂ ಉಳಿಯುವುದಿಲ್ಲ ಎಂಬ ವಿಶ್ವಾಸ ನನಗಿದೆ. ಆ ಭ್ರಮೆಯಲ್ಲಿ ಇರುವುದಕ್ಕಿಂದ ಈಗೇನಾದರೂ ಉದ್ಯೋಗ ಮಾಡಿಕೊಂಡಿದ್ದರೆ ಅದರಲ್ಲಿ‌ ಮುಂದುವರೆಯುವುದು ಒಳ್ಳೆಯದು ಎಂದು ಯತ್ನಾಳ್ ಹೇಳಿದರು.

ಬಿಜೆಪಿಯಲ್ಲಿ ಹಲವು ಬದಲಾವಣೆ ಸುದ್ದಿಗಳು ಹರಿದಾಡುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ದೆಹಲಿ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿತ್ತು.

ರಾಜ್ಯ ಸಚಿವ ಸಂಪುಟಕ್ಕೆ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳಿ ಎಂದು ಕೇಂದ್ರ ಹೈಕಮಾಂಡ್ ನ್ನಾಗಲಿ ಅಥವಾ ರಾಜ್ಯದ ಬಿಜೆಪಿ ನಾಯಕರನ್ನಾಗಲಿ ತಾವು ಕೇಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ.

ಹುಚ್ಚು ಸ್ವಾಮಿ ಬೆನ್ನು ಹತ್ತಿದರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ ಹೊಡಿತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಎಚ್ಚರಿಕೆ ಕೊಟ್ಟಿದ್ದಾರೆ.

ವಿಜಯಪುರದ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದ ಪಂಚಮಸಾಲಿ ಮೀಸಲಾತಿಗಾಗಿ ನಡೆದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿಗಳೇ ಶಿಗ್ಗಾಂವಿ ಕ್ಷೇತ್ರದಲ್ಲಿ 50 ಸಾವಿರ ಮತದಾರರು ಪಂಚಮಸಾಲಿ ಸಮುದಾಯದವರಿದ್ದೇವೆ. ಆ ಸ್ವಾಮಿಯ ಬೆನ್ನು ಹತ್ತಿದರೆ ನಿಮಗೆ ಸೋಲು ಕಾಣಬೇಕಾಗುತ್ತದೆ ಎಂದು ಪರೋಕ್ಷವಾಗಿ ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಬಾರದೆಂದು‌ ಯತ್ನಾಳ್ ಹೇಳಿದರು.