Asianet Suvarna News Asianet Suvarna News

Hangal By Poll Result: ಬಿಎಸ್‌ವೈ, ವಿಜಯೇಂದ್ರಗೆ ಮನ್ನಣೆ ಸಿಗದೆ ಬಿಜೆಪಿ ಸೋತಿತೇ?

* ಬಿಎಸ್‌ವೈ, ವಿಜಯೇಂದ್ರಗೆ ಮನ್ನಣೆ ಸಿಗದೆ ಬಿಜೆಪಿ ಸೋತಿತೇ?
* ಹಾನಗಲ್‌ ಸೋಲಿನ ಬಗ್ಗೆ ಪಕ್ಷದಲ್ಲಿ ಚರ್ಚೆ
* ಲಿಂಗಾಯತ ಮತದಾರರು ಬಿಜೆಪಿ ಪರ ಪೂರ್ಣ ನಿಲ್ಲದ ಅನುಮಾನ
* ಪಕ್ಷದೊಳಗಿನ ಗೊಂದಲದಿಂದ ಮತದಾರರಿಗೆ ತಪ್ಪು ಸಂದೇಶ ರವಾನೆ?

BJP loosed in Hangal likely ignoring BS Yediyurappa and His Son By Vijayendra rbj
Author
Bengaluru, First Published Nov 3, 2021, 1:29 AM IST

ಬೆಂಗಳೂರು, (ನ.03): ಸಿಂದಗಿ (Sindagi) ಹಾಗೂ ಹಾನಗಲ್‌ (Hangal) ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ (By Election Result) ಕಾಂಗ್ರೆಸ್‌ ಪಾಲಿಗೆ ಹೊಸ ಚೈತನ್ಯ ನೀಡಿದೆ. ಮುಖ್ಯವಾಗಿ ಮುಖ್ಯಮಂತ್ರಿಯವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರ ಶಿಗ್ಗಾಂವ್‌ಗೆ ಅಂಟಿಕೊಂಡಿರುವ ಹಾನಗಲ್‌ ಕ್ಷೇತ್ರದ ಗೆಲುವು ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ತವರು ಜಿಲ್ಲೆಯಲ್ಲೇ ಸೋಲು ಕಂಡಿರುವ ಬಗ್ಗೆ ಆಡಳಿತಾರೂಢ ಬಿಜೆಪಿ (BJP) ಪಾಳೆಯದಲ್ಲಿ ಗಂಭೀರ ಚರ್ಚೆ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಹಾಗೂ ಅವರ ಪುತ್ರರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವಲ್ಲಿ ಉಂಟಾದ ಗೊಂದಲವೂ ಸೋಲಿಗೆ ಮತ್ತೊಂದು ಕಾರಣ ಎಂಬ ಮಾತು ಪಕ್ಷದಿಂದಲೇ ಕೇಳಿಬರುತ್ತಿದೆ.

Hangal, Sindagi By Poll Result:ಸಿಎಂ ಕ್ಷೇತ್ರದಲ್ಲಿ ತಂತ್ರ ಸಫಲ, ಕಾಂಗ್ರೆಸ್‌ಗೆ ಟಾನಿಕ್‌

ಈ ಗೊಂದಲವೇ ಹಾನಗಲ್‌ ಕ್ಷೇತ್ರದ ಮತದಾರರಲ್ಲಿ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಿತು. ಲಿಂಗಾಯತ ಮತದಾರರೇ ಪೂರ್ಣ ಪ್ರಮಾಣದಲ್ಲಿ ಪಕ್ಷವನ್ನು ಬೆಂಬಲಿಸಲಿಲ್ಲ ಎಂಬ ಚರ್ಚೆ ಬಿಜೆಪಿಯಲ್ಲೀಗ ನಡೆದಿದೆ.

ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗುವ ವೇಳೆಯೇ ವಿಜಯೇಂದ್ರ ಅವರು ಯಾವುದಾದರೊಂದು ಕ್ಷೇತ್ರದ ಉಸ್ತುವಾರಿ ತಂಡದಲ್ಲಿ ಇದ್ದೇ ಇರುತ್ತಾರೆ ಎಂಬ ನಿರೀಕ್ಷೆ ಇತ್ತು. ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಬೇಕು ಎಂಬ ಒತ್ತಾಸೆ ಅವರ ಹಾಗೂ ಯಡಿಯೂರಪ್ಪ ಬೆಂಬಲಿಗರಲ್ಲಿ ಇತ್ತು. ಆದರೆ, ಎರಡೂ ಕ್ಷೇತ್ರಗಳ ಉಸ್ತುವಾರಿ ತಂಡ ಪ್ರಕಟಿಸಿದರೂ ವಿಜಯೇಂದ್ರ ಅವರಿಗೆ ಜವಾಬ್ದಾರಿ ನೀಡಿರಲಿಲ್ಲ.

ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

ಪಕ್ಷದ ಈ ನಡೆ ಬಗ್ಗೆ ಯಡಿಯೂರಪ್ಪ ಬೆಂಬಲಿಗರಲ್ಲಿ ತೀವ್ರ ನಿರಾಸೆ ಉಂಟು ಮಾಡಿದ್ದಲ್ಲದೆ ಆಕ್ರೋಶವನ್ನೂ ಮೂಡಿಸಿತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಅಸಮಾಧಾನ ಹೊರಬಿದ್ದ ಬಳಿಕ ವಿಜಯೇಂದ್ರ ಅವರನ್ನು ಹಾನಗಲ್‌ ಕ್ಷೇತ್ರದ ಉಸ್ತುವಾರಿ ತಂಡದಲ್ಲಿ ಸೇರ್ಪಡೆಗೊಳಿಸಲಾಯಿತು.

ಇದರೊಂದಿಗೆ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹಲವು ಬಾರಿ ಘೋಷಣೆ ಮಾಡಿದ್ದರೂ ಅದಕ್ಕೆ ಪರೋಕ್ಷವಾಗಿ ಅಡ್ಡಗಾಲು ಹಾಕುವ ಪ್ರಯತ್ನ ಬಿಜೆಪಿಯಿಂದಲೇ ನಡೆಯಿತು. ಇದು ಕೂಡ ಯಡಿಯೂರಪ್ಪ ಬೆಂಬಲಿಗರಲ್ಲಿ ಬೇಸರ ತಂದಿತ್ತು. ಜತೆಗೆ ಯಡಿಯೂರಪ್ಪ ಅವರ ಆಪ್ತ ಸಹಾಯಕನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬೆಳವಣಿಗೆಯೂ ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಈ ಎಲ್ಲ ಅಂಶಗಳೂ ಹಾನಗಲ್‌ ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿರುವ ಯಡಿಯೂರಪ್ಪ ಅಭಿಮಾನಿಗಳು ತುಸು ಮುನಿಸಿಕೊಳ್ಳುವಂತೆ ಮಾಡಿದವು. ಪರಿಣಾಮ ಯಡಿಯೂರಪ್ಪ ಅವರು ಪ್ರಚಾರ ನಡೆಸಿದರೂ ಅವರ ಅಭಿಮಾನಿಗಳು ಮಾತ್ರ ಬಿಜೆಪಿಯ ಕೈಹಿಡಿಯದೆ ಕಾಂಗ್ರೆಸ್ಸಿನ ಕೈಹಿಡಿದರು ಎಂದು ಮೂಲಗಳು ತಿಳಿಸಿವೆ.

ಮತಗಳ ವಿವರ
ಸಿಂದಗಿಯಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,865 ಮತ ಲಭಿಸಿದ್ದು, ಅವರು 31,185 ಮತಗಳ ಅಂತರದಿಂದ ವಿಜಯ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ 62,680 ಮತ ಲಭ್ಯವಾಗಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳಿಗೆ ತೃಪ್ತಿಯಾಗಬೇಕಾಗಿ ಬಂದಿದೆ. ನೋಟಾಗೆ 1,031 ಮತಗಳ ಚಲಾವಣೆ ಆಗಿದೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಒಟ್ಟು 87,490 ಮತಗಳು ಲಭಿಸಿದ್ದು, 7,373 ಮತಗಳ ಅಂತರದಿಂದ ಗೆಲುವು ಸಿಕ್ಕಿದೆ.  ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 80,117 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್​ ಅಭ್ಯರ್ಥಿ ನಿಯಾಜ್ ಶೇಖ್​ಗೆ ಕೇವಲ 927 ಮತಗಳು ಸಿಕ್ಕಿವೆ. ನೋಟಾಗೆ 529 ಮತಗಳ ಬಿದ್ದಿವೆ.

Follow Us:
Download App:
  • android
  • ios