ಕೇಂದ್ರ ಸರ್ಕಾರ 5.80 ಕೋಟಿ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ ಎಂದು ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಬಿಪಿಎಲ್ ಕಾರ್ಡ್ ರದ್ದತಿಯನ್ನು ಪ್ರಶ್ನಿಸುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.21): ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುತ್ತಿರುವುದನ್ನು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಕೇಂದ್ರದ ಮೋದಿ ಸರಕಾರವೇ ಡಿಜಿಟಲೀಕರಣದ ಹೆಸರಿನಲ್ಲಿ 5.80 ಕೋಟಿ ರೇಷನ್ ಕಾರ್ಡ್ ರದ್ದುಪಡಿಸಿದೆ. ಬಿಜೆಪಿ ನಾಯಕರೇಕೆ ಈಗ ಗಪ್-ಚುಪ್ ಆಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರಶ್ನಿಸಿದ್ದಾರೆ.

ತಮ್ಮ ಈ ಎಕ್ಸ್ ಸಂದೇಶದಲ್ಲಿ ಅವರು ರಾಜ್ಯ ಬಿಜೆಪಿಯ ವಿಜಯೇಂದ್ರ, ಅಶೋಕ, ಬಸನಗೌಡ ಪಾಟೀಲ ಯತ್ನಾಳ ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಟ್ಯಾಗ್ ಮಾಡಿದ್ದಾರೆ. 

ರಾಜ್ಯ ಬಿಜೆಪಿ ಇಬ್ಭಾಗವಾಗಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಮತ್ತು ಅವರ ತಂಡ ಪ್ರಯತ್ನಿಸುತ್ತಿದೆ. ಈಗ ವಿನಾ ಕಾರಣ ಪಡಿತರ ಚೀಟಿ ಹೆಸರಿನಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿಯು ನಿಜವಾದ ಬಡವರಿಗೆ ಸಿಗಬೇಕು. ಹೀಗಾಗಿಯೇ ರಾಜ್ಯ ಸರ್ಕಾರವು ಶ್ರೀಮಂತರು, ತೆರಿಗೆ ಪಾವತಿದಾರರು ಮತ್ತು ಸರಕಾರಿ ಅಧಿಕಾರಿಗಳ ಬಳಿ‌ ಇರುವ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುತ್ತಿದೆ. ರಾಜ್ಯ ಬಿಜೆಪಿ ನಾಯಕರು ಇದರ ವಿರುದ್ಧ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ನಡೆಸಲು ಆಗದೆ ಬಿಪಿಎಲ್‌ ಕಾರ್ಡ್‌ ರದ್ದು: ಜಗದೀಶ ಶೆಟ್ಟರ್

ಮುಂದುವರೆದು, ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ವಿಜಯೇಂದ್ರ, ಅಶೋಕ, ಯತ್ನಾಳ ಅವರಿಗೆ ದೆಹಲಿಗೆ ಹೋಗಿ ಪ್ರಧಾನಿ ಮನೆಯ ಎದುರು ಧರಣಿ ಕೂರುವ ಧೈರ್ಯ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

Scroll to load tweet…