Asianet Suvarna News Asianet Suvarna News

ಬ್ಯಾರಿ ಅಕಾಡೆಮಿಯಿಂದ ರಹೀಂ ಪದಚ್ಯುತಿ: ಬಿಜೆಪಿ ಮುಸ್ಲಿಂ ಮುಖಂಡನ ವಿರುದ್ಧ ಕೇಸರಿ ಪಡೆಯ ಅಸಮಾಧಾನ?

*  ಕೆಲ ಬಿಜೆಪಿಗರ ದೂರಿನ ಹಿನ್ನೆಲೆಯಲ್ಲಿ ರಹೀಂ ಪದಚ್ಯುತಿ 
*  ಅಕಾಡೆಮಿ ಕಟ್ಟಡಕ್ಕೆ ಜಾಗ, ಹಣ ಎಲ್ಲವನ್ನೂ ಕೊಟ್ಟಿದ್ದು ಸರ್ಕಾರ
*  ನಳಿನ್ ನೇತೃತ್ವದಲ್ಲಿ ನಡೆದಿತ್ತು ಸಭೆ 

BJP Leaders Resentment Against BJP Rahim Uchil in Mangaluru grg
Author
Bengaluru, First Published Apr 8, 2022, 10:22 AM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಏ.08):  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ(Karnataka Beary Sahithya Academy) ರಹೀಂ ಉಚ್ಚಿಲ್ ಪದಚ್ಯುತಿಗೆ ಮಂಗಳೂರಿನ ಕೆಲ ಸ್ಥಳೀಯ ಬಿಜೆಪಿ ನಾಯಕರು ನೀಡಿದ ದೂರುಗಳು ಕಾರಣ ಎಂಬ ಚರ್ಚೆಗಳು ಎದ್ದಿದ್ದು, ಬಿಜೆಪಿ ಮುಸ್ಲಿಂ(Muslim) ಮುಖಂಡನ ವಿರುದ್ಧ ಕೇಸರಿ ಪಡೆಯ ಕೆಲ ಸ್ಥಳೀಯ ನಾಯಕರೇ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಆದರೆ ಒಬ್ಬ ಮುಸ್ಲಿಮನಾಗಿ ಬಿಜೆಪಿ ಮತ್ತು ಸಂಘ ಪರಿವಾರದ ಪ್ರತೀ ನಿಲುವುಗಳ ಪರವಾಗಿ ನಿಂತಿದ್ದ ರಹೀಂ ಉಚ್ಚಿಲ್(Rahim Uchil) ಪದಚ್ಯುತಿ ಬಗ್ಗೆ ಪಕ್ಷದಲ್ಲೇ ಅಪಸ್ವರ ಕೇಳಿ ಬಂದಿದೆ. 

ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್, ಮಂಗಳೂರಿನ(Mangaluru) ತೊಕ್ಕೊಟ್ಟು ಬಳಿ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾಗಿದ್ದೇ ಅವರ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗಿದೆ. ಕೆಲ ಬಿಜೆಪಿ(BJP) ನಾಯಕರು ಹಾಗೂ ಸಂಘ ಪರಿವಾರದ ವಿರೋಧದ ನಡುವೆಯೂ ರಹೀಂ ತೊಕ್ಕೊಟ್ಟಿನಲ್ಲಿ ಭವನ ನಿರ್ಮಿಸಲು ಮುಂದಾಗಿದ್ದರು. ಆದರೆ ಎರಡು ಬಾರಿ ಶಂಕುಸ್ಥಾಪನೆ ನಡೆಸಿದಾಗಲೂ ಸ್ಥಳೀಯ ಬಿಜೆಪಿಗರು ಮತ್ತು ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿ ತಡೆ ಒಡ್ಡಿತ್ತು. ಅಲ್ಲದೇ ಎರಡು ಬಾರಿಯೂ ಶಂಕುಸ್ಥಾಪನೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌(Nalin Kumar Kateel) ಮತ್ತು ಸಚಿವ ಸುನೀಲ್ ಕುಮಾರ್(Sunil Kumar) ದೂರ ಉಳಿದಿದ್ದರು.‌ 

Mangaluru: ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌ ದಿಢೀರ್‌ ವಜಾ

ತೊಕ್ಕೊಟ್ಟಿನಲ್ಲಿ ಮೊದಲು ಆಗಬೇಕಾಗಿರೋದು ಉಳ್ಳಾಲದ ವೀರರಾಣಿ ಅಬ್ಬಕ್ಕ ಭವನ ಎಂದಿದ್ದ ಸಂಘಪರಿವಾರ, ಕೆಲವರು ಅಬ್ಬಕ್ಕ ಭವನ ಬಲಿ ಕೊಟ್ಟು, ಬ್ಯಾರಿ ಅಕಾಡೆಮಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿತ್ತು.‌ ಇದೇ ಕಾರಣಕ್ಕೆ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ವಿರುದ್ಧ ಕನ್ನಡ, ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಬಳಿಯೇ ಸ್ಥಳೀಯ ಬಿಜೆಪಿಗರು ದೂರು ನೀಡಿದ್ದರು‌ ಎ‌ನ್ನಲಾಗಿದೆ. ಹೀಗಾಗಿ ಕೆಲ ಬಿಜೆಪಿಗರ ದೂರಿನ ಹಿನ್ನೆಲೆಯಲ್ಲಿ ರಹೀಂ ಪದಚ್ಯುತಿಯಾಗಿದೆ ಎಂಬ ಅನುಮಾನ ಎದ್ದಿದೆ. ಹಿಜಾಬ್(Hijab), ಮುಸ್ಲಿಮರ ನಿರ್ಬಂಧ, ಹಲಾಲ್ ಸೇರಿ ಹಲವು ವಿಚಾರದಲ್ಲಿ ರಹೀಂ ಬಿಜೆಪಿ ಪರ ನಿಂತು ಮಾಧ್ಯಮ ಚರ್ಚೆಗಳಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದರೂ ಸಚಿವ ಸುನೀಲ್ ಸೂಚನೆಯಂತೆ ರಹೀಂಗೆ ಗೇಟ್ ಪಾಸ್ ನೀಡಲಾಗಿದೆ ಎನ್ನಲಾಗಿದೆ.

ನಳಿನ್ ನೇತೃತ್ವದಲ್ಲಿ ನಡೆದಿತ್ತು ಸಭೆ!

ಈ‌ ನಡುವೆ ಎರಡು ಬಾರಿ ಶಿಲನ್ಯಾಸಕ್ಕೂ ಸ್ಥಳೀಯ ಬಿಜೆಪಿ ಮತ್ತು ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಹೀಂ ಈ ಬಗ್ಗೆ ಆರ್‌ಎಸ್‌ಎಸ್‌(RSS) ಪ್ರಮುಖರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಹೀಗಾಗಿ ಈ ವಿವಾದ ಇತ್ಯರ್ಥಕ್ಕೆ ಮಂಗಳೂರಿನ ಆರ್ ಎಸ್ ಎಸ್ ಪ್ರಮುಖರ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಿ ಕೆಲ ದಿನಗಳ ಹಿಂದೆ ಸಮಸ್ಯೆ ಇತ್ಯರ್ಥವಾಗಿತ್ತು ಎನ್ನಲಾಗಿದೆ. ತೊಕ್ಕೊಟ್ಟು ಬಳಿ ಜಾಗ ಬಿಟ್ಟು ಮತ್ತೊಂದೆಡೆ ಪರ್ಯಾಯ ಜಾಗದಲ್ಲಿ ಬ್ಯಾರಿ ಭವನ ನಿರ್ಮಿಸಲು ನಿರ್ಧಾರಕ್ಕೆ ಬರಲಾಗಿತ್ತು ಎನ್ನಲಾಗಿದೆ. ಆದರೆ ಈ ಸಭೆಗೆ ಸಚಿವ ಸುನೀಲ್ ಕುಮಾರ್ ಬಂದಿಲ್ಲ ಎನ್ನುತ್ತಿವೆ ಮೂಲಗಳು. ಇದಾದ ಕೆಲ ದಿನಗಳಲ್ಲೇ ಈ ಪದಚ್ಯುತಿ ಆದೇಶ ಬಂದಿದೆ.

ಹೊರಟ್ಟಿ ಬೆನ್ನಲ್ಲೇ ಜೆಡಿಎಸ್‌ನ ಬಹಳಷ್ಟು ನಾಯಕರು ಬಿಜೆಪಿ ಕಡೆ ಒಲವು, ಮಾಜಿ ಸಿಎಂ ಸ್ಫೋಟಕ ಸುಳಿವು

'ಬ್ಯಾರಿ ಅಕಾಡೆಮಿ ಕಟ್ಟಡ ಕೆಲಸ ಸರ್ಕಾರದ ಮಾರ್ಗದರ್ಶನದಲ್ಲಿ ನಡೆದಿತ್ತು'

ಪದಚ್ಯುತಿ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ರಹೀಂ ಉಚ್ಚಿಲ್ ಹೇಳಿಕೆ ನೀಡಿದ್ದಾರೆ. ಅಕಾಡೆಮಿ ಕಟ್ಟಡಕ್ಕೆ ಜಾಗ, ಹಣ ಎಲ್ಲವನ್ನೂ ಕೊಟ್ಟಿದ್ದು ಸರ್ಕಾರ. ಹೀಗಿದ್ದ ಮೇಲೂ ಅದಕ್ಕೆ ವಿರೋಧ ಮಾಡಿದ್ದು ಬಿಜೆಪಿ ಮತ್ತು ಸಂಘಪರಿವಾರ ಅಲ್ಲ. ಅದರ ನಂತರ ನಳಿನ್ ಕಟೀಲ್ ‌ಮತ್ತು ಸಂಘದ ಪ್ರಮುಖರ ಜೊತೆ ಸಭೆ ಮಾಡಿದ್ದೇವೆ. ಆ ಜಾಗ ಬಿಟ್ಟು ಬದಲಿ ಜಾಗದಲ್ಲಿ ಅಕಾಡೆಮಿ ಕಟ್ಟಡ ‌ಕಟ್ಟೋ ನಿರ್ಧಾರ ಆಗಿತ್ತು. ಸಂಘಪರಿವಾರದ ಪ್ರಮುಖರ ಮೂಲಕ ಸಮಸ್ಯೆ ಬಗೆಹರಿದಿದೆ.‌ ಪಕ್ಷಕ್ಕೆ‌ ಮುಜುಗರವಾಗಲು ಅದನ್ನ ಮಾಡಿದ್ದು ಜಿಲ್ಲಾಡಳಿತ, ಪಕ್ಷಕ್ಕೆ ಏನೂ ಆಗಲ್ಲ. ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದೇ ಎಲ್ಲಾ ಕೆಲಸ ಮಾಡಿದ್ದೇನೆ. ಸಚಿವ ಸುನೀಲ್ ಕುಮಾರ್ ಗೆ ಕರೆ ಮಾಡಿದೆ, ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ರಾಜ್ಯಾಧ್ಯಕ್ಷರಿಗೂ ಮಾಡಿದೆ, ಅವರು ಕೂಡ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಉಳಿದವರು ಅವರ ಜೊತೆ ಮಾತನಾಡಿದ ರೀತಿಯಲ್ಲಿ ಏನೋ ಆಗಿದೆ. ಏನೋ ನಡೆದು ಹೋಗಿದೆ, ಆತ್ಮಾವಲೋಕನ ಆಗ್ತಾ ಇದೆ. ಆದರೆ ನಾನು ಪಕ್ಷದ ಕಾರ್ಯಕರ್ತ, ನನಗೆ ರಾಷ್ಟ್ರೀಯವಾದಿಯಾಗಿಯೇ ಇರಬೇಕು. ಪಕ್ಷದ ಮೇಲೆ ಸಿಟ್ಟಾಗೋದು, ನಾಯಕರ ಮೇಲೆ ಮುನಿಸಿಕೊಳ್ಳೋದು ಮಾಡಲ್ಲ.‌ನನಗೆ ಈವರೆಗೆ ಪದಚ್ಯುತಿಗೆ ಕಾರಣ ಗೊತ್ತಾಗಿಲ್ಲ, ನಾಯಕರಲ್ಲೂ ಕೇಳಿದ್ದೇನೆ. ಸರ್ಕಾರದ ವಿರುದ್ಧ ಕಾರ್ಯಕ್ರಮ ಅಥವಾ ಹೇಳಿಕೆ ನನ್ನಿಂದ ನಡೆದಿಲ್ಲ. ಹಾಗೊಂದು ವೇಳೆ ‌ನಡೆದಿದ್ದರೆ ಅದನ್ನ ನನ್ನ ಗಮನಕ್ಕೆ ತರಬಹುದಿತ್ತು ಎಂದಿದ್ದಾರೆ.
 

Follow Us:
Download App:
  • android
  • ios