*  ವಜಾಗೆ ಕಾರಣ ತಿಳಿಸಿದರೆ ಉತ್ತಮವಿತ್ತು, ತಪ್ಪಾಗಿದ್ದರೆ ಆತ್ಮಾವಲೋಕನ ಮಾಡುತ್ತೇನೆ*  ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ * ಮುಂದೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಿದರೂ ಅದನ್ನು ಸ್ವೀಕರಿಸಲು ಸಿದ್ಧ 

ಮಂಗಳೂರು(ಏ.07): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ(Karnataka Beary Sahithya Academy) ಅಧ್ಯಕ್ಷ ರಹೀಂ ಉಚ್ಚಿಲ್‌(Rahim Uchil) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿಯಿಂದ ಪದಚ್ಯುತಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರಿಗೆ ಇನ್ನೂ ಆರು ತಿಂಗಳು ಅಧಿಕಾರ ಅವಧಿ ಇತ್ತು. ಈಗ ಅದಕ್ಕೂ ಮೊದಲೇ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಲಾಗಿಲ್ಲ. ಇವರನ್ನು ಬ್ಯಾರಿ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ತಕ್ಷಣ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ಒಂದು ಸಾಲಿನ ಒಕ್ಕಣೆಯ ಅಧಿಸೂಚನೆ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ(Department of Kannada and Culture) ಅಧೀನ ಕಾರ್ಯದರ್ಶಿ ಕೆ.ಆರ್‌.ರಮೇಶ್‌(KR Ramesh) ಹೆಸರಿನಲ್ಲಿ ಮಂಗಳವಾರವೇ ಜಾರಿಗೊಳಿಸಲಾಗಿದೆ.

Noise pollution ಮೈಕ್ ಬಳಸುತ್ತಿರುವ ಮಸೀದಿ, ಚರ್ಚ್, ದೇಗುಲ ಸೇರಿ 1001 ಕೇಂದ್ರಕ್ಕೆ ಮಂಗಳೂರು ಕಮಿಷನರ್ ನೋಟಿಸ್!

ಕಾರಣ ಹೇಳಿಲ್ಲ:

ಬ್ಯಾರಿ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿರುವುದಕ್ಕೆ ರಹೀಂ ಉಚ್ಚಿಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣ ನೀಡದೇ ಅಧ್ಯಕ್ಷ ಸ್ಥಾನದಿಂದ ತೆಗೆದಿದ್ದಾರೆ. ನನಗೆ ಇದುವರೆಗೂ ಯಾಕಾಗಿ ಪದಚ್ಯುತಗೊಳಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ನನ್ನ ತಪ್ಪು ಏನಾದರೂ ಇದ್ದರೆ ಅದನ್ನು ತಿಳಿಸಿದರೆ ಆತ್ಮಾವಲೋಕನ ಮಾಡಲು ಸಾಧ್ಯವಾಗುತ್ತದೆ. ಅದು ಬಿಟ್ಟು ಕಾರಣವಿಲ್ಲದೆ ತೆಗೆದು ಹಾಕಿರುವುದು ಯಾಕಾಗಿ ಎಂದು ಅರ್ಥವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

2 ಬಾರಿ ಅಧ್ಯಕ್ಷ:

ಈ ಹಿಂದೆ ಯಡಿಯೂರಪ್ಪ(BS Yediyurappa) ಸಿಎಂ ಆಗಿದ್ದಾಗ ರಹೀಂ ಉಚ್ಚಿಲ್‌ ಮೊದಲ ಬಾರಿ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದರು. ಆಗ 11 ತಿಂಗಳ ಕಾಲ ಅಧಿಕಾರದಲ್ಲಿದ್ದರು. ಬಳಿಕ ಮತ್ತೆ ಯಡಿಯೂರಪ್ಪ ಸಿಎಂ ಆದಾಗಲೂ ರಹೀಂ ಉಚ್ಚಿಲ್‌ ಅಕಾಡೆಮಿ ಅಧ್ಯಕ್ಷಗಾದಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಎರಡೂವರೆ ವರ್ಷ ಅಧಿಕಾರ ಅನುಭವಿಸಿದ್ದಾರೆ. ಅದಕ್ಕೂ ಮೊದಲು ಬಿಜೆಪಿ(BJP) ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದರು.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಸ್ಪತ್ರೆಗೆ ದಾಖಲು

ಇನ್ನಷ್ಟು ಅಕಾಡೆಮಿಗಳ ಅಧ್ಯಕ್ಷರ ವಜಾ?

ಬ್ಯಾರಿ ಅಕಾಡೆಮಿ ಸೇರಿದಂತೆ ಕೆಲವು ಅಕಾಡೆಮಿಗಳಿಂದ ಅಧ್ಯಕ್ಷರನ್ನು ಅವಧಿಗೂ ಮುನ್ನವೇ ಪದಚ್ಯುತಗೊಳಿಸುವ ಸರ್ಕಾರದ ನಿರ್ಧಾರ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅಂತಹ ಹಾಲಿ ಅಧ್ಯಕ್ಷರನ್ನು ಜವಾಬ್ದಾರಿಯಿಂದ ಕೆಳಗೆ ಇಳಿಸಿ, ಪಕ್ಷದ ಕಾರ್ಯಕರ್ತರಿಗೆ ಒಂದು ವರ್ಷದ ಮಟ್ಟಿಗೆ ಅಧ್ಯಕ್ಷರಾಗಿ ಅವಕಾಶ ಕಲ್ಪಿಸುವುದು ಪಕ್ಷದ ಹಿರಿಯ ಮುಖಂಡರ ಆಲೋಚನೆಯಾಗಿದೆ ಎಂದು ತಿಳಿಯಲಾಗಿದೆ. ಈ ಹಿಂದೆ ಕೆಲವು ನಿಗಮ ಹಾಗೂ ಅಕಾಡೆಮಿಗಳಲ್ಲಿ ಪಕ್ಷದ ಜಿಲ್ಲಾ ಘಟಕದ ಗಮನಕ್ಕೆ ಬಾರದೆ ಅಧ್ಯಕ್ಷರ ನೇಮಕ ನಡೆಸಲಾಗಿದೆ. ಅದನ್ನು ಇಲ್ಲಿ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅತ್ಯಂತ ಸಮರ್ಥರು ಎಂದು ಕಂಡುಬಂದರೆ, ಅಂತಹವರಿಗೆ ಬೇರೆ ಜವಾಬ್ದಾರಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ನಂಬಲಾಗಿದೆ. ನೇರವಾಗಿ ಪಕ್ಷದ ಹಾಗೂ ಜನಪ್ರತಿನಿಧಿಗಳ ಶಿಫಾರಸಿನಿಂದಲೇ ನೇಮಕವಾದವರನ್ನು ಉಳಿಸಿಕೊಂಡು, ಉಳಿದವರಿಗೆ ಗೇಟ್‌ಪಾಸ್‌ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಪಕ್ಷ ಎರಡು ಬಾರಿ ಅಧ್ಯಕ್ಷನಾಗಲು ಅವಕಾಶ ನೀಡಿದೆ. ಅದಕ್ಕೆ ಸರ್ಕಾರ ಹಾಗೂ ಪಕ್ಷಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಮುಂದೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಿದರೂ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಅಂತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನಿರ್ಗಮನ ಅಧ್ಯಕ್ಷ ರಹೀಂ ಉಚ್ಚಿಲ್‌ ತಿಳಿಸಿದ್ದಾರೆ.