ಈಶ್ವರಪ್ಪನವರಂಥ ಹಿರಿಯ ನಾಯಕರು ಈ ರೀತಿಯ ಹೇಳಿಕೆ ನೀಡಿದ್ದು ಸರಿಯಲ್ಲ, ವಲಸಿಗರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಎಂಬುದನ್ನು ಅವರು ಮರೆಯಬಾರದು ಎಂದು ಅಸಮಾಧಾನ ಹೊರಹಾಕಿದ ಎಂಟಿಬಿ ನಾಗರಾಜ್‌, ಶಿವರಾಮ್‌ ಹೆಬ್ಬಾರ್‌ ಹಾಗೂ ಎಚ್‌.ವಿಶ್ವನಾಥ್‌. 

ಬೆಂಗಳೂರು(ಜು.01):  ಕಾಂಗ್ರೆಸ್‌ನಿಂದ ವಲಸೆ ಬಂದವರಿಂದ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿನ ಅಶಿಸ್ತು ಬಂದಿದೆ ಎಂಬ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಗೆ ಮಾಜಿ ಸಚಿವರಾದ ಶಿವರಾಮ್‌ ಹೆಬ್ಬಾರ್‌, ಎಂಟಿಬಿ ನಾಗರಾಜ್‌ ಮತ್ತು ಎಂಎಲ್ಸಿ ಎಚ್‌.ವಿಶ್ವನಾಥ್‌ ತೀವ್ರ ಕಿಡಿಕಾರಿದ್ದಾರೆ. ಈಶ್ವರಪ್ಪನವರಂಥ ಹಿರಿಯ ನಾಯಕರು ಈ ರೀತಿಯ ಹೇಳಿಕೆ ನೀಡಿದ್ದು ಸರಿಯಲ್ಲ, ವಲಸಿಗರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಎಂಬುದನ್ನು ಅವರು ಮರೆಯಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಶಿರಸಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಮಾಜಿ ಸಚಿವ ಶಿವರಾಮ್‌ ಹೆಬ್ಬಾರ್‌, ಈಶ್ವರಪ್ಪ ಅವರಿಗೆ ಟಿಕೆಟ್‌ ತಪ್ಪಲು ನಾವು ಕಾರಣರಲ್ಲ. ಯಾರ ತ್ಯಾಗದಿಂದ ಸರ್ಕಾರ ಬಂತು? ಯಾರು ಮಂತ್ರಿಗಳಾದರು? ಎಂಬುದನ್ನು ಈಶ್ವರಪ್ಪ ತಿಳಿದುಕೊಳ್ಳಬೇಕು. ಬಾಲ ಕಟ್‌ ಮಾಡುವಂಥ ಕೆಲಸ ನಾವು ಮಾಡಿಲ್ಲ.ಕೆಲವರಿಗೆ ಮಾತನಾಡುವ ಚಟ ಇರುತ್ತದೆ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವವರು ಶಬ್ದ ಬಳಸುವ ಮೊದಲು ಯೋಚನೆ ಮಾಡಬೇಕು. ಎಂದು ಹೇಳಿದರು.

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿ ಆಂತರಿಕ ಸಂಘರ್ಷ ತೀವ್ರ!

ಇದೇ ಧಾಟಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್‌, ಬಿಜೆಪಿ ಅಧಿಕಾರಕ್ಕೆ ಬಂದದ್ದು ಮತ್ತು ಇಬ್ಬರು ಮುಖ್ಯಮಂತ್ರಿಗಳಾಗಿದ್ದು ವಲಸಿಗರಿಂದಲೇ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ವಲಸಿಗರು ಕಾರಣ. ಆದರೆ ಈಗ ನಮ್ಮಿಂದಲೇ ಅಧಿಕಾರ ಕಳೆದುಕೊಂಡೆವು, ಪಕ್ಷದಲ್ಲಿ ಶಿಸ್ತು ಹಾಳಾಯಿತು ಎನ್ನುವುದು ಸರಿಯಲ್ಲ. ಈಶ್ವರಪ್ಪನವರು ಪಕ್ಷದ ಹಿರಿಯ ನಾಯಕರು. ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೂ ಈ ರೀತಿ ಮಾತನಾಡಬಾರದಿತ್ತು ಎಂದರು.