ಒಂದೆಡೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಎನ್ನುತ್ತಾರೆ, ಮತ್ತೊಂದೆಡೆ ಡಿ ಕೆ ಸುರೇಶ್ ಅವರು ಭಾರತವನ್ನು ತುಂಡು ಮಾಡಬೇಕು ಎನ್ನುತ್ತಾರೆ. ಕಾಂಗ್ರೆಸ್ ನ ಒಟ್ಟು ಸಂಸ್ಕೃತಿಯೇ ಅಂತಹದ್ದು ಎಂದು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಫೆ.02): ಒಂದೆಡೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಎನ್ನುತ್ತಾರೆ, ಮತ್ತೊಂದೆಡೆ ಡಿ ಕೆ ಸುರೇಶ್ ಅವರು ಭಾರತವನ್ನು ತುಂಡು ಮಾಡಬೇಕು ಎನ್ನುತ್ತಾರೆ. ಕಾಂಗ್ರೆಸ್ ನ ಒಟ್ಟು ಸಂಸ್ಕೃತಿಯೇ ಅಂತಹದ್ದು ಎಂದು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಉದ್ಘಾಟನೆ ಮಾಡಿದ ಸಂದರ್ಭ ಅವರು ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಸಂಸದ ಡಿಕೆ ಸುರೇಶ್ ಹೇಳಿಕೆಯ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ನ ಒಟ್ಟು ನೀತಿ ಯಾವತ್ತೂ ದೇಶವನ್ನು ಜೋಡಿಸುವುದಾಗಿರಲಿಲ್ಲ. 

ತುಂಡು ಮಾಡುವುದೇ ಅವರ ನೀತಿ ಆಗಿತ್ತು. ಅವರ ನಡವಳಿಕೆ, ಭಾವನೆ ಮತ್ತು ಅವರ ಹೃದಯದ ಭಾಷೆಯನ್ನು ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. ಹಾಗಾಗಿ ಇದು ಅತ್ಯಂತ ಖಂಡನಾರ್ಹವಾದಂತ ಹೇಳಿಕೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವಾಗ ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೆಲವು ಶಕ್ತಿಗಳು ಹೇಳುತ್ತಿದ್ದವು. ಆ ಮಾದರಿ ಮಾತುಗಳನ್ನು ಡಿ. ಕೆ ಸುರೇಶ್ ಅವರು ಮಾತನಾಡಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಭಾರತ ಎಂದೂ ಒಂದಾಗಿರಬೇಕು ಎನ್ನುವುದು ಬಿಜೆಪಿಯ ನಿಲುವು ಎಂದು ಮಡಿಕೇರಿಯಲ್ಲಿ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನಿಂದ ಬ್ಲ್ಯಾಕ್ ಮೇಲ್ ರಾಜಕಾರಣ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಇವರೆಲ್ಲರೂ ಸುರೇಶ್ ಅವರ ಹೇಳಿಕೆಯನ್ನು ತೀವ್ರ ಪದಗಳಲ್ಲಿ ಖಂಡಿಸುತ್ತಾರೆ ಎಂದುಕೊಂಡಿದ್ದೆವು. ಮತ್ತು ಅವರಿಗೆ ಎಚ್ಚರಿಕೆ ಕೊಡುತ್ತಾರೆ, ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ ಡಿಕೆ ಸುರೇಶ್ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ಕೂಡ ಖಂಡನಾರ್ಹ ವಿಷಯ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕೇಂದ್ರ ಬಜೆಟ್ ಅನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭವಿಷ್ಯವಿಲ್ಲದ ಬಜೆಟ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕೋಟಾ ಪೂಜಾರಿ ಅವರು, ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವುದು ಮಧ್ಯಂತರ ಬಜೆಟ್. 

ಯಾವುದೇ ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಗಿಮಿಕ್ ಬಜೆಟ್ ಮಂಡಿಸುತ್ತವೆ. ಆದರೆ ನರೇಂದ್ರ ಮೋದಿಯವರ ಸರ್ಕಾರ ಮುಂದಿನ ತಲೆಮಾರಿಗೆ ಬೇಕಾದ ಬಜೆಟ್ ಮಂಡಿಸಿದೆ. ಯಾವುದೇ ಚುನಾವಣಾ ಗಿಮಿಕ್ ಮಾಡಿಲ್ಲ. ಮೀನುಗಾರರಿಗೆ, ಪ್ರವಾಸೋದ್ಯಮಕ್ಕೆ ನೀಡಿರುವ ಯೋಜನೆಗಳು ದೇಶವನ್ನು ಪ್ರಗತಿಯೆಡೆಗೆ ಕೊಡೊಯ್ಯಬಲ್ಲವು. ಹೀಗಾಗಿ ಇದೊಂದು ಅಭೂತಪೂರ್ವ ಬಜೆಟ್ ಎಂದು ಮೇಲ್ಮನೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎನ್ನುವ ಸಂಸದ ಡಿ ಕೆ ಸುರೇಶ್ ಅವರು ದೇಶ ದ್ರೋಹಿ ಕೆಲಸ ಮಾಡಿದ್ದಾರೆ. 

ಕೇಂದ್ರ ಮಂಡಿಸಿರುವುದು ಬಜೆಟ್ ಹೊರತು ಚುನಾವಣೆ ಬಜೆಟ್ ಅಲ್ಲ: ಮಾಜಿ ಸಚಿವ ಎಸ್.ಎ.ರಾಮದಾಸ್

ಹೀಗಾಗಿ ಅವರನ್ನು ದೇಶ ದ್ರೋಹಿ ಎಂದು ದೇಶದಿಂದ ಹೊರಗಟ್ಟಿ ಎಂದು ಮಾಜಿ ಸಚಿವ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಯಾರು ಇದುವರೆಗೆ ಪ್ರತ್ಯೇಕ ದೇಶ ಕೊಡಿ ಎಂದು ಕೇಳಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಪ್ರಚಾರಕ್ಕಾಗಿ ಅವರ ಮಾತಿನ ಚಪಲಕ್ಕಾಗಿ ಈ ರೀತಿ ಹೇಳಿರಬಹುದು. ಅವರನ್ನು ದೇಶದಿಂದ ಅರಬ್ ದೇಶಗಳಿಗೆ ಕಳುಹಿಸಲಿ ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದರು.