ಕೇಂದ್ರ ಸಮಿತಿಗೆ ಉಪ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಸಿ.ಟಿ.ರವಿ ಸ್ಪಷ್ಟನೆ
ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ...
ಬೆಂಗಳೂರು, (ಮಾ.20): ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಅಭ್ಯರ್ಥಿಗಳ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಹೇಳಿದರು.
ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ, ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಪ್ರಚಲಿತ ರಾಜಕೀಯ ಕುರಿತು ಚರ್ಚಿಸಲಾಗಿದೆ. ಬಿಜೆಪಿಯನ್ನು ಏ. 6ರಂದು ಸ್ಥಾಪಿಸಲಾಯಿತು. ಈ ವರ್ಷ 41 ವರ್ಷಗಳನ್ನು ಪೂರೈಸಲಿದೆ. ಈ ಸಂಬಂಧ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳನ್ನೂ ಚರ್ಚಿಸಿದೆವು ಎಂದರು.
ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಫೈನಲ್!
ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಅಜ್ಞಾತ ವಾಸ ಅನುಭವಿಸಿದ್ದಾರೆ. ಅಲ್ಲಿನ ಟಿಕೆಟ್, ಬೆಳಗಾವಿಯಲ್ಲಿ ಅಂಗಡಿಯವರ ಕುಟುಂಬಕ್ಕೆ ಟಿಕೆಕ್ ಕೊಡುವ ಕುರಿತಂತೆ ಕೇಂದ್ರದ ನಿರ್ಧಾರವನ್ನು ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ತಮಿಳುನಾಡು ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಕೆ.ಅಣ್ಣಾಮಲೈ, ಖುಷ್ಬೂ ಸೇರಿದಂತೆ ಅನೇಕರು ಸ್ಪರ್ಧೆಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಕ್ರಮದ ಆಧಾರದಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಳವಣಿಗೆಗೆ ಪೂರಕವಾದ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
2016ರಲ್ಲೂ ಡಿಎಂಕೆಯವರು ಅಧಿಕಾರ ಖಚಿತ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಅಧಿಕಾರ ಸಿಗಲಿಲ್ಲ. ಈಗಲೂ ಅದೇ ನಿರೀಕ್ಷೆ ಅವರಲ್ಲಿದೆ. ಆದರೆ, ಗೂಂಡಾ ರಾಜಕೀಯ ಮಾಡುವ ಡಿಎಂಕೆಯನ್ನು ಜನರು ತಿರಸ್ಕರಿಸಲಿದ್ದಾರೆ. ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಸಿ.ಟಿ.ರವಿ ಹೇಳಿದರು.