ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್‌ ಹೆರಾಲ್ಡ್‌ ಸಂಸ್ಥೆಗೆ ಸಂಬಂಧಿಸಿದ ಅವ್ಯವಹಾರ ಹಿನ್ನೆಲೆ ಇ.ಡಿ.ನೋಟಿಸ್‌ ಕೊಟ್ಟಿದೆ.

ಬೆಂಗಳೂರು (ಜು.18): ಕಾಂಗ್ರೆಸ್‌ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್‌ ಹೆರಾಲ್ಡ್‌ ಸಂಸ್ಥೆಗೆ ಸಂಬಂಧಿಸಿದ ಅವ್ಯವಹಾರ ಹಿನ್ನೆಲೆ ಇ.ಡಿ. (ಜಾರಿ ನಿರ್ದೇಶನಾಲಯ) ನೋಟಿಸ್‌ ಕೊಟ್ಟಿದೆ. 

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ನಡೆದುಕೊಂಡ ಕಾರಣ ನೋಟಿಸ್‌ ಕೊಟ್ಟಿದೆ. ಅವರು ಪ್ರಾಮಾಣಿಕರಿದ್ದರೆ ಇ.ಡಿಗೆ ಯಾಕೆ ಹೆದರಬೇಕು? ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಹಾಗೇ ಬಿಡಬೇಕೆಂದು ಕಾಂಗ್ರೆಸ್‌ನವರು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು. ಸಂವಿಧಾನ ರಚನೆ ಸಂದರ್ಭದಲ್ಲಿ ಅವತ್ತು ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಆಗ, ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಬಹುದಿತ್ತು. ಇಷ್ಟಾಗಿಯೂ ತನಿಖೆ ನಡೆಸಿದ್ದರೆ ಅದು ಸಂವಿಧಾನ ವಿರೋಧಿ ಆಗುತ್ತಿತ್ತು. ಈಗ ತನಿಖೆ ನಡೆಸುವುದು ಸಂವಿಧಾನಬದ್ಧವಾಗಿದೆ ಎಂದು ತಿಳಿಸಿದರು. 

ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಿಸಲು ‘ಮಿಷನ್‌ ದಕ್ಷಿಣ್‌’: ಸಿ.ಟಿ.ರವಿ

ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆರೋಪ ಬಂದಾಗ ಅವರು ಹೇಗೆ ನಡೆದುಕೊಂಡರು ಎಂಬುದನ್ನು ನೋಡಿ ಕಾಂಗ್ರೆಸ್‌ನವರು ಕಲಿಯಬೇಕಿದೆ. ಸತತ ಏಳು ಗಂಟೆಗಳ ಕಾಲ ಎಸ್‌ಐಟಿ ತನಿಖೆಗೆ ಹಾಜರಾದರು. ನಿಮ್ಮ ಥರ ನಾಟಕ ಮಾಡಿಲ್ಲ. ಜನ ಸೇರಿಸಿ ಪ್ರತಿಭಟಿಸಲಿಲ್ಲ. ನ್ಯಾಷನಲ್‌ ಹೆರಾಲ್ಡ್‌ ಕೇಸಿನಲ್ಲಿನ ದೌರ್ಬಲ್ಯವನ್ನು ಜನರನ್ನು ಸೇರಿಸಿ ಮುಚ್ಚಿಹಾಕಲು ಕಾಂಗ್ರೆಸ್‌ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದರು.

ಸಿದ್ದು, ಡಿಕೆಶಿಗೆ ಕಾಂಗ್ರೆಸ್‌ ಉಳಿಸಿಕೊಳ್ಳಲು ಆಗುತ್ತಿಲ್ಲ: ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಕನಸು ನನಸಾಗುವುದಿಲ್ಲ. ಏಕೆಂದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಪಕ್ಷವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಗೋವಾದಲ್ಲಿ ಗೆದ್ದಿದ್ದ 12 ಮಂದಿ ಕಾಂಗ್ರೆಸ್‌ ಶಾಸಕರು ಗಂಟು ಮೂಟೆ ಕಟ್ಟಲು ರೆಡಿಯಾಗಿದ್ದಾರೆ. ಇಲ್ಲೂ ಸಹ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭವಿಷ್ಯ ನುಡಿದರು.

ಮಾಲೂರು- ಹೋಸೂರು ಮುಖ್ಯರಸ್ತೆಯ ಪಿಆರ್‌ಎ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಅವರ ಬೆಂಬಲಿಗರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಡಿಶಿ ಅವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಬೇರೆ ಪಕ್ಷದ ಹಲವರು ಬಿಜೆಪಿ ಸೇರಲಿದ್ದಾರೆ: ಅಧಿಕಾರಿದಲ್ಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್‌ ಅನ್ನು ಉಳಿಸಿಕೊಳ್ಳೋಕೆ ಆಗುತ್ತಿಲ್ಲ. ಗೋವಾದಲ್ಲಿರೊ 12 ಮಂದಿ ಶಾಸಕರು ಗಂಟು ಮೂಟೆ ಕಟ್ಟಲು ರೆಡಿಯಾಗಿದ್ದಾರೆ. ರಾಜ್ಯದಲ್ಲೂ ಸಹ ಕಾಂಗ್ರೆಸ್‌, ಜೆಡಿಎಸ್‌ ನ ಹಲವು ಮಂದಿ ಬಿಜೆಪಿ ಸೇರಲು ರೆಡಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಗೂಟಾ ಹಿಡ್ಕೊಂಡು ಬಡಿದಾಡಿದರು ಏನೂ ಆಗಲ್ಲ ಎಂದರು.

ಸಿದ್ದುಗೆ ಉಲ್ಟಾ ಮಚ್ಚೆ, ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ: ಸಿ.ಟಿ.ರವಿ

ಮಂಜುನಾಥಗೌಡರ ವರ್ಚಸ್ಸನ್ನು ಗುರ್ತಿಸಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಬಿಜೆಪಿಯನ್ನು ಬಲಗೊಳಿಸಿ ದೇಶಕ್ಕಾಗಿ ಕೆಲಸ ಮಾಡಬೇಕು. ಅಧಿಕಾರಕ್ಕಾಗಿ ಈಗಾಗಲೇ ಕಾಂಗ್ರೆಸ್‌ನವರು ಸೂಟು ಹೊಲಿಸಿಕೊಂಡು ಸಿದ್ದರಾಗಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅದೇ ರೀತಿ ಕೋಲಾರ ಜಿಲ್ಲೆಯ 6 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ಇಬ್ಬರನ್ನು ಮಂತ್ರಿ ಮಾಡಲಾಗುವುದು ಎಂದರು.