ಪಕ್ಷ ತೊರೆದವರಿಗೆ ಬಾಗಿಲು ಬಂದ್: ಅರುಣ್ ಸಿಂಗ್
ಐದಾರು ಮಂದಿ ಪಕ್ಷ ತೊರೆದರೆ ಬಿಜೆಪಿಗೆ ನಷ್ಟವೇನಿಲ್ಲ, ಸೋತರೂ ಸ್ಥಾನಮಾನ ಪಡೆದಿದ್ದ ಬಗ್ಗೆ ಸವದಿ ಯೋಚಿಸಬೇಕು: ಅರುಣ್ ಸಿಂಗ್
ಬೆಂಗಳೂರು(ಏ.15): ಪಕ್ಷವನ್ನು ಬಿಟ್ಟು ಹೋಗುವವರಿಗೆ ಸದ್ಯಕ್ಕೆ ಮತ್ತೆ ಪಕ್ಷದ ಬಾಗಿಲು ತೆರೆಯುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿಯೂ ಆಗಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದಾರು ಮಂದಿ ಪಕ್ಷ ತೊರೆದರೂ ನಷ್ಟವೇನಿಲ್ಲ. ಕಾಂಗ್ರೆಸ್ ಸೇರಿದ ಬಳಿಕ ಅವರೇ ಪಶ್ವಾತಾಪ ಪಡುತ್ತಾರೆ. ಬಿಜೆಪಿ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಶಾಸಕ, ಸಂಸದರಾಗದೇ ಕೆಲಸ ಮಾಡುತ್ತಲೇ ಇದ್ದಾರೆ. ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಆದರೆ, ಉನ್ನತ ಸ್ಥಾನಮಾನ ಪಡೆದರೂ ಸ್ವಾರ್ಥಕ್ಕಾಗಿ ಪಕ್ಷ ತೊರೆಯುವುದನ್ನು ಜನರು ಮತ್ತು ಮತದಾರರು ಮರೆಯುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
Karnataka Assembly Elections 2023: ಬಿಜೆಪಿ ತೊರೆದು ಸವದಿ ಕಾಂಗ್ರೆಸ್ಗೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಲಾಯಿತು. ಅಲ್ಲದೆ ಪಕ್ಷದ ಉನ್ನತ ಸಮಿತಿಗಳಲ್ಲೂ ಸಾಥ್ ನೀಡಲಾಗಿತ್ತು. ಇದರ ಕುರಿತು ಅವರೇ ಯೋಚಿಸಬೇಕು ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.