ಬಿಜೆಪಿ ಪಕ್ಷಕ್ಕೆ ಒಂದು ಶಿಸ್ತು, ಸಮಾಜ ಸೇವೆಯ ಗುರಿ ಇದೆ. ಆದರೆ, ಬಾಗಲಕೋಟೆಯಲ್ಲಿ ಒಬ್ಬ ವ್ಯಕ್ತಿಯಿಂದ ಅದು ಹಾಳಾಗಿದೆ: ಮಲ್ಲಿಕಾರ್ಜುನ ಚರಂತಿಮಠ 

ಬಾಗಲಕೋಟೆ(ಏ.09): ಯಾವುದೇ ಒಂದು ಪಕ್ಷ, ವ್ಯಕ್ತಿ ಬೆಳೆಯಲು ಕಾರ್ಯಕರ್ತರ ಶ್ರಮವೇ ಮುಖ್ಯ. ತಮಗೆ ಬೇಕಾದ ಕಾರ್ಯಕರ್ತರನ್ನು ಬಳಸಿಕೊಂಡು, ಬಳಿಕ ಕಾಲಕಸದಂತೆ ಕಾಣುವ ಸಂಸ್ಕೃತಿಗೆ ಈ ಬಾರಿಯ ಚುನಾವಣೆಯಲ್ಲಿ ಕೊನೆಯ ಮೊಳೆ ಹೊಡೆಯಬೇಕು. ಇದಕ್ಕಾಗಿ ಇಡೀ ಬಾಗಲಕೋಟೆ ಕ್ಷೇತ್ರದ ಜನರು ಸಿದ್ಧರಾಗಿದ್ದಾರೆ ಎಂದು ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಮುಚಖಂಡಿ ಕ್ರಾಸ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಒಂದು ಶಿಸ್ತು, ಸಮಾಜ ಸೇವೆಯ ಗುರಿ ಇದೆ. ಆದರೆ, ಬಾಗಲಕೋಟೆಯಲ್ಲಿ ಒಬ್ಬ ವ್ಯಕ್ತಿಯಿಂದ ಅದು ಹಾಳಾಗಿದೆ. ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲೇ ನಾವು ಸಚಾಗಳಲ್ಲ ಎಂದು ಹೇಳಿಕೊಂಡು, ತಾವೆಷ್ಟು ಶುದ್ಧರು ಎಂಬುವುದನ್ನು ಅವರೇ ಹೇಳಿಕೊಂಡಿದ್ದಾರೆ. ಆದರೆ, ಅದನ್ನು ಪಕ್ಷದ ಹಿರಿಯರ ತಲೆಗೆ ಕಟ್ಟುವುದು ಸರಿಯಲ್ಲ. ತಾವು ಮಾಡಿದ ತಪ್ಪಿಗೆ ಪಕ್ಷ ಬೆಲೆ ತೆರುವಂತಹ ಕೆಲಸ ಯಾರೂ ಮಾಡಬಾರದು ಎಂದರು.

'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟಿದ್ದು ನೋವು ತಂದಿದೆ'

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು, ವಿವಿಧ ಸಮುದಾಯಗಳ ಜನರು, ರೋಷಿ ಹೋಗಿದ್ದಾರೆ. ಕಷ್ಟಹೇಳಿಕೊಂಡು ಬಂದವರನ್ನು ಸೌಜನ್ಯಕ್ಕೂ ಮಾತನಾಡಿಸದವರನ್ನು ಶಾಶ್ವತವಾಗಿ ದೂರವಿಡಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರ್ಯಕರ್ತರು ಕೈಜೋಡಿಸಿ, ಸ್ವಾಭಿಮಾನ ಎತ್ತಿ ಹಿಡಿದು, ದಬ್ಬಾಳಿಕೆ-ದೌರ್ಜನ್ಯ ನಡೆಸುವವರನ್ನು ಮನೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಯುವ ಮುಖಂಡ ಸಂತೋಷ ಹೊಕ್ರಾಣಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಮುಖಂಡರಾದ ವಿಜಯ ಸುಲಾಖೆ, ಶಿವು ಮೇಲ್ನಾಡ, ಗುರು ಅನಗವಾಡಿ, ಅರುಣ ಲೋಕಾಪುರ, ರಾಜು ಗೌಳಿ, ಪ್ರಶಾಂತ ಸೋನಕನಾಳ, ವಿನಾಯಕ ಹಾಸಲಕರ, ನಾಗರಾಜ ಕೆರೂರ, ಪುಟ್ಟು ಅಜ್ಜೋಡಿ, ಮಹಾಂತೇಶ ಉಳ್ಳಿಗಡ್ಡಿ, ವಿಶಾಲ ಮಾಂಡಗಿ, ಬೆನ್ನಪ್ಪ ಆಡಿನ, ಅಕುಲ, ರಾಘು ಯಾದಗಿರಿ, ಹರೀಶ ರಂಗರೇಜ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.