ಬೆಂಗಳೂರು ,ಗಲಭೆ: ಅಖಂಡ ಶ್ರೀನಿವಾಸ ಮೂರ್ತಿ–ಡಿಕೆ ಶಿವಕುಮಾರ್ ಭೇಟಿ
ಕೆ.ಜಿ.ಹಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಘಟನೆಯ ಮಾಹಿತಿಯನ್ನು ನೀಡಿದ್ದಾರೆ.
ಬೆಂಗಳೂರು, (ಆ.12): ಇಲ್ಲಿನ ಕೆ.ಜಿ.ಹಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು (ಬುಧವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು.
ಶ್ರೀನಿವಾಸಮೂರ್ತಿ ಅವರು ಡಿ.ಕೆ.ಶಿ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಕೆ.ಜಿ.ಹಳ್ಳಿ ಗಲಭೆ, ದುಷ್ಕರ್ಮಿಗಳಿಂದ ತಮ್ಮ ನಿವಾಸದ ಮೇಲೆ ನಡೆದ ದಾಳಿ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.
ಅಖಂಡ ಶ್ರೀನಿವಾಸ ತಂಗಿ ಪುತ್ರ (ಅಳಿಯ) ನವೀನ್ ಫೇಸ್ಬುಕ್ನಲ್ಲಿ ಹಾಕಲಾದ ವಿವಾದಿತ ಪೋಸ್ಟ್ಗೆ ಸಂಬಂಧಪಟ್ಟಂತೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಲ್ಲೊಂದರಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಇಡೀ ಪುಲಿಕೇಶಿ ನಗರವನ್ನು ರಣಾಂಗಣ ಮಾಡಿದ್ದಾರೆ.
ಬೆಂಗ್ಳೂರು ಗಲಭೆ: ನವೀನ್ ಬಿಜೆಪಿ ಕಡೆಯವನು ಎಂದ ಡಿಕೆಶಿಗೆ ಸಿಟಿ ರವಿ ಫುಲ್ ಕ್ಲಾಸ್..!
ಈ ಸಂಬಂಧ ನವೀನ್ ಮೇಲಿನ ಸಿಟ್ಟಿನಿಂದ ಒಂದು ಸಮುದಾಯದ ಗುಂಪೊಂದು ಈ ರೀತಿಯಾಗಿ ಪುಂಡಾಟಿಕೆ ಮಾಡಿದೆ. ಇದರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಶ್ರೀನಿವಾಸ್ ಮೂರ್ತಿ ಅವರಿಂದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಘಟನೆಗೆ ಸಂಬಂಧಿಸಿದಂತೆ ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿ ಆಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಧೈರ್ಯ ತುಂಬಿದ್ದಾರೆ.
ಇನ್ನೊಂದೆಡೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದರು ಹಾಗೂ ಘಟನೆಯ ಬಗ್ಗೆ ವಿವರಣೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.