ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಮೂರ್ಖತನದ ಪರಮಾವಧಿಯಾಗಿದ್ದು, ಧರ್ಮಸ್ಥಳದ ವಿರುದ್ಧ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ಮಾಡಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

ದಾವಣಗೆರೆ (ಆ.25): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಮೂರ್ಖತನದ ಪರಮಾವಧಿಯಾಗಿದ್ದು, ಧರ್ಮಸ್ಥಳದ ವಿರುದ್ಧ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ಮಾಡಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವನೋ ಅನಾಮಿಕ ಹೇಳುತ್ತಿದ್ದಾನೆಂದು ಆತ ಹೇಳಿದ್ದ ಕಡೆಗಳಲ್ಲೆಲ್ಲಾ ಗುಂಡಿ ಅಗೆಯುತ್ತಾ ಹೋಗಿದ್ದು ಮೂರ್ಖತನದ ಪರಮಾವಧಿಯಾಗಿದೆ. ಇದು ಹಿಂದೂ ಧರ್ಮದ ಮೇಲಿನ ದಾಳಿಯಾಗಿದೆ. ಒಬ್ಬ ಮನುಷ್ಯ 30 ಅಡಿ ಆಳಕ್ಕೆ ಅಗೆದು ಶವ ಹೂಳಲು ಸಾಧ್ಯವೇ? ಎಂದರು. ಅಧಿಕಾರಿಗಳಿಗೆ ಅಷ್ಟೂ ತಲೆ ಇಲ್ಲವಾ?. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಹಾಗಾಗಿಯೇ ತಿಂಗಳಿಗೊಂದು ಪ್ರಕರಣ ಎಳೆ ತಂದು ಜನರ ಭಾವನೆ ಬೇರೆಡೆ ತಿರುಗಿಸಿ ಕಾಲ ಕಳೆಯುತ್ತಿದೆ ಎಂದು ಕಿಡಿ ಕಾರಿದರು.

Add Asianetnews Kannada as a Preferred SourcegooglePreferred

ಲೋಕಿಕೆರೆಗೆ ಉಜ್ವಲ ರಾಜಕೀಯ ಭವಿಷ್ಯ: ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕಿಕೆರೆ ನಾಗರಾಜ ಸೋತಿದ್ದು ಕಾಂಗ್ರೆಸ್ಸಿನ ದೊಡ್ಡ ಬೆಟ್ಟದ ಎದುರಾಗಿದ್ದು, ಮುಂದೊಂದು ದಿನ ಗೆದ್ದಾಗ ಅದೇ ಬೆಟ್ಟ ಕಾಲ ಬುಡದಲ್ಲಿರುತ್ತದೆ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು. ಹಲವಾರು ಕಾರಣದಿಂದ ಲೋಕಿಕೆರೆ ನಾಗರಾಜ ಕಳೆದ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಯಾರ ಎದುರು ನಿಂತಿದ್ದರು ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ ನಾಗರಾಜ ಗೆದ್ದೇ ಗೆಲ್ಲುತ್ತಾರೆ ಎಂದರು.

ಮಧ್ಯ ಕರ್ನಾಟಕದ ದಾವಣಗೆರೆ ಬಿಜೆಪಿಯ ಭದ್ರಕೋಟೆ ಎಂಬುದೇನೋ ನಿಜ. ಆದರೆ, ಲೋಕಿಕೆರೆ ನಾಗರಾಜ ಸ್ಪರ್ಧಿಸಿದ್ದು ಇಲ್ಲಿನ ಪ್ರಭಾವಿ ಅಭ್ಯರ್ಥಿ ವಿರುದ್ಧ. ಅದೊಂದು ದೊಡ್ಡ ಬೆಟ್ಟ ಇದ್ದಂತೆ. ಅಂತಹ ಬೆಟ್ಟವನ್ನು ಹತ್ತಲು ಸಾಧ್ಯವಾಗದಿರಬಹುದು. ಆದರೆ, ಮುಂದೊಂದು ದಿನ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಿಂದ ಬೆಟ್ಟ ಹತ್ತಿದರೆ ಬೆಟ್ಟವೇ ಕಾಲಡಿ ಇರುತ್ತದೆ ಎಂದರು. ಸೋತರೂ ಸಹ 70 ಸಾವಿರ ಮತಗಳನ್ನು ನಾಗರಾಜ ಪಡೆದಿದ್ದಾರೆ. ಮಾಜಿ ಸಚಿವರು, ಮಾಜಿ ಶಾಸಕರೇ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಂದಿನ ಚುನಾವಣೆಗಳಲ್ಲಿ ಇದೇ ಮಾಜಿಗಳೇ ಹಾಲಿಗಳಾಗುತ್ತಾರೆ ಎಂದು ಹೇಳಿದರು.

ಇದೇ ದಾವಣಗೆರೆಯಿಂದಲೇ ನಾನು ಬದುಕು ಕಟ್ಟಿಕೊಂಡವರು. ಈ ನೆಲದಲ್ಲೇ ಪೊಲೀಸ್ ಅಧಿಕಾರಿಯಾಗಿ, ನಟನಾಗಿ ಮತ್ತು ರಾಜಕಾರಣಿಯಾಗಿ ಬೆಳೆದವರು. ಇದು ದಾವಣಗೆರೆಯಲ್ಲ, ಹೆಸರಿಗೆ ತಕ್ಕಂತೆ ನನ್ನ ಪಾಲಿನ ದೇವನಗರಿಯಾಗಿದೆ. ಒಬ್ಬ ಸಾಮಾನ್ಯ ರೈತನ ಮಗನಾಗಿ, ರೈತರ ಸಂಕಷ್ಟಗಳನ್ನು ಅರಿತ ಲೋಕಿಕೆರೆ ನಾಗರಾಜಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದರು. ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಇದೇ ವೇದಿಕೆ ಮೂಲಕ ನಾನು ಸವಾಲು ಹಾಕುತ್ತೇನೆ. ಈಗ ಕಾಂಗ್ರೆಸ್ ಪಕ್ಷವು ಚುನಾವಣೆ ನಡೆಸಲಿ, ದಾವಣಗೆರೆ ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸುತ್ತೇವೆ. ಇದೇ ಉತ್ತರ ಕ್ಷೇತ್ರದಲ್ಲಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಳಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ತಿಳಿಸಿದರು.