ಯಾವುದೇ ಕಾರಣಕ್ಕೂ ಯತ್ನಾಳ್ ಪ್ರತಿಪಕ್ಷ ನಾಯಕ ಆಗಲ್ಲ ಎಂದ ಸಿಎಂ: 100% ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್!
ಬಜೆಟ್ ಮುಗಿದು ಹಲವು ದಿನಗಳ ಕಾಲ ವಿಧಾನಸಭೆ ಹಾಗೂ ವಿಧಾನಪರಿಷತ್ ಅಧಿವೇಶನ ನಡೆಯುತ್ತಿದ್ರೂ ಬಿಜೆಪಿ ಈವರೆಗೆ ತನ್ನ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಯತ್ನಾಳ್ ಅವರ ಕಾಲೆಳೆದಿದ್ದಾರೆ.
ಬೆಂಗಳೂರು (ಜುಲೈ 12, 2023): ವಿಪಕ್ಷ ನಾಯಕನೇ ಇಲ್ಲದೆ ಈ ಬಾರಿ ರಾಜ್ಯ ಮುಂಗಾರು ಅಧಿವೇಶನ ನಡೆಯುತ್ತಿದೆ. ಇನ್ನು, ಈ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಸಿಎಂ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಸದನದಲ್ಲಿ ಕದನ ನಡೆದಿದೆ. ನೀವು ವಿಪಕ್ಷ ನಾಯಕ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ, ಯತ್ನಾಳ್ ಅವರ ಕಾಲೆಳೆದಿದ್ದು, ಇದಕ್ಕೆ ಉತ್ತರಿಸಿದ ಶಾಸಕ ನೂರಕ್ಕೆ ನೂರರಷ್ಟು ನಾನೇ ವಿಪಕ್ಷ ನಾಯಕ ಆಗ್ತೀನಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಜೆಟ್ ಮುಗಿದು ಹಲವು ದಿನಗಳ ಕಾಲ ವಿಧಾನಸಭೆ ಹಾಗೂ ವಿಧಾನಪರಿಷತ್ ಅಧಿವೇಶನ ನಡೆಯುತ್ತಿದ್ರೂ ಬಿಜೆಪಿ ಈವರೆಗೆ ತನ್ನ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಯತ್ನಾಳ್ ಅವರ ಕಾಲೆಳೆದಿದ್ದಾರೆ.
ಇದನ್ನು ಓದಿ: ಬಿಜೆಪಿ ವಿಪಕ್ಷ ನಾಯಕನ ಸ್ಥಾನ ಮಾರಾಟಕ್ಕಿದೆಯೇ: ಸಚಿವ ಎಂ.ಬಿ.ಪಾಟೀಲ್ ಲೇವಡಿ
ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಹೆಚ್ಚು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಲೆಳೆದ ಸಿಎಂ ಸಿದ್ದರಾಮಯ್ಯ, ಪದೇ ಪದೇ ಎದ್ದು ನಿಲ್ಲಬೇಡಿ ಯತ್ನಾಳ್. ನೀವು ಕೂಡಾ ವಿಪಕ್ಷ ನಾಯಕನ ಆಕಾಂಕ್ಷಿ ಅಂತಾ ಗೊತ್ತು. ಈ ರೀತಿ ಎದ್ದು ನಿಂತರೆ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ. ನನ್ನ ಮಾಹಿತಿ ಪ್ರಕಾರ ನೀವು ವಿಪಕ್ಷ ನಾಯಕ ಆಗಲ್ಲ ಎಂದೂ ಸಿಎಂ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ನೂರಕ್ಕೆ ನೂರರಷ್ಟು ನಾನೇ ವಿಪಕ್ಷ ನಾಯಕ ಆಗ್ತೀನಿ. ನೀವು ಈ ಹಿಂದೆ ಅವರ ಅಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದೀರಿ. ಆದರೆ, ಅವರೇ ಸಿಎಂ ಆದರು. ಈಗಲೂ ಅಷ್ಟೇ ನಾನು ಆಗಲ್ಲ ಅಂತೀರಿ, ಆದರೆ ನಾನೇ ಆಗ್ತೀನಿ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ವಿಶೇಷ ವ್ಯಕ್ತಿ ಘೋಷಿಸಲು ವಿಪಕ್ಷ ನಾಯಕನ ಆಯ್ಕೆ ವಿಳಂಬ: ಮುರುಗೇಶ್ ನಿರಾಣಿ
ಅಲ್ಲದೆ, ನೀವು ಇಷ್ಟು ಖಂಡಿತವಾಗಿ ಹೇಳ್ತಾ ಇದೀರಾ ಅಂದ್ರೆ ನೀವು ಯಾರ ಜೊತೆಗೋ ಅಡ್ಜಸ್ಟ್ಮೆಂಟ್ ಆಗಿರಬೇಕು ಎಂದೂ ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸಿಎಂ ಸಿದ್ದರಾಮಯ್ಯ, ನಾನು ಜೀವನದಲ್ಲೇ ಯಾವತ್ತೂ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿಲ್ಲ. ಆ ತರಹ ಮಾಡಿರುವುದನ್ನು ಸಾಬೀತು ಮಾಡಿದರೆ ಅವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ವಿಪಕ್ಷ ನಾಯಕ ಆಯ್ಕೆ ವಿಳಂಬದಿಂದ ಮುಜುಗರವಾಗಿದೆ: ಬಿಜೆಪಿ ಶಾಸಕ..!
ಬಳಿಕ ಅಡ್ಜಸ್ಟ್ಮೆಂಟ್ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದು, ನಾನೂ ಸರ್ಕಾರ ನಡೆಸಿದ್ದೇನೆ. ಅಡ್ಜಸ್ಟ್ಮೆಂಟ್ ಮಾಡಿಕೊಳ್ಳಬೇಕು ಅಂದಾಗ ಓಪನ್ ಆಗಿಯೇ ಅಡ್ಜಸ್ಟ್ ಮಾಡಿಕೊಂಡಿದ್ದೇವೆ. ಕದ್ದುಮುಚ್ಚಿ ಮಾಡಿಕೊಂಡಿಲ್ಲ ಎಂದಿದ್ದಾರೆ.
ಅಲ್ಲದೆ, ಸರ್ಕಾರ ನಡೆಸುವ ಕಷ್ಟ ನನಗೂ ಗೊತ್ತಿದೆ. ಏನಾದ್ರೂ ಫ್ರೀ ಸಿಗುತ್ತೆ ಅಂದ್ರೆ ಕಾಂಪಿಟೇಷನ್ ಮೇಲೆ ಹೋಗ್ತೀವಿ. ಇದು ಜನರ ಸಹಜ ಪ್ರಕ್ರಿಯೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರೂ ಫ್ರೀ ಅಂದಾಗ ಜನ ಮುಗಿ ಬೀಳ್ತಾರೆ. ಹಾಗಾಗಿ ಜನ ನಿಮ್ಮ ಭರವಸೆಗಳಿಗೆ ನಿಮ್ಮನ್ನು ಆಯ್ಕೆ ಮಾಡಿದ್ರು. ಈಗ ಅದನ್ನು ಈಡೇರಿಸಬೇಕಾದ್ದು ನಿಮ್ಮ ಜವಾಬ್ದಾರಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.