ಮಾಜಿ ಶಾಸಕ ಹಾಗು ಅವರ ಪತ್ನಿ ಮತ್ತು ಮಗನಿಗೆ ಕೊರೋನಾ ಸೋಂಕು ತಗುಲಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮಾಜಿ ಶಾಸಕರ ಪುತ್ರ ಸಾವನ್ನಪ್ಪಿದ್ದಾರೆ.

ಬೀದರ್, (ಸೆ.06): ಔರಾದ ತಾಲೂಕಿನ ಸಂತಪೂರ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಪುತ್ರ ಅನೀಲ್ ಗುಂಡಪ್ಪ ಬಿರಾದಾರ (47) ಹೆಮ್ಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನೀಲ್ ಇಂದು (ಭಾನುವಾರ) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೋವಿಡ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಬೀದರಿನಲ್ಲಿ ಆರಂಭಿಕ ಚಿಕಿತ್ಸೆ ಪಡೆದು, ನಂತರ ಕಳೆದ 10 ದಿನಗಳಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 

ಸಮರ್ಪಕ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರ ಸಾವು: ತನಿಖೆಗೆ ಆದೇಶ

ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇತ್ತಿಚೆಗೆ ಮಾಜಿ ಶಾಸಕ ಗುಂಪ್ಪ ವಕೀಲ ಅವರಿಗೂ ಕೊರೋನಾ ಸೋಂಕು ತಗುಲಿತ್ತು. ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 

ಇನ್ನು ಅನೀಲ್ ಅವರ ತಾಯಿಗೂ ಸೋಂಕು ತಗುಲಿದ್ದು, ಅವರೂ ಸಹ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.