* ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಸಹೋದರನ ಹೆಸರು * ಅಶ್ವತ್ಥ್ ನಾರಾಯಣ ಸಹೋದರ ಭಾಗಿಯಾಗಿರುವುದಾಗಿ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ * ಉಗ್ರಪ್ಪ, ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ಕೊಟ್ಟ ಅಶ್ವತ್ಥ್ ನಾರಾಯಣ
ಬೆಂಗಳೂರು, (ಮೇ.02) : ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಸಹೋದರ ಭಾಗಿಯಾಗಿರುವುದಾಗಿ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಆರೋಪ ಮಾಡುತ್ತಿದ್ದಂತೆಯೇ ವಿಕಾಸಸೌಧದಲ್ಲಿ ಐಟಿ-ಬಿಟಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಾಗೂ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಒಬ್ಬನೇ ಒಬ್ಬ ಅಭ್ಯರ್ಥಿಗೆ ಸಹಾಯ, ಶಿಫಾರಸು ಮಾಡಲು ಆಗಲ್ಲ. ಆಪಾದನೆ ಮಾಡುವವರು ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಸುಮ್ಮನೆ ಆರೋಪಮಾಡಿ ಹೆಸರಿಗೆ ಮಸಿ ಬಳಿಯಬಾರದು. ಇಂತಹ ಕೀಳುಮಟ್ಟದ ಆರೋಪ ಮಾಡುವುದು ಸರಿಯಲ್ಲ. ಇದು ಸಂಪೂರ್ಣ ದುರುದ್ದೇಶದಿಂದ ಮಾಡಿರುವ ಆರೋಪವಿದು. ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆಂದು ಆರೋಪ ಮಾಡಿದ್ದಾರೆ ಎಂದರು.
ಭ್ರಷ್ಟಾಚಾರ ರಹಿತವಾಗಿ ಬೆಳೆದುಬಿಟ್ಟರೆ ನಮಗೆ ಸ್ಥಾನಮಾನವಿರಲ್ಲ. ಇಂತಹ ಕೆಟ್ಟ ಆಲೋಚನೆಯಿಂದ ನನ್ನ ವಿರುದ್ಧ ಆರೋಪಿಸಿದ್ದಾರೆ. ನನ್ನ ವಿರುದ್ಧ ಆಧಾರರಹಿತವಾಗಿ ಆರೋಪವನ್ನು ಮಾಡಿದ್ದಾರೆ. ನಾನು ಭ್ರಷ್ಟಾಚಾರರಹಿತ, ಕಳಂಕರಹಿತ ರಾಜಕಾರಣ ಮಾಡುತ್ತಿದ್ದೇನೆ. ಭ್ರಷ್ಟಾಚಾರ ರಹಿತವಾಗಿ, ಪಾರದರ್ಶಕವಾಗಿ ನೇಮಕಾತಿ ನಡೆಯುತ್ತೆ. ಒಂದು ಹೇಳಿಕೆ ನೀಡಲು ಧೈರ್ಯ, ಸ್ಪಷ್ಟತೆ ಇಲ್ಲದೆ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.
PSI Recruitment Scam ಸಚಿವ ಅಶ್ವಥ್ ನಾರಾಯಣ್ ಸಹೋದರ ಹಗರಣದಲ್ಲಿ ಭಾಗಿ!
ಯಾವ ವ್ಯಕ್ತಿ ಕರೆ ಮಾಡಿದ್ದರು ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅಶ್ವತ್ಥ್ ನಾರಾಯಣ ಸಿಎಂ ಆಗುತ್ತಾರೆ ಹೆಸರು ಹೇಳಬೇಡ ಅಂದಿದ್ರು. ಬಿಜೆಪಿಯ ಯಾವ ನಾಯಕರು ಕರೆ ಮಾಡಿದ್ದರು ಎಂದು ಸ್ಪಷ್ಟಪಡಿಸಲಿ. ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲೇ ಭಯವಿರುವುದು ಗೊತ್ತಾಗುತ್ತದೆ. ನನ್ನ ರಾಜಕೀಯ ಬೆಳವಣಿಗೆಯಿಂದ ಡಿಕೆಶಿಗೆ ಎಷ್ಟು ಭಯವಾಗುತ್ತಿದೆ. ನಾನು ಸಿಎಂ ಆಗಿಬಿಡುತ್ತೇನೆ ಎಂದು ಡಿಕೆಶಿಗೆ ಭೀತಿ ಕಾಡುತ್ತಿದೆ ಎಂದು ಡಿಕೆ ಶಿವಕುಮರ್ಗೆ ತಿರುಗೇಟು ನೀಡಿದರು.
ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಷಡ್ಯಂತ್ರವಿದೆ. ಇಂದಿನಿಂದ ಡಿ.ಕೆ.ಶಿವಕುಮಾರ್ ಬಂಡವಾಳ ಬಿಚ್ಚಿಡುತ್ತೇನೆ. ತಪ್ಪು ಮಾಡಿದವರಿಗೆ ಕ್ಷಮೆಯಿಲ್ಲ, ಖಂಡಿತ ಶಿಕ್ಷೆಯಾಗಬೇಕು. ಆರೋಪ ಮಾಡಿದವರು ಏನಾದ್ರೂ ದಾಖಲೆ ನೀಡಿದ್ದಾರಾ? ನನ್ನ ವಿರುದ್ಧದ ಆರೋಪ ಹುನ್ನಾರ, ಷಡ್ಯಂತ್ರ, ಮ್ಯಾಚ್ಫಿಕ್ಸಿಂಗ್. ಎಲ್ಲೆಲ್ಲಿ ಮ್ಯಾಚ್ ಫಿಕ್ಸ್ ಮಾಡಿದ್ದಾರೆ ಎಂದು ಡಿಕೆಶಿ ಕೇಳಬೇಕು. ನಮ್ಮ ಕುಟುಂಬದಲ್ಲಿ ಇಂತಹ ಪದ್ಧತಿ, ಅಧಿಕಾರ ದುರ್ಬಳಕೆಯಿಲ್ಲ ಎಂದರು.
ಈ ಮೊದಲು ಡಿಕೆಶಿ ವಿರುದ್ಧ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದರು. ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಡಿಕೆಶಿ ಕಡುಭ್ರಷ್ಟ ಎಂದು ಹೇಳಿದ್ದರು. ಇಂತಹ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಿರುವುದು ಎಷ್ಟು ಸರಿ. ಇಂತಹ ನೂರು ಆರೋಪ ಮಾಡಿದರೂ ಏನೇನೂ ಆಗುವುದಿಲ್ಲ. ನೂರು ಜನ್ಮವೆತ್ತಿ ಬಂದರೂ ನನ್ನ ಹೆಸರಿಗೆ ಮಸಿ ಬಳಿಯಲಾಗಲ್ಲ. ಉಗ್ರಪ್ಪ, ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು..
