ರಾಹುಲ್‌ ಗಾಂಧಿ ಅವರು ಅಮೆರಿಕದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೀಸಲಾತಿ ಹಿಂಪಡೆಯುವ ಕುರಿತು ಮಾತನಾಡಿರಬಹುದು. ಆದರೆ, ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯ ವರೆಗೆ ಮೀಸಲಾತಿ ಇರುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. 

ಹುಬ್ಬಳ್ಳಿ (ಸೆ.12): ರಾಹುಲ್‌ ಗಾಂಧಿ ಅವರು ಅಮೆರಿಕದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೀಸಲಾತಿ ಹಿಂಪಡೆಯುವ ಕುರಿತು ಮಾತನಾಡಿರಬಹುದು. ಆದರೆ, ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯ ವರೆಗೆ ಮೀಸಲಾತಿ ಇರುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಸಮಾನತೆ ಬರುವ ವರೆಗೆ ಮೀಸಲಾತಿ ಇರುತ್ತದೆ. ಅದು ಬಂದ ನಂತರ ಮೀಸಲಾತಿ ತೆಗೆಯುವುದಾಗಿ ರಾಹುಲ್‌ ಗಾಂಧಿ ಹೇಳಿರಬಹುದು ಎಂದರು.

Add Asianetnews Kannada as a Preferred SourcegooglePreferred

ದ್ವೇಷದ ರಾಜಕಾರಣ ಮಾಡುತ್ತಿಲ್ಲ: ಬಿಜೆಪಿ ಹಗರಣದ ವಿಷಯದಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಕೆಲವು ಭ್ರಷ್ಟಾಚಾರಗಳು ನಡೆದಿರುವ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರದಿಂದ ತನಿಖೆಯ ಉಸ್ತುವಾರಿಗೆ ಸಚಿವರ ಸಮಿತಿ ರಚಿಸಲಾಗಿದೆ. ಆದರೆ, ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ತನಿಖೆ ನಡೆದರೆ ತಪ್ಪೇನು ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರನ್ನು ಭೇಟಿಯಾಗಿರುವ ಕುರಿತು ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ಅವರೊಂದಿಗೆ ಕುಳಿತು ಚಹಾ ಸೇವಿಸಿದ್ದೇನೆ. ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದರು.

ಸಿಎಂ ಬದಲಾವಣೆ ವಿಚಾರ ಕೇಳ್ಬೇಡಿ: ನಿಮ್ಮ ಕೈ ಮುಗಿಯುತ್ತೇನೆ. ದಯವಿಟ್ಟು ಸಿಎಂ ಬದಲಾವಣೆ ವಿಚಾರ ಬಿಟ್ಟು ಬೇರೆ ವಿಷಯ ಕೇಳಿ ಪ್ಲೀಸ್‌..ಪ್ಲೀಸ್‌.. ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸೋಮವಾರ ಮಾಧ್ಯಮದವರು ಸಿಎಂ ಬದಲಾವಣೆ ವಿಚಾರ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಪ್ಲೀಸ್‌ .. ಪ್ಲೀಸ್‌... ಸಿಎಂ ವಿಚಾರ ಬಿಟ್ಟು ಬೇರೆ ಅಭಿವೃದ್ಧಿ ವಿಚಾರವಾಗಿ ಕೇಳಿ. ನಾವಾದರೂ ಎಷ್ಟು ಬಾರಿ ಹೇಳುವುದು? ನಿಮಗೆ ಕೈ ಮುಗಿಯುತ್ತೇನೆ. ಸಿಎಂ ಬದಲಾವಣೆ ವಿಚಾರ ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದರು.

ಸಿಎಂ ಆಗುವ ಆಸೆ ಇದೆ, ಸದ್ಯ ರೇಸ್‌ನಲ್ಲಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೀಪಾವಳಿ ಹಬ್ಬದೊಳಗೆ ಪತನವಾಗುತ್ತದೆ ಎಂದು ಬಿಜೆಪಿಯ ಸಿ.ಟಿ.ರವಿ ಹೇಳಿದಾಕ್ಷಣ, ಸರ್ಕಾರ ಬಿದ್ದು ಬಿಡುತ್ತದೆಯೇ ಎಂದು ಪ್ರಶ್ನಿಸಿದ ಅವರು, ಅವರು ಹೇಳಿರುವುದನ್ನು ತೆಗೆದುಕೊಂಡು ನಾನೇನು ಮಾಡಲಿ. ನಿತ್ಯ ನೂರು ಜನರು ನೂರು ತರಹದ ಹೇಳಿಕೆ ಕೊಡುತ್ತಾರೆ. ರವಿ ಹೇಳಿದನೋ ಇಲ್ಲವೆ ಮತ್ತ್ಯಾರೋ ಹೇಳಿದರೊ ಅದನ್ನು ತೆಗೆದುಕೊಂಡು ನಾನೇನ್‌ ಮಾಡಲಿ. ಅಲ್ಲಿ ಹೇಳಿದ್ದನ್ನು ಇಲ್ಲಿ ಕೇಳುತ್ತೀರಿ. ಇಲ್ಲಿ ಹೇಳಿದ್ದನ್ನು ಅಲ್ಲಿ ಕೇಳುತ್ತೀರಿ. ಅದು ನಮಗೆ ಸಂಬಂಧ ಪಟ್ಟಟ್ಟಿದ್ದಲ್ಲ. ಒಬ್ಬರು ಹೇಳಿದರೆ ಸರ್ಕಾರ ಬೀಳುತ್ತದೆಯೇ ಮರುಪ್ರಶ್ನಿಸಿದರು.