ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಕಾಂಗ್ರೆಸ್ಸಿನ ಹಾಲಿ ಮೂವರು ಶಾಸಕರನ್ನು ಆಡಳಿತಾರೂಢ ಬಿಜೆಪಿಗೆ ಕರೆತರುವ ಪ್ರಯತ್ನ ಗಂಭೀರವಾಗಿ ನಡೆದಿದೆ.

ಬೆಂಗಳೂರು (ನ.19): ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಕಾಂಗ್ರೆಸ್ಸಿನ ಹಾಲಿ ಮೂವರು ಶಾಸಕರನ್ನು ಆಡಳಿತಾರೂಢ ಬಿಜೆಪಿಗೆ ಕರೆತರುವ ಪ್ರಯತ್ನ ಗಂಭೀರವಾಗಿ ನಡೆದಿದೆ. ಭಾನುವಾರ ಬಳ್ಳಾರಿಯಲ್ಲಿ ನಡೆಯಲಿರುವ ಬಿಜೆಪಿಯ ಎಸ್‌ಟಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲೇ ಈ ಮುಖಂಡರು ಕಾಂಗ್ರೆಸ್‌ ತೊರೆದು ಬಿಜೆಪಿ ಬರಬೇಕು ಎಂಬ ದಿಕ್ಕಿನಲ್ಲಿ ತೆರೆಮರೆಯಲ್ಲಿ ಪ್ರಯತ್ನಗಳು ನಡೆದಿದ್ದವು. ಆದರೆ, ಆ ಕಾಂಗ್ರೆಸ್‌ ಮುಖಂಡರು ಈವರೆಗೆ ಹಸಿರು ನಿಶಾನೆ ತೋರಿಲ್ಲ ಎಂದು ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ಮುಂಬರುವ ಚುನಾವಣೆಯಲ್ಲಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು ಎಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಹಲವು ರೀತಿಯ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದು, ಅದರಲ್ಲಿ ಕಾಂಗ್ರೆಸ್‌ ಪ್ರಬಲವಾಗಿರುವ ಕ್ಷೇತ್ರಗಳಲ್ಲಿನ ಹಾಲಿ ಶಾಸಕರು ಅಥವಾ ಮಾಜಿ ಶಾಸಕರನ್ನು ಕರೆತರುವ ಒಂದು ತಂತ್ರವೂ ಅಡಗಿದೆ ಎನ್ನಲಾಗಿದೆ.

JDS Pancharatna Rathayatra: ಮೈತ್ರಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ

ಸಂತೋಷ್‌ ಲಾಡ್‌ ಅವರು ಕಳೆದ ಬಾರಿ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಮೂಲತಃ ಬಳ್ಳಾರಿ ಜಿಲ್ಲೆಯವರು. ಹೀಗಾಗಿ, ಸಂತೋಷ್‌ ಲಾಡ್‌ ಅವರೊಂದಿಗೆ ಹಾಲಿ ಶಾಸಕರಾದ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಇ.ತುಕಾರಾಂ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ.ನಾಗೇಂದ್ರ ಹಾಗೂ ನೂತನ ವಿಜಯನಗರ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಜೆ.ಎನ್‌.ಗಣೇಶ್‌ ಬಿಜೆಪಿಗೆ ಕರೆತರುವ ಕಸರತ್ತು ನಡೆದಿದೆ. ಅಂತಿಮವಾಗಿ ಈ ಪೈಕಿ ಯಾರೆಲ್ಲ ಬಿಜೆಪಿಗೆ ಬರಬಹುದು ಎಂಬುದು ಸ್ಪಷ್ಟವಾಗಿಲ್ಲ.

ಸಿದ್ದುರಿಂದ ಬ್ರೇಕ್‌: ಈ ನಡುವೆ ತಮ್ಮ ಪಕ್ಷದ ಹಾಲಿ ಶಾಸಕರು ಹಾಗೂ ಮುಖಂಡರನ್ನು ಬಿಜೆಪಿಯತ್ತ ಸೆಳೆಯುತ್ತಿರುವ ಬೆಳವಣಿಗೆ ಗೊತ್ತಾದ ಬೆನ್ನಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದು, ಸದ್ಯಕ್ಕೆ ಬಿಜೆಪಿಯ ಈ ಪ್ರಯತ್ನಕ್ಕೆ ಬ್ರೇಕ್‌ ಹಾಕಿದಂತಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Bengaluru Tech Summit: ಬೆಂಗಳೂರಿಗೆ 5 ವರ್ಷದಲ್ಲಿ ಆರ್ಥಿಕ ರಾಜಧಾನಿ ಪಟ್ಟ: ಸಿಎಂ ಬೊಮ್ಮಾಯಿ

ಬಿಜೆಪಿಗರ ಲೆಕ್ಕಾಚಾರ ಏನು?: ಲಾಡ್‌ ಅವರಿಗೆ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವ ಬಗ್ಗೆ ಅನುಮಾನದ ವದಂತಿಗಳು ಹಬ್ಬುತ್ತಿದ್ದಂತೆಯೇ ಚುರುಕಾದ ಬಿಜೆಪಿ ನಾಯಕರು ಅವರನ್ನು ತಮ್ಮ ಪಕ್ಷಕ್ಕೆ ಕರೆತರುವ ಪ್ರಯತ್ನ ಆರಂಭಿಸಿದರು. ಹಾಲಿ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದಿನ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ, ಸಂತೋಷ್‌ ಲಾಡ್‌ ಅವರನ್ನು ಕರೆತಂದರೆ ಸುಲಭವಾಗಿ ಗೆಲ್ಲಬಹುದು. ಜತೆಗೆ ಅವರಿಗೆ ಆಪ್ತರಾಗಿರುವ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ಸಿನ ಕೆಲವು ಶಾಸಕರೂ ಸೇರಿದಂತೆ ಮುಖಂಡರನ್ನು ಕರೆತರಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.