* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ  ಬಿಟ್ ಕಾಯಿನ್ ಹಗರಣ* ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಪ್ರತಿಕ್ರಿಯೆ* ರಾಜ್ಯದ ಬಿಟ್ ಕಾಯಿನ್ ಹಗರಣದಲ್ಲಿ ಮೋದಿ ಹೆಸರು ಎತ್ತಿದ ಕುಮಾರಸ್ವಾಮಿ

ಬೆಂಗಳೂರು, (ನ.13): ಬಿಟ್​ ಕಾಯಿನ್ ಹಗರಣ (Bitcoin Scam) ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಾಂಗ್ರೆಸ್-ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪಕ್ಕಿಳಿದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಈ ವಿಚಾರಕ್ಕೆ ಬೆಂಗಳೂರಿನಲ್ಲಿ ಇಂದು (ನ.13) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ(HD Kumaraswamy), 58 ಸಾವಿರ ಕೋಟಿ ರೂಪಾಯಿ ಹಗರಣ ಎಂಬ ವರದಿ ಇದೆ. ರಾಜ್ಯದ ಆರೋಪಿಯನ್ನು 8-10 ಬಾರಿ ಬಂಧಿಸಿದ್ದಾರೆ. 2020ರ ನವೆಂಬರ್​ನಿಂದ ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಅಮೆರಿಕಗೆ ತೆರಳಿದ್ದ ವೇಳೆ ಅಮೆರಿಕದ ತನಿಖಾ ಸಂಸ್ಥೆಗಳು ಪ್ರಧಾನಿಗೆ ಮಾಹಿತಿ ನೀಡಿವೆ. ಪ್ರಧಾನಿ ಮೌನವಾಗಿದ್ದಾರೆ ಎಂದರೆ ಮುಚ್ಚಿ ಹಾಕ್ತಾರೆ ಎಂದಲ್ಲ ಎಂದು ಹೇಳುವ ಮೂಲಕ ತನಿಖಾ ಸಂಸ್ಥೆಗಳ ದಿಕ್ಕುತಪ್ಪಿಸದಂತೆ ಕಾಂಗ್ರೆಸ್​ಗೆ ಮನವಿ ಮಾಡಿದ್ದಾರೆ.

Bitcoin Scam: ಕಾಂಗ್ರೆಸ್‌ನಿಂದ ಬಿಟ್ ಕಾಯಿನ್ ಮಾಹಿತಿ ಬಹಿರಂಗ

ಯಾವುದೇ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಹ್ಯಾಕಿಂಗ್ ಈಗ ಆರಂಭವಾಗಿಲ್ಲ, 2016ರಿಂದಲೇ ಇದೆ. ಯುಬಿ ಸಿಟಿ ಹೋಟೆಲ್​ ಗಲಾಟೆ ವೇಳೆಯೇ ಹೇಳಿದ್ದೆ. ಇದು ಗಲಾಟೆಯಲ್ಲ ಹ್ಯಾಕಿಂಗ್ ಪ್ರಕರಣ ಎಂದು ಹೇಳಿದ್ದೆ. ಪಶ್ಚಿಮಬಂಗಾಳದ ವ್ಯಕ್ತಿಯನ್ನು ಕರೆ ತಂದು ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಶ್ರೀಕಿ, ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರು ಬೆಳಕಿಗೆ ಬಂದಿದೆ. ಪ್ರಧಾನಿ ಅಮೆರಿಕಗೆ ಹೋಗದಿದ್ದರೆ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದು ತಿಳಿಸಿದರು.

15 ದಿನ ಕೊಟ್ಟರೆ ನಾನು ಮಾಹಿತಿ ಸಂಗ್ರಹಿಸುವೆ: 
ಬಿಟ್​ ಕಾಯಿನ್ ಕೇಸ್ ಬಗ್ಗೆ ನನಗೆ 15 ದಿನ ಟೈಮ್ ಬೇಕು. ನನ್ನದೇ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇನೆ. 15-20 ದಿನ ಟೈಮ್​ ಕೊಟ್ಟರೆ ಮಾಹಿತಿ ಸಂಗ್ರಹಿಸುವೆ. ತನಿಖೆ ನಡೆಸುವ ಬಗ್ಗೆ ಪ್ರಧಾನಿ ಮೇಲೆ ನಂಬಿಕೆ ಇಡೋಣ ಎಂದು ಎಂದರು.

ಕುಟುಂಬ ರಾಜಕಾರಣ ಆರೋಪಕ್ಕೆ ತಿರುಗೇಟು
ಜೆಡಿಎಸ್​ನವರದು ಕುಟುಂಬ ರಾಜಕಾರಣ ಎಂದು ಬಿಜೆಪಿ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಶಾಸಕ ಅಪ್ಪಚ್ಚು ರಂಜನ್ ಸಹೋದರ ಪರಿಷತ್ ಸದಸ್ಯ. ಜಗದೀಶ್ ಶೆಟ್ಟರ್ ತಮ್ಮ ಎಂಎಲ್​ಸಿ, ಉದಾಸಿ ಕುಟುಂಬವೂ ಇದೆ. ಹೀಗೆ ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತಾಡಬೇಡಿ. ಬಿಜೆಪಿಯವರದ್ದು ಯಾವ ರಾಜಕಾರಣ? ಬಿಜೆಪಿಯವರದ್ದು ಲೂಟಿ ಹೊಡೆಯೋ ರಾಜಕಾರಣನಾ? ಪರ್ಸೆಂಟೇಜ್ ರಾಜಕಾರಣವಾ ಎಂದು ವಾಗ್ದಾಳಿ ನಡೆಸಿದರು.

ಬಿಟ್‌ ಕಾಯಿನ್‌ ಹಗರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೊದಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಇದಕ್ಕೆ ಮೋದಿ, ಅದ್ಯಾವುದನ್ನ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿ ಕಳುಹಿಸಿದ್ದಾರೆ. ಹೀಗಂತ ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮೋದಿಗೆ ಮೊದಲೇ ಗೊತ್ತಾ?
ಯೆಸ್‌...ಕುಮಾರಸ್ವಾಮಿ ಅವರ ಈ ಮಾತುಗಳನ್ನ ಕೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಿಟ್ ಕಾಯಿನ್ ಹಗರಣದ ಮಾಹಿತಿ ಇದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅಮೆರಿಕಾದ ತನಿಖಾ ಸಂಸ್ಥೆಗಳು ಈ ಬಿಟ್ ಕಾಯಿನ್‌ ಬಗ್ಗೆ ಮೋದಿ ಅವರಿಗೆ ತಿಳಿಸಿವೆ ಎಂದು ಎಚ್ಡಿಕೆ ಹೇಳಿದ್ದು ಈ ಕೇಸ್‌ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸುವ ಸಾಧ್ಯತೆಗಳಿವೆ.