ಘಟಬಂಧನ್ನಿಂದ ದೂರ ಉಳಿದ ಪ್ರಬಲ ಪಕ್ಷಗಳು : ಕಾಂಗ್ರೆಸ್ ಗೆ ಶಾಕ್
ಲೋಕಸಭಾ ಚುನಾವಣೆಗೆ ಮಹಾಘಟಬಂಧನ್ ರಚಿಸಿಕೊಂಡು ಅಧಿಕಾರ ಗದ್ದುಗೆಗೆ ಏರಲು ಯತ್ನಿಸುತ್ತಿರುವ ವಿಪಕ್ಷಗಳಿಗೆ 2 ಪಕ್ಷಗಳು ಶಾಕ್ ನೀಡಿವೆ. BSP ಹಾಗೂ SP ತಾವೇ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ.
ಲಕ್ನೋ : ಅಖಿಲೇಶ್ ಯಾದವ್ ಹಾಗೂ BSP ಮುಖಂಡೆ ಮಾಯಾವತಿ ಜಂಟಿ ಶನಿವಾರ ಸುದ್ದಿಗೋಷ್ಠಿ ನಡೆಸಲಿದ್ದು, ಈ ವೇಳೆ ಮುಂದಿನ ಚುನಾವಣೆಗೆ ಮೈತ್ರಿ ಘೋಷಿಸುವ ಸಾಧ್ಯತೆ ಇದೆ.
ಶನಿವಾರ ಲಕ್ನೋ ಹೋಟೆಲ್ ಒಂದರಲ್ಲಿ ಉಭಯ ನಾಯಕರು ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಡೆ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಒಂದು ವಾರಗಳಿಂದ 2 ಪಕ್ಷಗಳ ಮುಖಂಡರ ನಡುವೆ ಮಾತುಕತೆ ನಡೆಯುತ್ತಿದ್ದು, ಕಾಂಗ್ರೆಸ್ ಮಹಾಘಟಬಂಧನ್ ದಿಂದ ದೂರ ಉಳಿದು ತಮ್ಮ ನಡುವೆ ಮೈತ್ರಿ ರಚಿಸಿ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಭದ್ರಕೋಟೆಯನ್ನು ರಚಿಸಿಕೊಂಡು ಗೆಲ್ಲಲು BSP ಹಾಗೂ SP ತಯಾರಿಯಲ್ಲಿ ತೊಡಗಿವೆ.
ಮೈನಿಂಗ್ ಹಗರಣ ಸಂಬಂಧ ಅಖಿಲೇಶ್ ಯಾದವ್ ವಿಚಾರಣೆ ಎದುರಿಸುತ್ತಿದ್ದ ವೇಳೆ ಮಾಯಾವತಿ ಅಖಿಲೇಶ್ ಯಾದವ್ ಅವರಿಗೆ ಯಾವುದೇ ಕಾರಣಕ್ಕೂ ಅಂಜುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದು ಈ ಎಲ್ಲಾ ಹೇಳಿಕೆಗಳೂ ಕೂಡ ಮೈತ್ರಿಯ ಬಗ್ಗೆ ಸುಳಿವು ನೀಡಿವೆ.
ಇತ್ತ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಕ್ಕೂಟದಿಂದ 2 ಪ್ರಬಲ ಪಕ್ಷಗಳು ದೂರ ಉಳಿಯುವಿಕೆ ಹೆಚ್ಚನ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ.