Asianet Suvarna News Asianet Suvarna News

ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!

ಜಿಲ್ಲೆಯಲ್ಲಿ 2022ರ ಮಳೆಹಾನಿ ಸಂಬಂಧ ವೀಕ್ಷಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದಿದ್ದ ವೇಳೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Afraid to come to Kodagu Siddaramaiah and DK Shivakumar Jodi Prajadhwani Yatra gvd
Author
First Published Feb 10, 2023, 10:23 PM IST

ವರದಿ: ರವಿ.ಎಸ್.ಹಳ್ಳಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಫೆ.10): ಜಿಲ್ಲೆಯಲ್ಲಿ 2022ರ ಮಳೆಹಾನಿ ಸಂಬಂಧ ವೀಕ್ಷಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದಿದ್ದ ವೇಳೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಮಡಿಕೇರಿ ಮತ್ತು ಕುಶಾಲನಗರ ತಾಲ್ಲೂಕಿನ ಗುಡ್ಡೆ ಹೊಸೂರಿನಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಬಳಿಕ ಸೋಮವಾರಪೇಟೆ ಮತ್ತು ಶನಿವಾರಸಂತೆಗಳಲ್ಲಿ ನಿಂತು ಗುಟುರು ಹಾಕಿದ್ದ ಟಗರು, ರಾಜ್ಯದಿಂದೆಲ್ಲಾ ಲಕ್ಷಾಂತರ ಕಾರ್ಯಕರ್ತರನ್ನು ಕರೆಸಿ ಮಡಿಕೇರಿ ಚಲೋ ಮಾಡುವುದಾಗಿ ಸವಾಲು ಹಾಕಿದ್ದರು. ಆದರೆ ಸವಾಲು ಹಾಕಿ ಹಲವು ತಿಂಗಳೇ ಕಳೆದರೂ ಸಿದ್ದರಾಮಯ್ಯ ಆಗಲಿ, ಕಾಂಗ್ರೆಸ್‍ನ ರಾಜ್ಯ ಮುಖಂಡರಾಗಲಿ ಇತ್ತ ತಿರುಗಿಯೂ ನೋಡಿಲ್ಲ. 

ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಎಲ್ಲಾ ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಿದರೂ, ಕೊಡಗಿಗೆ ಮಾತ್ರ ಹೆಜ್ಜೆ ಇಟ್ಟಿಲ್ಲ. ಹೌದು ಕೊಡಗಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಿದೆ. ಆದರೆ ಮಧ್ಯದಲ್ಲಿರುವ ಕೊಡಗು ಜಿಲ್ಲೆಗೆ ಎಂಟ್ರಿಯೇ ಆಗಿಲ್ಲ. ಇದನ್ನು ನೋಡಿದರೆ ಕೊಡವ ಮತದಾರರ ಕಂಡ್ರೆ ಸಿದ್ದರಾಮಯ್ಯಗೆ ಭಯವಾಯ್ತಾ ಎನ್ನುವ ಅನುಮಾನ ಕಾಡುತ್ತಿದೆ. ಅಥವಾ ಕೊಡವರ ಮಾರಣ ಹೋಮ ನಡೆಸಿದ ಎನ್ನಲಾಗುತ್ತಿರುವ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಾ ಎನ್ನುವ ಒಳ ಲೆಕ್ಕಚಾರದಿಂದ ಕಾಂಗ್ರೆಸ್, ಸಿದ್ದರಾಮಯ್ಯ ಅವರಿದ್ದ ಪ್ರಜಾಧ್ವನಿ ಯಾತ್ರೆಯನ್ನು ಜಿಲ್ಲೆಗೆ ಬರಲು ಸುತಾರಾಮ್ ಒಪ್ಪಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. 

ಬಾಕಿ ವಿದ್ಯುತ್ ಬಿಲ್ ಕಟ್ಟದೆ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಕುತ್ತು!

ಹೀಗಾಗಿಯೇ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಿದರೂ ಕೊಡಗು ಜಿಲ್ಲೆಗೆ ಮುಖ ಮಾಡಿಲ್ಲ ಎನ್ನುವುದು ಜನವಲಯಗಳಲ್ಲಿ ಕೇಳಿ ಬರುತ್ತಿದೆ. ಆ ಕುರಿತು ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ಕೇಳಿದರೆ ಹೆದರಿಕೆ ಎನ್ನುವುದು ರಾಜಕೀಯ ಜೀವನದಲ್ಲಿ ಯಾರಿಗೂ ಇಲ್ಲ. ಭಯ ಎಂಬುದು ಇರದಂತಹ ವ್ಯವಸ್ಥೆಯನ್ನು ಸೃಷ್ಟಿ ಮಾಡುವುದೇ ಕಾಂಗ್ರೆಸ್‍ನ ಕೆಲಸ. ರಾಜ್ಯ ನಾಯಕರ ಒತ್ತಡದ ನಡುವೆ ಕೊಡಗಿಗೆ ಪ್ರಜಾಧ್ವನಿಯಾತ್ರೆ ಬರಲು ಸಾಧ್ಯವಾಗಿಲ್ಲ ಅಷ್ಟೆ. ಮೂರನೇ ಹಂತದ ಪ್ರಜಾಧ್ವನಿಯಾತ್ರೆಯು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕಕ್ಕೂ, ಡಿಕೆಶಿ ಅವರ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕದಲ್ಲೂ ಸಂಚರಿಸಲಿದೆ. 

ಈ ವೇಳೆ ಕೊಡಗಿಗೂ ಪ್ರಜಾಧ್ವನಿಯಾತ್ರೆ ಬರಲಿದೆ. ಕೊಡಗಿನ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವುದಕ್ಕಾಗಿ ರಾಜ್ಯನಾಯಕರು ಪಣತೊಟ್ಟಿದ್ದಾರೆ ಎಂದು ಕೊಡಗು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದ್ದಾರೆ. ಒಂದು ವೇಳೆ ಮುಂದೆ ಪ್ರಜಾಧ್ವನಿಯಾತ್ರೆ ಕೊಡಗಿಗೆ ಬಂದರೂ ಅದು ಡಿಕೆಶಿ ನೇತೃತ್ವದ ಯಾತ್ರೆ ಬರುತ್ತದೆ ಎನ್ನುವುದನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸುತ್ತಿದ್ದಾರೆ. ಅರ್ಥಾತ್ ಸಿದ್ದರಾಮಯ್ಯ ಅವರು ಕೊಡಗಿಗೆ ಬರುವುದಿಲ್ಲ, ಬಂದರೆ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಖಚಿತ ಅಂತಲೇ ಇರಬಹುದೇ.? ಇನ್ನು ಈ ಕುರಿತು ಬಿಜೆಪಿ ಶಾಸಕರನ್ನು ಕೇಳಿದರೆ ಅದು ನಮಗೆ ಗೊತ್ತಿಲ್ಲ, ಅವರ ಪಕ್ಷದವರನ್ನೇ ಕೇಳಬೇಕು. 

ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ!

ಅವರ ಯಾತ್ರೆ ಜಿಲ್ಲೆಗೆ ಬಂದರೂ ಮುಂದೆ ಬರಬಹುದೇನೋ ಎಂದು ಹೇಳುವ ಮೂಲಕ ಅವರ ಸಹಜವಾಸ ನಮಗೇಕೆ. ನಾವ್ಯಾಕೆ ಅವರನ್ನು ಕೆಣಕುವುದು ಎನ್ನುವ ಭಯ ಇದ್ದಂತೆ ಇದೆ. ಆದರೆ ನಮ್ಮ ಪಕ್ಷದಿಂದ ಮುಂದಿನ ದಿನಗಳಲ್ಲಿ ನಾಲ್ಕು ತಂಡಗಳಾಗಿ ಜಿಲ್ಲೆಗೆ ಭೇಟಿ ಕೊಟ್ಟು ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಒಟ್ಟಿನಲ್ಲಿ ಒಂದೆಡೆ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಲೆಕ್ಕಾಚಾರದಲ್ಲಿದ್ದರೆ, ಬಿಜೆಪಿ ಸುಮ್ಮನಿರುವವರನ್ನು ನಾವ್ಯಾಕೆ ಕೆಣುಕುವುದು ಎಂದು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಹಾಗೆ ಇದೆ.

Follow Us:
Download App:
  • android
  • ios