ವಿಧಾನಸಭಾ ಚುನಾವಣೆಗೆ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ನೀಡಿದರೂ ಎಲ್ಲಾ ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಹಂಚಿಕೆ ಮಾಡಲಾಗಿದೆ. 224 ಕ್ಷೇತ್ರಗಳ ಪೈಕಿ 198 ಕ್ಷೇತ್ರದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. 

ಬೆಂಗಳೂರು (ಏ.20): ವಿಧಾನಸಭಾ ಚುನಾವಣೆಗೆ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ನೀಡಿದರೂ ಎಲ್ಲಾ ಸಮುದಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಹಂಚಿಕೆ ಮಾಡಲಾಗಿದೆ. 224 ಕ್ಷೇತ್ರಗಳ ಪೈಕಿ 198 ಕ್ಷೇತ್ರದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಏಳು ಕ್ಷೇತ್ರದಲ್ಲಿ ಇತರರಿಗೆ ಬಾಹ್ಯ ಬೆಂಬಲ ನೀಡಿದೆ. ಇನ್ನು 10 ಕ್ಷೇತ್ರದಲ್ಲಿ ಟಿಕೆಟ್‌ ಹಂಚಿಕೆ ಮಾಡಬೇಕಿದೆ.

ಒಕ್ಕಲಿಗ ಸಮುದಾಯಕ್ಕೆ 54, ಲಿಂಗಾಯತರಿಗೆ 37, ಪರಿಶಿಷ್ಟ ಜಾತಿಗೆ 32, ಪರಿಶಿಷ್ಟ ಪಂಗಡಕ್ಕೆ 12, ಮುಸ್ಲಿಂರಿಗೆ 18 ಟಿಕೆಟ್‌ ನೀಡಲಾಗಿದೆ. ಹಿಂದುಳಿದ ವರ್ಗದ 31 ಮಂದಿಗೆ ಅವಕಾಶ ಒದಗಿಸಲಾಗಿದೆ. ಈ ಪೈಕಿ ಕುರುಬ 10, ಈಡಿಗ-7, ಉಪ್ಪಾರ, ಬಲಿಜಿಗ ಸಮುದಾಯದಲ್ಲಿ ತಲಾ ಇಬ್ಬರಿಗೆ, ನೇಕಾರ, ಮಡಿವಾಳ, ಕೋಲಿ, ಕ್ಷತಿಯ, ನಾಯ್ಡು, ತಿಗಳ, ಕುಂಬಾರ, ಅಕ್ಕಸಾಲಿಗ, ನಾಯ್ಡು, ಕೊಂಕಣಿ ಸಮುದಾಯಕ್ಕೆ ತಲಾ ಒಬ್ಬರಿಗೆ ಟಿಕೆಟ್‌ ನೀಡಲಾಗಿದೆ. ಇತರೆ ವರ್ಗದಲ್ಲಿ ಮರಾಠ - 5, ಬಂಟ್ಸ್‌ - 4, ಜೈನ್‌, ಬ್ರಾಹ್ಮಣ, ಜಿಎಸ್‌ಬಿ, ರೆಡ್ಡಿ, ಕೊಡವ ಸಮುದಾಯಕ್ಕೆ ತಲಾ ಒಬ್ಬರಿಗೆ ಟಿಕೆಟ್‌ ನೀಡಲಾಗಿದೆ.

ಯಡಿಯೂರಪ್ಪ ನಿವಾಸಕ್ಕೆ ಶಾಸಕ ಬಸನಗೌಡ ಯತ್ನಾಳ್‌ ಭೇಟಿ

ಮಂಡ್ಯ ಜೆಡಿಎಸ್‌ನಲ್ಲಿ ಭುಗಿಲೆದ್ದ ಬಂಡಾಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಬಿ.ಆರ್‌. ರಾಮಚಂದ್ರ ಅವರ ಕೈ ಸೇರಿದ ಬೆನ್ನ ಹಿಂದೆಯೇ ಮಂಡ್ಯ ಜೆಡಿಎಸ್‌ನಲ್ಲಿ ಬಂಡಾಯ ಭುಗಿಲೆದ್ದಿದೆ. ಟಿಕೆಟ್‌ ವಂಚಿತ ಹಾಲಿ ಶಾಸಕ ಎಂ. ಶ್ರೀನಿವಾಸ್‌ ದಳಪತಿಗಳಿಗೆ ಸೆಡ್ಡು ಹೊಡೆದಿದ್ದಾರೆ. ಸ್ವಾಭಿಮಾನಿ ಪಡೆ ಕಟ್ಟಿಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. ಜೆಡಿಎಸ್‌ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ತಮ್ಮ ಹೆಸರನ್ನು ಅಧಿಕೃತವಾಗಿ ಘೋಷಿಸಿ ಈಗ ಬೇರೊಬ್ಬರಿಗೆ ಟಿಕೆಟ್‌ ನೀಡಿದ್ದರಿಂದ ನಿರಾಸೆಗೊಳಗಾಗಿರುವ ಎಂ.ಶ್ರೀನಿವಾಸ್‌ ಅವರು ಗುರುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಟಿಕೆಟ್‌ ಕೈತಪ್ಪಿದ್ದರಿಂದ ಮಂಡ್ಯದ ಅವರ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಎಂ.ಶ್ರೀನಿವಾಸ್‌, ಸ್ವಾಭಿಮಾನಿ ಪಡೆ ಹೆಸರಿನಲ್ಲಿ ತಂಡವನ್ನು ರಚಿಸಿಕೊಂಡು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರ ಎಂ.ಶ್ರೀನಿವಾಸ್‌, ಎಚ್‌.ಎನ್‌. ಯೋಗೇಶ್‌, ಕೆ ಎಸ್‌. ವಿಜಯಾನಂದ, ಹಾಗೂ ಹೆಚ್‌.ಎಸ್‌.ಮಂಜು ಅವರು ಉಮೇದುವಾರಿಕೆ ಸಲ್ಲಿಸಲು ನಿರ್ಧರಿಸಿದ್ದಾರೆ. 

ಅರವಿಂದ ಬೆಲ್ಲದ ನಿವಾಸದಲ್ಲಿ ಆಂತರಿಕ ಸಭೆ ನಡೆಸಿದ ನಡ್ಡಾ: ಮೂರುಸಾವಿರ ಮಠಕ್ಕೆ ಭೇಟಿ

ಮಂಡ್ಯ ಕ್ಷೇತ್ರಕ್ಕೆ ಸೇರದವರೊಬ್ಬರಿಗೆ ಟಿಕೆಟ್‌ ನೀಡಿರುವ ದಳಪತಿಗಳ ನಿರ್ಧಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಎಂ.ಶ್ರೀನಿವಾಸ್‌ ಅವರು ಸ್ವಾಭಿಮಾನಿ ಪಡೆ ಹೆಸರನ್ನು ಇಟ್ಟುಕೊಂಡು ಚುನಾವಣಾ ಅಖಾಡ ಪ್ರವೇಶಿಸುವ ತೀರ್ಮಾನ ಕೈಗೊಂಡಿರುವುದು ಜೆಡಿಎಸ್‌ನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.