ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಗೆ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು  ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಯಾರು ಮುಂದುವರೆಯುತ್ತಾರೆ ಕೆಲ ಹಳಬರು ಔಟ್ ಆಗಿ -ಹಲವು ಹೊಸಬರಿಗೆ ಚಾನ್ಸ್?

 ಬೆಂಗಳೂರು (ಅ.02): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ರಚನೆಗೆ ತೆರೆಮರೆಯಲ್ಲಿ ಸಾಕಷ್ಟುಕಸರತ್ತು ನಡೆದಿದ್ದು, ಕಳೆದ ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಯಾರು ಮುಂದುವರೆಯುತ್ತಾರೆ ಹಾಗೂ ಹೊಸಬರು ಯಾರು ಸೇರ್ಪಡೆಯಾಗಬಹುದು ಎಂಬುದು ಇಂದು ಸ್ಪಷ್ಟವಾಗುವ ಸಂಭವವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಅಥವಾ ಮೂರು ಬಾರಿ ಸಚಿವರಾಗಿರುವವರಿಗೆ ಈ ಬಾರಿ ಹೊಸ ಸಂಪುಟದಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂಬ ವದಂತಿ ಇದ್ದರೂ ಅಂತಿಮವಾಗಿ ಹೆಚ್ಚಿನವರು ಮುಂದುವರೆಯುವ ಸಾಧ್ಯತೆಯೇ ಕಂಡು ಬರುತ್ತಿದೆ. ಇಬ್ಬರು ಅಥವಾ ಮೂವರು ಹಿರಿಯರು ಹೊರಗುಳಿಯಬೇಕಾಗಬಹುದು ಎನ್ನಲಾಗುತ್ತಿದೆ.

ಸಂಪುಟ ಕಸರತ್ತು ಇಂದು ಫೈನಲ್: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ!

ಚುನಾವಣೆಗೆ ಒಂದೂ ಮುಕ್ಕಾಲು ವರ್ಷ ಉಳಿದಿರುವುದರಿಂದ ಅನಗತ್ಯವಾಗಿ ಗೊಂದಲ ಮಾಡಿಕೊಳ್ಳುವುದು ಬೇಡ ಎಂಬ ನಿಲವಿಗೆ ಬಂದಿರುವ ಬಿಜೆಪಿ ನಾಯಕರು ಕೆಲವು ಹೊಸಬರಿಗೆ ಮಾತ್ರ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ. ಹೇಗಿದ್ದರೂ ರಮೇಶ್‌ ಜಾರಕಿಹೊಳಿ ಅವರಿಂದ ತೆರವಾದ ಸ್ಥಾನವಿತ್ತು. ಜಗದೀಶ್‌ ಶೆಟ್ಟರ್‌ ಸಂಪುಟ ಸೇರುವುದಿಲ್ಲ ಎಂದಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಇಬ್ಬರು ಅಥವಾ ಮೂವರಿಗೆ ಕೊಕ್‌ ನೀಡುವ ಮೂಲಕ ಐದಾರು ಮಂದಿ ಹೊಸಬರಿಗೆ ಸಚಿವ ಸ್ಥಾನ ನೀಡುವ ಸಂಭವವಿದೆ.

ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಮೂಲ ಮತ್ತು ವಲಸೆ ಬಂದವರಿಂದಾಗಿ ಬೆಂಗಳೂರು, ಬೆಳಗಾವಿ ಜಿಲ್ಲೆಗಳಿಗೆ ಸಂಪುಟದಲ್ಲಿ ಸಿಂಹ ಪಾಲು ಸಿಕ್ಕಿತ್ತು. ಈ ಬಾರಿ ಇವುಗಳಲ್ಲಿ ಕಡಿತಗೊಳ್ಳುವ ಸಾಧ್ಯತೆಯಿದೆ. ಪ್ರಾದೇಶಿಕ ಮತ್ತು ಜಾತಿ ಸಮೀಕರಣಕ್ಕೂ ಒತ್ತು ನೀಡುವ ಮೂಲಕ ಇದ್ದುದರಲ್ಲೇ ಕ್ರಿಯಾಶೀಲ ತಂಡವೊಂದನ್ನು ಕಟ್ಟುವ ಪ್ರಯತ್ನ ನಡೆದಿದೆ.

ಹಿಂದುತ್ವದ ಪ್ರತಿಪಾದನೆಯುಳ್ಳ ಯುವ ಶಾಸಕರಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಸೆಯನ್ನು ಮುಂದಿಟ್ಟಿರುವ ಸಂಘ ಪರಿವಾರದ ಮುಖಂಡರು ವಿ.ಸುನೀಲ್‌ಕುಮಾರ್‌, ದತ್ತಾತ್ರೇಯ ಪಾಟೀಲ್‌ ರೇವೂರು ಮತ್ತಿತರರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಒಟ್ಟಾರೆ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿ ಎಂಬ ಸಲಹೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.