Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರ ಉರುಳಿಸಲು 50 ಜನ ಶಾಸಕರು ಸಿದ್ಧ: ಸುರೇಶ್‌ಗೌಡ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಆರ್ಥಿಕ ದಿವಾಳಿಯಾಗಿದೆ. ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಮುಖ್ಯಮಂತ್ರಿ ನೋಡಿದ್ದೇನೆ. ಈಗಿನ ಸಿಎಂ ಸಿದ್ದರಾಮಯ್ಯ ಆಡಳಿತ ಸಂಪೂರ್ಣ ಕುಸಿದಿದೆ: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ಗೌಡ

50 MLAs Ready to Topple the Karnataka Congress Government Says Suresh Gowda grg
Author
First Published Oct 11, 2023, 6:47 AM IST

ದಾಬಸ್‌ಪೇಟೆ(ಅ.11): ರಾಜ್ಯದ ಕಾಂಗ್ರೆಸ್ ಸರ್ಕಾರ ಉಳಿಸಲು, ಅವರದ್ದೇ ಪಕ್ಷದ 50 ಶಾಸಕರು ಸಿದ್ದರಾಗಿದ್ದಾರೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಕಾದಿದ್ದಾರೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ಗೌಡ ಹೇಳಿದರು. 

ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಶ್ರೀ ಗಂಗಾಧರೇಶ್ವರ ಸ್ವಾಮಿ, ತೋಪಿನ ಗಣಪತಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೀಡಿ ಆರ್ಥಿಕ ದಿವಾಳಿಯಾಗಿದೆ. ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಮುಖ್ಯಮಂತ್ರಿ ನೋಡಿದ್ದೇನೆ. ಈಗಿನ ಸಿಎಂ ಸಿದ್ದರಾಮಯ್ಯ ಆಡಳಿತ ಸಂಪೂರ್ಣ ಕುಸಿದಿದೆ. ಮೊದಲನೇ ಅವಧಿಯಲ್ಲಿ ಉತ್ತಮ ಆಡಳಿತ ಸಿದ್ದರಾಮಯ್ಯ ನೀಡಿದ್ದರು. ಐದು ಬಾರಿ ಗೆದ್ದಂತಹ ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ. 50 ಜನ ಶಾಸಕರು ಸಿದ್ದರಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಕಾದಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರದಲ್ಲಿ ಹಣವಿಲ್ಲ ಎಂದು ಆಡಳಿತ ಪಕ್ಷವನ್ನು ಟೀಕಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ನೆಮ್ಮದಿ: ಲಕ್ಷ್ಮಣ ಸವದಿ

ಆಂತರಿಕ ಭಿನ್ನಮತ:

ಬರಗಾಲದ ನಡುವೆ ಮೂವರು ಡಿಸಿಎಂ ಆಗಲು ಸಿದ್ದರಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲೇ ಹಿರಿಯರಾದ ಶಾಮನೂರು ಶಿವಶಂಕರಪ್ಪ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದ್ದಾರೆ ಎಂದರೆ, ಹರಿಪ್ರಸಾದ್ ಸಿಎಂ ಮಾಡುವುದು ಗೊತ್ತು, ಇಳಿಸುವುದು ಗೊತ್ತು ಎನ್ನುತ್ತಾರೆ. ರಾಜ್ಯ ಸರ್ಕಾರ ಟೇಕ್ ಆಫ್ ಹಂತದಲ್ಲೇ ವಿಫಲವಾಗಿ, ಗೊಂದಲದ ಗೂಡಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ? ಕೈ ನಾಯಕರ ಕೆಣಕಿದ ಬೊಮ್ಮಾಯಿ

ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಿದರು ಬೆಂಬಲ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ಯಾರಿಗೆ ಟಿಕೆಟ್ ನೀಡಿದರೂ ಬೆಂಬಲಿಸುತ್ತೇವೆ. ಗೌರಿಶಂಕರ್‌ಗೆ ಟಿಕೆಟ್ ನೀಡಿದರೂ ಬೆಂಬಲಿಸುತ್ತೇನೆ. ಎನ್.ಡಿ.ಎ ಯಾರೇ ಅಭ್ಯರ್ಥಿ ಹಾಕಿದರು ಗೆಲವೊಂದೇ ನಮ್ಮ ಗುರಿ, ಎಲ್ಲಾ ಕ್ಷೇತ್ರದಲ್ಲೂ ವಿಜಯಶಾಲಿಯಾಗುವುದೇ ನಮ್ಮ ಗುರಿ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ್ ಚೌಧರಿ, ಭವಾನಿ ಶಂಕರ್ ಬೈರೇಗೌಡ, ಮಂಜುನಾಥ್, ಹೊನ್ನೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮುರಳೀಧರ್(ಮಧು), ಕರವೇ ಮಂಜುನಾಥ್, ರಾಯರಪಾಳ್ಯ ಮಹೇಶ್, ರುದ್ರಣ್ಣ, ನಿರ್ಮಾಪಕ ನಾಗರಾಜು, ಶಿವಗಂಗೆ ಗ್ರಾಪಂ ಸದಸ್ಯ ಮನುಪ್ರಸಾದ್, ಸಂತೋಷ್, ದಿನೇಶ್, ಸೋಂಪುರ ಮಹೇಶ್, ಸ್ವಾಮಿ ಇನ್ನಿತರರಿದ್ದರು.

Follow Us:
Download App:
  • android
  • ios