ಕಾಂಗ್ರೆಸಿನ 50 ಶಾಸಕರಿಗೆ ತಲಾ ₹50 ಕೋಟಿ ಆಮಿಷ ವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಸರ್ಕಾರ ಕೆಡವಲು ಪ್ರಯತ್ನ ನಡೆಸಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ನಿಮ್ಮದೇ ಸರ್ಕಾರವಿದೆ. ನಿಮ್ಮದೇ ತನಿಖಾ ಸಂಸ್ಥೆಗಳಿವೆ. 250 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ 

ಬೆಂಗಳೂರು(ನ.15): ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆ ಪಿಯವರು ₹50 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಗುರುವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಹಲವು ಹಿರಿಯ ಸಚಿವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿರುವುದು ನಿಜ, ಆದರೆ ಇಂತಹ ಯಾವುದೇ ಆಮಿಷಗಳಿಗೆ ಶಾಸಕರು ಬಲಿಯಾಗುವುದಿಲ್ಲ. ಸರ್ಕಾರ ಕೆಡವಲು ಬಿಡುವುದಿಲ್ಲ ಎಂದೂ ಹೇಳಿದ್ದಾರೆ. 

ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿರುವ ಹಿರಿಯ ಸಚಿವರು, ತಮ್ಮ ಬಳಿಯೂ ಕೆಲವು ಶಾಸಕರು ಆಮಿಷ ಒಡ್ಡಿರುವ ಬಗ್ಗೆ ಹೇಳಿಕೊಂಡಿ ದ್ದಾರೆ. ಪ್ರಧಾನಿ ಮೋದಿ ಅವರು ಏನು ಬೇಕಾದರೂ ಮಾಡುತ್ತಾರೆ, ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ಗಳಲ್ಲಿ ಸರ್ಕಾರ ಬೀಳಿಸಿದ್ದಾರೆ. ಕರ್ನಾಟಕದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. 

ಕೋವಿಡ್‌ ಹಗರಣ: ಯಡಿಯೂರಪ್ಪ, ಶ್ರೀರಾಮುಲುಗೆ ಎಸ್‌ಐಟಿ ಕುಣಿಕೆ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಆಮಿಷ ಒಡ್ಡಿರುವುದು ನಿಜ, ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ, ಈ ವಿಚಾರವನ್ನು ಕೆಲವು ಶಾಸಕರು ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದಾರೆ. ಅದನ್ನೇ ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿದ್ದಾರೆ ಎಂದರು. 

ಸರ್ಕಾರ ಕೆಡವಲು ಬಿಡಲ್ಲ: 

ಗೃಹ ಸಚಿವ ಡಾ| ಜಿ.ಪರಮೇಶ್ವರ ಮಾತನಾಡಿ, ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಎಲ್ಲ ಪ್ರಯತ್ನ ಮಾಡುತ್ತಿದೆ, ಶಾಸಕರಿಗೆ ಆಮಿಷ ತೋರಿಸುವುದು ಬಿಜೆಪಿಗೆ ಅಭ್ಯಾಸ ವಾಗಿದೆ. ಸರ್ಕಾರ ಅಸ್ಥಿರಗೊಳಿಸಲು ಬಿಡಲ್ಲ ಎಂದರು. 

ಅಸ್ಥಿರ ಯತ್ನ ನಿರಂತರ- ಜಾರಕಿಹೊಳಿ: 

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಶಾಸಕರಿಗೆ ಆಮಿಷ ಒಡ್ಡಿರುವ ಮಾಹಿತಿ ತಮಗೆ ಗೊತ್ತಿಲ್ಲ, ಆದರೆ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರೆ ಅವರಿಗೆ ಮಾಹಿತಿ ಇರಬೇಕು. ಸರ್ಕಾರ ಬೀಳಿಸುವ ಪ್ರಯತ್ನ ಕೊನೆ ತನಕ ಇರುತ್ತೆ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿರುವುದು ಸತ್ಯ ಎಂದು ಹೇಳಿದರು. 

ಸಂವಿಧಾನಕ್ಕೆ ಅಪಮಾನ- ರಾಜಣ್ಣ: 

ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮಾತನಾಡಿ, ಮುಖ್ಯಮಂತ್ರಿಗಳು ಸತ್ಯವಾದ ಅಂಶವನ್ನು ಹೇಳಿದ್ದಾರೆ, ಬಿಜೆಪಿಯವರು ವಾಮ ಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. 

ಮೋದಿ ಸಾಹೇಬರಿಂದ ಎಲ್ಲವೂ ಸಾಧ್ಯ- ಲಾಡ್: 

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಕಳೆದ ಹಲವು ತಿಂಗಳಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೋದಿ ಸಾಹೇಬರಿಗೆ ಎಲ್ಲವೂ ಸಾಧ್ಯ ಏನೂ ಬೇಕಾದರೂ ಮಾಡುತ್ತಾರೆ ಎಂದು ಆಪಾದಿಸಿದರು. ಬಿಜೆಪಿಯವರಿಗೆ ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳಿ ಗಿಂತ ಸರ್ಕಾರ ಬೀಳಿಸುವುದೇ ಮುಖ್ಯವಾಗಿದೆ. ಆದರೆ ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾ ಗಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಎಂದಿದ್ದಾರೆ.

ನಿಮ್ಮದೇ ಸರ್ಕಾರ ಇದೆ, ತನಿಖೆ ನಡೆಸಿ: ಕಾಂಗ್ರೆಸ್‌ಗೆ ಬಿಜೆಪಿ ಸವಾಲ್‌ 

ಬೆಂಗಳೂರು: ಕಾಂಗ್ರೆಸಿನ 50 ಶಾಸಕರಿಗೆ ತಲಾ ₹50 ಕೋಟಿ ಆಮಿಷ ವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಸರ್ಕಾರ ಕೆಡವಲು ಪ್ರಯತ್ನ ನಡೆಸಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ನಿಮ್ಮದೇ ಸರ್ಕಾರವಿದೆ. ನಿಮ್ಮದೇ ತನಿಖಾ ಸಂಸ್ಥೆಗಳಿವೆ. 250 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ. 

50 ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ಎಲ್ಲಿದೆ, ಯಾವ ವ್ಯಕ್ತಿ ಮುಂದಾಗಿದ್ದರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಇ.ಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ನಡೆಸುವುದು ತುರ್ತು ಅಗತ್ಯವಿದೆ ಎಂದೂ ಪ್ರತಿಪಾದಿಸಿದ್ದಾರೆ. ಅಲ್ಲದೆ, ಬಿಜೆಪಿಯ ಇತರ ನಾಯಕರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಟಿ.ರವಿ, ವಿ.ಸುನೀಲ್ ಕುಮಾರ್, ಎಂ.ಪಿ.ರೇಣುಕಾಚಾರ್ಯ ಅವರೂ ಈ ಬಗ್ಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. 

ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ ಅದಕ್ಕಾಗಿಯೇ 50 ಕೋಟಿ ರು.ಗಳಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಸಿದ್ದರಾಮಯ್ಯ ಅವರ ತಮ್ಮ ಸ್ಥಾನ ಅಸ್ಥಿರ ವಾಗಿರುವುದರಿಂದ ಇಲ್ಲದ ಹೇಳಿಕೆಗಳನ್ನು ನೀಡುತ್ತಿ ದ್ದಾರೆ. ಗುಪ್ತಚರ ವಿಭಾಗವು ಸಿದ್ದರಾಮಯ್ಯ ಕೈಯಲ್ಲೇ ಇದೆ. ಎಲ್ಲಿ, ಯಾರಿಗೆ, ಎಷ್ಟು ಹಣ ನೀಡಲಾಗಿದೆ ಎಂಬುದರ ವರದಿಯನ್ನು ತರಿಸಿಕೊಳ್ಳಬಹುದಿತ್ತು. ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದರು. 

ಹಾವೇರಿಯಲ್ಲಿ ಮಾತನಾಡಿದ ಬೊಮ್ಮಾಯಿ, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರರಹಿತ ಆರೋಪ ಮಾಡುತ್ತಾರೆ. ಮುಖ್ಯಮಂತ್ರಿಗಳು ಬಹಳ ಗೊಂದಲದಲ್ಲಿದ್ದು, ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ. 
ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ಅವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು ಎಂದರು.

ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮ ಕಗ್ಗೋಲೆ: ಸುನಿಲ್ ಕುಮಾರ್

ಶಾಸಕರೇನು ಕುದುರೆ, ಕತ್ತೆ, ದನಗಳೇ?: 

ಸಿ.ಟಿ.ರವಿ ಮಾತನಾಡಿ, ನಿಮ್ಮ ಪಕ್ಷದ ಶಾಸಕರು ಅಷ್ಟೊಂದು ದುರ್ಬಲರಾ? ಖರೀದಿಸಲು ಅವರೇನು ಕುದುರೆ, ಕತ್ತೆ, ದನಗಳೇ ಎಂದು ಪ್ರಶ್ನಿಸಿದ್ದಾರೆ. 

ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ- ರೇಣುಕಾಚಾರ್ಯ: 

ನಾಯಕರು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಆಮಿಷ ಒಡ್ಡಿದ್ದಾರೆ ಎಂಬುದನ್ನು ತಿಳಿಸಿ. ಈ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಎಂ.ಪಿ.ರೇಣುಕಾಚಾರ್ಯ ಸವಾಲು ಎಸೆದರು. 

ತಮ್ಮ ಸ್ಥಾನಕ್ಕೆ ಚ್ಯುತಿಬರಲಿದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದಾರೆ ವಿ.ಸುನೀಲ್‌ಕುಮಾ‌ರ್ ಟೀಕಿಸಿದ್ದಾರೆ.