ಕರ್ನಾಟಕದಲ್ಲಿ 40 % ಲಂಚ ನೀಡಿಯೇ ಉಸಿರು ಪಡೆಯುವಂತೆ ಸ್ಥಿತಿ ನಿರ್ಮಾಣವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ ಸುರ್ಜಿವಾಲ ಹೇಳಿಕೆ ನೀಡಿದ್ದಾರೆ.

ಗದಗ (ಜ.19): ರಾಜ್ಯದಲ್ಲಿ ಏನೇ ಕಾಮಗಾರಿ ಕೈಗೊಳ್ಳಬೇಕಾದರೆ ಶೇ. 40 ಹಣ ನೀಡಿಯೇ ಉಸಿರು ಪಡೆಯುವಂತಾಗಿದೆ ಎಂದು ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಹೇಳಿದರು. ಅವರು ಬುಧವಾರ ನಗರದ ಮುನ್ಸಿಪಲ್‌ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಶೇ. 40 ಕಮೀಷನ್‌ನಿಂದ ಆಗಿದೆ. ನಮ್ಮ ಹುಡುಗ ಕಾಂಗ್ರೆಸ್‌ನಲ್ಲಿ ಇದ್ದರೆ ಇದು ನಿರ್ಮಾಣ ಆಗುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರನ್ನು ಕೇಳುತ್ತೇನೆ ಕಾಂಟ್ರ್ಯಕ್ಟರ್‌ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರ ದಲಾಲಿ, ಹಣ ಪಡೆಯಲು ಅಧಿಕಾರ ನೀಡಲಾಗಿದೆ. ಗದಗ ಜಿಲ್ಲೆಯ ಮಂತ್ರಿ .10 ಲಕ್ಷ ತೆಗೆದುಕೊಂಡು ವಿಧಾನಸೌಧಕ್ಕೆ ಏತಕ್ಕೆ ಹೋಗಿದ್ದರು ಎಂದು ಪ್ರಶ್ನಿಸಿದರು.

Add Asianetnews Kannada as a Preferred SourcegooglePreferred

ಪೊಲೀಸ್‌ ಅಧಿಕಾರಿ ನೇಮಕಾತಿಯಲ್ಲಿ .80 ಲಕ್ಷ ಲಂಚ ನೀಡಿ ಹುದ್ದೆ ಪಡೆದುಕೊಳ್ಳಲಾಗಿದೆ. ಅಸಿಸ್ಟಂಟ್‌ ಎಂಜಿನಿಯರಿಂಗ್‌ ನೌಕರಿಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಅವರಿಗೆ ಮದುವೆಯಾಗಿಲ್ಲ, ಅವರಿಗೆ ಬೆಲೆ ಏರಿಕೆಯ ಬಿಸಿ ಗೊತ್ತಿಲ್ಲ, ಹಾಲು ತರಕಾರಿ, ಮ್ಯಾಗಿಯ ಡಬ್ಬಿಯಲ್ಲಿ ಶೇ. 10 ಕಡಿತ ಮಾಡಿದ್ದಾರೆ. ಉದ್ಯೋಗ ನೀಡುವಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ಇದೇ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದರು.

ಇನ್ನು 90 ದಿನಗಳ ಆನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಮಹಿಳೆಯರಿಗೆ .2 ಸಾವಿರ ನೀಡಲಾಗುವುದು, 200 ಯುನಿಟ್‌ ವಿದ್ಯುತ್‌ ಉಚಿತ ನೀಡಲಾಗುವುದು. ರೈತರ, ಹಿಂದುಳಿದ ವರ್ಗದ ವಿರೋಧಿಯಾಗಿರುವ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿ.ಕೆ. ಹರಿಪ್ರಸಾದ ಮಾತನಾಡಿ, ಬೆಲೆ ಏರಿಕೆ ವಿಷಯದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಮೋದಿ ದೇಶದಲ್ಲಿ ವಿಶ್ವಗುರು ಎಂದು ಹೇಳುತ್ತಾರೆ. ಆದರೆ, 3 ರಾಜ್ಯದಲ್ಲಿ ಮಾತ್ರ ಅಧಿಕಾರಕ್ಕೆ ಬಂದಿದ್ದಾರೆ. ಉಳಿದ ರಾಜ್ಯದಲ್ಲಿ ಆಪರೇಶನ್‌ ಕಮಲ ಮಾಡಿ ಅಧಿಕಾರಕ್ಕೆ ತಂದಿದ್ದಾರೆ. ಪ್ರಧಾನಿಗೆ ನಾಚಿಕೆಯಾಗಬೇಕು, ಮೋದಿ ಒಬ್ಬ ಸುಳ್ಳಿನ ಸರದಾರನಾಗಿದ್ದು, ರಾಜ್ಯಕ್ಕೆ ಬಂದು ಕಾಂಗ್ರೆಸ್‌ ಧೂಳಿಪಟ ಮಾಡುತ್ತಾರಂತೆ ಇದೆಲ್ಲಾ ಏನೂ ನಡೆಯಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕಟೀಲ ಒಬ್ಬ ಜೋಕರ್‌ ಇದ್ದಂತೆ, ನೀರು, ಚರಂಡಿ ಮೂಲಭೂತ ಸೌಲಭ್ಯದ ಬಗ್ಗೆ ಮಾತನಾಡುತ್ತಿಲ್ಲ ಜಾತಿ- ಜಾತಿ ನಡುವೆ ಜಗಳ ಹಚ್ಚುವುದೇ ಇವರ ಉದ್ದೇಶ. ಆರ್‌ಎಸ್‌ಎಸ್‌ ವಿರುದ್ಧ ನಾವೆಲ್ಲಾ ಸೇರಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಟಿ. ಈಶ್ವರ, ಹುಮಾಯೂನ್‌ ಮಾಗಡಿ ಮುಂತಾದವರು ಮಾತನಾಡಿ, ಕಾಂಗ್ರೆಸ್‌ನ ಅಭಿವೃದ್ಧಿ ಕೆಲಸಗಳ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ಕುರಿತು ಮಾತನಾಡಿದರು.

ಪ್ರಜಾಧ್ವನಿ ಯಾತ್ರೆ: ಹಾವೇರಿಯಲ್ಲಿ ಇಂದು ಕಾಂಗ್ರೆಸ್‌ ಶಕ್ತಿ ಪ್ರದರ್ಶನ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಮಯೂರ ಜಯಕುಮಾರ, ಸಲೀಂ ಅಹ್ಮದ, ಸಿದ್ದು ಪಾಟೀಲ, ವಾಸಪ್ಪ ಕುರುಡಗಿ, ಬಿ.ಆರ್‌. ಯಾವಗಲ್ಲ, ಎಚ್‌.ಎಸ್‌. ಸೋಂಪುರ, ಮಿಥುನ್‌ ಪಾಟೀಲ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಉಮರ ಫಾರೂಕ್‌ ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರು ಹಾಜರಿದ್ದರು.

PRAJADHWANI YATRE: ಎರಡೇ ವರ್ಷಗಳಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ

ನಾನು ಎನ್‌ಒಸಿ (ಒಪ್ಪಿಗೆ ಪತ್ರ)ಕ್ಕೆ ಒಂದು ಪೈಸೆ ಲಂಚ ಕೇಳಿದ್ದರೆ ನಾನು ಇಂದೇ ರಾಜಕೀಯ ಸನ್ಯಾಸ ಸ್ವೀಕಾರ ಮಾಡುತ್ತೇನೆ. ಆದರೆ ಬಿಜೆಪಿಯವರು ಅದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಇದು ರಾಜ್ಯದ ಜನತೆಗೆ ಗೊತ್ತಿರುವ ವಿಷಯ.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ