ಸ್ತ್ರೀಯರಿಗೆ 35 ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ : ಹಲವು ಕ್ಷೇತ್ರಗಳಿಗೆ ಸೆಲೆಕ್ಷನ್ ಫೈನಲ್
- ಜೆಡಿಎಸ್ ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ
- 2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು
ರಾಮನಗರ (ಸೆ.30): ಜೆಡಿಎಸ್ (JDS) ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) 2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ (Ticket) ಮೀಸಲು ಇಡುತ್ತೇವೆ ಎಂದು ಘೋಷಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಮೀಸಲಿಡಲಾಗುವುದು ಎಂದರು.
ಕುಮಾರಸ್ವಾಮಿಗೆ ಸಲಹೆ ನೀಡಿದ ಅನಿತಾ : ಬೇಡಿಕೆಗಳ ಪಟ್ಟಿ ಇಟ್ಟ ಶಾಸಕಿ
ಬಿಜೆಪಿ, ಕಾಂಗ್ರೆಸ್ (congress) ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡುವ ಕೆಲಸ ಮಾಡಲಾಗುವುದು. ಮಹಿಳಾ ಘಟಕಕ್ಕೆ (women wing) ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.
ಮಹಿಳಾ ಪ್ರತಿನಿಧಿಗಳಿಗೂ ಟಾಸ್ಕ್ :
ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡಲಾಗುವುದು. ಮಹಿಳಾ ಘಟಕದ ಸದಸ್ಯರಿಗೆ ಪಕ್ಷ ಹಾಗೂ ಚುನಾವಣೆಗಾಗಿ ಒಂದು ದಿಕ್ಸೂಚಿ ನಿಗದಿ ಮಾಡಲಾಗುವುದು. 30 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ (Reservation) ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಶೇ.33 ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಮಹಿಳಾ ಕಾರ್ಯಾಗಾರದಲ್ಲಿ ಪಂಚರತ್ನ ಪಾಠ:
ಜನತಾ ಪರ್ವ 1.0 ಹಾಗೂ ಜೆಡಿಎಸ್ ಮಿಷನ್ -123 ಕಾರ್ಯಾಗಾರದ ಎರಡನೇ ದಿನ ಜೆಡಿಎಸ್ ಜನಪ್ರತಿನಿಧಿಗಳಿಗೆ ಪಕ್ಷದ ‘ಪಂಚರತ್ನ’ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಂತೆ ಪಾಠ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೂರನೇ ದಿನ ಮಹಿಳಾ ಪ್ರತಿನಿಧಿಗಳಿಗೂ ಪಂಚರತ್ನ ಕಾರ್ಯಕ್ರಮಗಳ ಕುರಿತು ಮತ್ತೊಂದು ಪ್ರಾತ್ಯಕ್ಷಿಕೆ ನೀಡಿ ವಿವರಿಸಿದರು. ಮಂಗಳವಾರ ವೇದಿಕೆಯಲ್ಲಿ ಎಲ್ ಇಡಿ (LED) ಪರದೆಯ ಮೇಲೆ ಮೂಡಿದ ಗ್ರಾಫಿಕ್ಸ್ ಮೂಲಕ ಕುಮಾರಸ್ವಾಮಿರವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿಗೆ ಪಕ್ಷ ಸಂಘಟನೆ, ಮುಂದಿನ ಚುನಾವಣೆ ಕಾರ್ಯತಂತ್ರ, ಸವಾಲುಗಳನ್ನು ಎದುರಿಸುವುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಪಾಠ ಮಾಡಿದರು. ಮಹಿಳಾ ಪ್ರತಿನಿಧಿಗಳೂ ವಿದ್ಯಾರ್ಥಿನಿಯರಂತೆ ತದೇಕಚಿತ್ತದಿಂದ ಆಲಿಸಿದರು.
ದೇವದುರ್ಗದ ಅಭ್ಯರ್ಥಿ ಕರಿಯಮ್ಮ
2023ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ವಿಧಾನ ಸಭಾ ಕ್ಷೇತ್ರದಿಂದ ಕರಿಯಮ್ಮ(Kariyamma) ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ವಿಧಾನ ಮುಂದಿನ ಅಭ್ಯರ್ಥಿ ಎಂದು ಎಂದು ಎಚ್.ಡಿ.ಕುಮಾರಸ್ವಾಮಿ ಜೆಡಎಸ್ ಮಹಿಳಾ ಕಾರ್ಯಾಗಾರದ ವೇದಿಕೆಯಲ್ಲಿಯೇ ಘೋಷಣೆ ಮಾಡಿದರು. ಕರಿಯಮ್ಮ ಬಡ ಕುಟುಂಬದಿಂದ ಬಂದವರು. ಆದರೆ ಜನಬಲವಿದೆ. ಅವರ ಗೆಲುವಿಗೆ ಎಲ್ಲಾ ಸಹಕಾರ ಕೊಡಲಾಗುವುದು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಾಕಾಂಕ್ಷಿಯಾಗಿದ್ದ ಕರಿಯಮ್ಮ ಕಡೇಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂತ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಮತ್ತೆ ಜೆಡಿಎಸ್ ಪಾಳಯವನ್ನು ಸೇರಿರುವ ಅವರು ಕ್ಷೇತ್ರದಲ್ಲಿ ಪಕ್ಷದ ಬಲ ಸಂವರ್ಧನೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.