ನೆದರ್ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ  ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಎಸ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 

ನೆದರ್ಲ್ಯಾಂಡ್(ಆ.07):  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಸಾಧನೆ ಮಾಡುತ್ತಿದ್ದರೆ, ಇತ್ತ ನೆದರ್ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಕರ್ನಾಟಕ ಪದಕ ಸಾಧನೆ ಮಾಡಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಎಸ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಾಂತ್ ಎಸ್ ಕಂಚಿನ ಪದಕ ಗೆದ್ದಿದ್ದಾರೆ. ಕರ್ನಾಟಕಕ್ಕೆ ಕೀರ್ತಿ ತಂದ ಇನ್ಸ್‌ಪೆಕ್ಟರ್ ಪ್ರಶಾಂತ್‌ಗೆ ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಶುಭಶಾಯ ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ಎರಡು ವರ್ಷಕ್ಕೊಮ್ಮೆ ಪೊಲೀಸ್ ವಿಶ್ವ ಕ್ರೀಡಾಕೂಟ ಆಯೋಜನೆಗೊಳ್ಳುತ್ತದೆ. ಅರ್ಹತಾ ಸುತ್ತಿನ ಮೂಲಕ ಪೊಲೀಸರು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ಈ ಕೂಡದಲ್ಲಿ ಪಾಲ್ಗೊಳ್ಳಲು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಈ ಬಾರಿ ಕರ್ನಾಟಕದಿಂದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದ ಏಕೈಕ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್.ಎಸ್ ಆಗಿದ್ದರು. ಭಾರತದಲ್ಲಿ ಆಯ್ದ ಪೊಲೀಸ್ ಅಧಿಕಾರಿಗಳ ತಂಡ ಈ ಕೂಟದಲ್ಲಿ ಪಾಲ್ಗೊಂಡಿದೆ. ಇಷ್ಟೇ ಅಲ್ಲ ಪದಕಗಳನ್ನು ಗೆದ್ದುಕೊಂಡಿದೆ. 

ಪುಟ್ಟ ಬಾಲಕನ ಜಾನಪದ ಹಾಡಿಗೆ ಪೊಲೀಸರು ಫಿದಾ: ವಿಡಿಯೋ ವೈರಲ್

ವಿಶ್ವ ಪೊಲೀಸ್‌ ಕ್ರೀಡಾಕೂಟದ ಟೆನಿಸ್‌ ಸ್ಪರ್ಧೆಯಲ್ಲಿ ಮಾಜಿ ಐಪಿಎಸ್‌ ಅಧಿಕಾರಿ, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ವಲಯ ಕಾರ್ಯಾಚರಣೆ ಮುಖ್ಯಸ್ಥ ಬಿಎನ್‌ಎಸ್‌ ರೆಡ್ಡಿ ಎರಡು ಪದಕಗಳನ್ನು ಗೆದ್ದಿದ್ದಾರೆ. ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದವರೇ ಆದ ಎಸ್‌.ಎಂ.ಶರ್ಮಾ ಅವರ ಜೊತೆಗೂಡಿ ಚಿನ್ನ ಗೆದ್ದ ರೆಡ್ಡಿ ಅವರು ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದರು. ಡಬಲ್ಸ್‌ನ ಫೈನಲ್‌ನಲ್ಲಿ ಭಾರತೀಯ ಜೋಡಿ ಥಾಯ್ಲೆಂಡ್‌ನ ಸುಖವಚನ ಮತ್ತು ವಿನ್ಸನ್‌ ಜೋಡಿ ವಿರುದ್ಧ 6-1, 6-4 ಸೆಟ್‌ಗಳಲ್ಲಿ ಜಯಿಸಿತು. ರೊಮೇನಿಯಾದ ಇಯೊನ್‌ ವಿರುದ್ಧ ಸಿಂಗಲ್ಸ್‌ ಫೈನಲ್‌ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ರೆಡ್ಡಿ ಅವರು, ಬೆಳ್ಳಿಗೆ ತೃಪ್ತಿಪಟ್ಟರು. 2015, 2017, 2019ರ ವಿಶ್ವ ಪೊಲೀಸ್‌ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ರೆಡ್ಡಿ ಅವರು ಚಿನ್ನ ಗೆದ್ದಿದ್ದರು.