Asianet Suvarna News Asianet Suvarna News

ಪಡುಕೋಣೆ-ದ್ರಾವಿಡ್ ಕೇಂದ್ರಕ್ಕೆ ಅನುರಾಗ್ ಭೇಟಿ, ವಿಶ್ವದರ್ಜೆ ಸೌಲಭ್ಯಗಳ ಬಗ್ಗೆ ಸಚಿವರ ಮೆಚ್ಚುಗೆ

* ಪಡುಕೋಣೆ-ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರಕ್ಕೆ ಕ್ರೀಡಾಸಚಿವ ಅನುರಾಗ್ ಠಾಕೂರ್ ಭೇಟಿ

* ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕ್ರೀಡಾ ಸಚಿವರು

* ಅಕಾಡೆಮಿಯು 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ವಿಶ್ವದರ್ಜೆಯ ಸೌಲಭ್ಯಗಳಿವೆ

Central Sports Minister Anurag Thakur Visits to Padukone Dravid Center for Sports Excellence in Bengaluru kvn
Author
Bengaluru, First Published May 4, 2022, 9:17 AM IST

ಬೆಂಗಳೂರು(ಮೇ.04): ವಾರಾಂತ್ಯ, ರಜಾ ದಿನಗಳಿಗಾಗಿ ಕಾಯದೆ ಎಲ್ಲಾ ಸಮಯದಲ್ಲೂ ಕ್ರೀಡೆಗಳಲ್ಲಿ ತೊಡಗಬೇಕು ಎಂದು ಪಡುಕೋಣೆ-ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರ(ಸಿಎಸ್‌ಇ)ದ (Padukone Dravid Center for Sports Excellence) ವಿದ್ಯಾರ್ಥಿಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಅವರು ಸಲಹೆ ನೀಡಿದರು. ಯಲಹಂಕದಲ್ಲಿರುವ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಕಾಡೆಮಿಯಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅನುಕೂಲವಾಗುವಂತೆ ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಟೀಂ ಇಂಡಿಯಾ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid), ಬ್ಯಾಡ್ಮಿಂಟನ್‌ ಅಕಾಡೆಮಿಯ ಮುಖ್ಯ ತರಬೇತುದಾರ ವಿಮಲ್‌ ಕುಮಾರ್‌, ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಕುಮಾರ್‌, ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಕಾಡೆಮಿಯು 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಬ್ಯಾಡ್ಮಿಂಟನ್‌, ಕ್ರಿಕೆಟ್‌, ಫುಟ್‌ಬಾಲ್, ಟೆನಿಸ್‌, ಈಜು, ಬಾಸ್ಕೆಟ್‌ಬಾಲ್ ಮತ್ತು ಶೂಟಿಂಗ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ.

ಕರ್ನಾಟಕ ಒಲಿಂಪಿಕ್‌ ಭವನಕ್ಕೆ ರಣತುಂಗ ಭೇಟಿ

ಬೆಂಗಳೂರು: ಶ್ರೀಲಂಕಾದ ವಿಶ್ವಕಪ್‌ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಕರ್ನಾಟಕ ರಾಜ್ಯ ಒಲಿಂಪಿಕ್‌ ಭವನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ(ಕೆಒಎ) ಅಧ್ಯಕ್ಷ ಡಾ.ಕೆ.ಗೋವಿಂದರಾಜು, ರಣತುಂಗ ಅವರನ್ನು ಸನ್ಮಾನಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ರಣತುಂಗ ಕ್ರಿಕೆಟ್‌, ಶ್ರೀಲಂಕಾದ ತುರ್ತು ಪರಿಸ್ಥಿತಿ ಸೇರಿ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ವಿಶ್ವ ವೇಟ್‌ಲಿಫ್ಟಿಂಗ್‌ ಕೂಟ: ಭಾರತಕ್ಕೆ ಮತ್ತೆರಡು ಪದಕ

ನವದೆಹಲಿ: ವೇಟ್‌ಲಿಫ್ಟಿಂಗ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಪರ್ಧಿಗಳು ಮತ್ತೆರಡು ಪದಕಗಳನ್ನು ಗೆದ್ದಿದ್ದಾರೆ. ಮಂಗಳವಾರ ಮಹಿಳೆಯರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಯಾದವ್‌ 156 ಕೆ.ಜಿ. (ಸ್ನ್ಯಾಚ್‌ನಲ್ಲಿ 73 ಕೆ.ಜಿ.+ ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 83 ಕೆ.ಜಿ.) ಭಾರ ಎತ್ತಿ ಬೆಳ್ಳಿ ಗೆದ್ದರು. ಇದೇ ವಿಭಾಗದಲ್ಲಿ 18 ವರ್ಷದ ರಿತಿಕಾ 150 ಕೆ.ಜಿ.(ಸ್ನ್ಯಾಚ್‌ನಲ್ಲಿ 69 ಕೆ.ಜಿ.+ ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 81 ಕೆ.ಜಿ.) ಭಾರ ಎತ್ತಿ ಕಂಚಿಗೆ ತೃಪ್ತಿಪಟ್ಟುಕೊಂಡರು. ಇಂಡೋನೇಷ್ಯಾದ ವಿಂಡಿ ಕಾಂಟಿಕಾ ಚಿನ್ನ ಪಡೆದರು. ಇದು ಕೂಟದಲ್ಲಿ ಭಾರತಕ್ಕೆ 3ನೇ ಪದಕವಾಗಿದ್ದು, ಸೋಮವಾರ ಹರ್ಷದಾ ಶರದ್‌ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ವಿಶ್ವ ಟಿಟಿ: ಜೀವನಶ್ರೇಷ್ಠ 38ನೇ ಸ್ಥಾನಕ್ಕೆ ಮನಿಕಾ

ನವದೆಹಲಿ: ಭಾರತದ ತಾರಾ ಟೇಬಲ್‌ ಟೆನಿಸ್‌ ಪಟು ಮನಿಕಾ ಬಾತ್ರಾ ವಿಶ್ವ ಟಿಟಿ ರ‍್ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಸಾಧಿಸಿದ್ದು, ಜೀವನಶ್ರೇಷ್ಠ 38ನೇ ಸ್ಥಾನಕ್ಕೇ ಏರಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಮಹಿಳಾ ರ‍್ಯಾಂಕಿಂಗ್‌ನಲ್ಲಿ ಮನಿಕಾ 10 ಸ್ಥಾನ ಜಿಗಿತ ಕಂಡಿದ್ದಾರೆ. ಕರ್ನಾಟಕದ ಅರ್ಚನಾ ಕಾಮತ್‌ 66ನೇ ಸ್ಥಾನ ಪಡೆದಿದ್ದಾರೆ. 

Khelo India University Games: 2 ರಾಷ್ಟ್ರೀಯ ದಾಖಲೆ, 76 ಕೂಟ ದಾಖಲೆಯೊಂದಿಗೆ ಯಶಸ್ವಿ ಮುಕ್ತಾಯ

ಪುರುಷರ ವಿಭಾಗದಲ್ಲಿ ಜಿ.ಸತ್ಯನ್‌ ಭಾರತೀಯರ ಪೈಕಿ ಮುಂಚೂಣಿಯಲ್ಲಿರುವ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಸದ್ಯ 34ನೇ ಸ್ಥಾನದಲ್ಲಿದ್ದಾರೆ. ಇನ್ನು ಪುರುಷರ ಡಬಲ್ಸ್‌ನಲ್ಲಿ ಜಿ.ಸತ್ಯನ್‌-ಹರ್ಮೀತ್‌ ದೇಸಾಯಿ 28ನೇ, ಸತ್ಯನ್‌-ಶರತ್‌ 35ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಮನಿಕಾ-ಅರ್ಚನಾ 4ನೇ ಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios