ಬೆಂಗಳೂರಿನ SAI ಶಿಕ್ಷಕರ ದಿನಾಚರಣೆಯಲ್ಲಿ ಅನುರಾಗ್ ಠಾಕೂರ್; ಕೋಚ್ ತರಬೇತಿ ಶ್ಲಾಘಿಸಿದ ಕೇಂದ್ರ ಸಚಿವ!
- ಕ್ರೀಡಾಪ್ರಾಧಿಕಾರ ಶಿಕ್ಷಕರ ದಿನಾಚರಣೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್
- ಭಾರತದ ಕ್ರೀಡಾಪಟುಗಳ ಭವಿಷ್ಯ ತರಬೇತುದಾರರ ಕೈಯಲ್ಲಿದೆ ಎಂದು ಸಚಿವ
- ಶಿಕ್ಷಣ ದಿನಾಚರಣೆಯಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಸಂಕಲ್ಪ
ಬೆಂಗಳೂರು(ಸೆ.05): ಶಿಕ್ಷಕರ ದಿನಾಚರಣೆಯಲ್ಲಿ ಕ್ರೀಡಾಪಟುಗಳು ಉತ್ತಮ ತರಬೇತಿ ನೀಡುವ ಸಂಕಲ್ಪ ಮಾಡೋಣ ಎಂದು ಕೇಂದ್ರ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಶಿಕ್ಷಣ ದಿನಾಚರಣೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಎಲ್ಲರ ನೆರವು ಅಗತ್ಯ ಎಂದರು.
ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದೆ. ಇದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫಲಿತಾಂಶ ಹೇಳುತ್ತಿದೆ. ಇತ್ತೀಚೆಗೆ ಮುಕ್ತಾಯವಾದ ಟೋಕಿಯೊ ಬೇಸಿಗೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸಾಧನೆ ಮತ್ತಷ್ಟು ಪುಷ್ಟಿ ನೀಡಿದೆ. ಭಾರತದ ಕ್ರೀಡೆಯ ಭವಿಷ್ಯ ತರಬೇತುದಾರರ ಕೈಯಲ್ಲಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಅಥ್ಲೀಟ್ ಗಳಿಗೆ ಉತ್ತಮ ತರಬೇತಿ ನೀಡಿ ಪೋಷಿಸುವ ಸಂಕಲ್ಪ ಮಾಡೋಣ ಮತ್ತು ಒಲಿಂಪಿಯನ್ ಮಾನದಂಡದಂತೆ ತಾರಾ ಅಥ್ಲೀಟ್ ಗಳನ್ನು ರೂಪಿಸುವುದುನ್ನು ಖಾತ್ರಿಪಡಿಸೋಣ ಎಂದು ಅನುರಾಗ್ ಠಾಕೂರ್ ಹೇಳಿದರು.
ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಸದ್ಯ NCOE ಯೋಜನೆ ಅಡಿ ಐದು ವಿಭಾಗಗಳಲ್ಲಿ 160 ಅಥ್ಲೀಟ್ ಗಳು ಉತ್ತಮ ಸಾಧನೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ 168 ತರಬೇತಿ ಪಡೆಯುತ್ತಿರುವ ಕೋಚ್ ಗಳು 9 ಕ್ರೀಡಾವಿಭಾಗಗಳಲ್ಲಿ ಕ್ರೀಡಾ ತರಬೇತಿಯ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ ಮತ್ತು ಸದ್ಯದಲ್ಲೇ ಅವರು ತರಬೇತಿಯನ್ನು ಪೂರ್ಣಗೊಳಿಸಿ, ಯುವ ಕೋಚ್ ಗಳಾಗಿ ಕೇಂದ್ರದಿಂದ ಹೊರಬರಲಿದ್ದಾರೆ. ಆಧುನಿಕ, ವೈಜ್ಞಾನಿಕ ವಿಧಾನ ಮತ್ತು ಇತ್ತೀಚಿನ ಸಂಶೋಧನೆಗಳೊಂದಿಗೆ ತರಬೇತಿ ಪ್ರಕ್ರಿಯೆಗಳನ್ನು ಬೆಂಬಲಿಸಲು ಯುವ ಕ್ರೀಡಾ ವಿಜ್ಞಾನಿಗಳ ತಂಡವನ್ನು ಇತ್ತೀಚೆಗೆ ಸೇರ್ಪಡೆ ಮಾಡಿಕೊಂಡಿರುವುದು ಉನ್ನತ ಕಾರ್ಯಕ್ಷಮತೆಯ ತರಬೇತಿಯಲ್ಲಿ ಎಸ್ ಎಐಗೆ ಕ್ರೀಡಾ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನೂ ತೋರ್ಪಡಿಸುತ್ತದೆ.
ಬೆಂಗಳೂರುSAI ಆಡಳಿತ ಕಚೇರಿಯಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅನುರಾಗ್ ಠಾಕೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅಥ್ಲೀಟ್ ಗಳೊಂದಿಗೆ ಠಾಕೂರ್ ಸಂವಾದ ನಡೆಸಿದರು.