ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯವನ್ನೇ ತೊರೆವೆ: ಜಮೀರ್
ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ಒಂದೊಮ್ಮೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾನು ರಾಜಕೀಯವಷ್ಟೇ ಅಲ್ಲ ರಾಜ್ಯವನ್ನೇ ಬಿಟ್ಟು ಹೋಗುತ್ತೇನೆ ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಹಿರಿಯೂರು : ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ಒಂದೊಮ್ಮೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾನು ರಾಜಕೀಯವಷ್ಟೇ ಅಲ್ಲ ರಾಜ್ಯವನ್ನೇ ಬಿಟ್ಟು ಹೋಗುತ್ತೇನೆ ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟಜಾತಿ ಮತ್ತು ಪಂಗಡ ಹಾಗೂ ಮುಸ್ಲಿಂ ಸಮುದಾಯ ಸಮಾವೇಶ ಉದ್ಘಾಟಿಸಿದ ಅವರು, ಜೆಡಿಎಸ್ಗೆ 25ರಿಂದ 30ಸೀಟು ಬಂದರೆ ಅದೇ ಹೆಚ್ಚು. ಮುಖ್ಯಮಂತ್ರಿ ಆಗುವ ಕುಮಾರಸ್ವಾಮಿ, ಕನಸು ನನಸಾಗುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವಂತೆ ಅವರಪ್ಪನಾಣೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ನಾನು ಹೇಳುತ್ತಿದ್ದೇನೆ. ದೇವೇಗೌಡರು ನನ್ನರಾಜಕೀಯಗುರು ಎಂದು ಒಪ್ಪಿಕೊಳ್ಳಬಲ್ಲೆ. ಅವರಲ್ಲಿ ಜಾತ್ಯತೀತತೆ ಶೇ.100 ರಷ್ಟುಇದೆ. ಆದರೆ ಕುಮಾರಸ್ವಾಮಿ ಬಳಿ ಶೇ.10ರಷ್ಟೂಇಲ್ಲವೆಂದರು.
ಎಚ್ಡಿಕೆ ಅಳುವ ಗುಟ್ಟು ವಿಕ್ಸ್!
‘ಪ್ರಚಾರ ಸಭೆಗಳಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿ ಸೆಂಟಿಮೆಂಟ್ ಡೈಲಾಗ್ ಹೊಡೆದು, ಜನರನ್ನು ಮರುಳು ಮಾಡುತ್ತಾರೆ. ಹೀಗೆ ಅಚಾನಕ್ ಆಗಿ ಅಳಲು ಹೇಗೆ ಸಾಧ್ಯ ಎಂಬುದು ನನಗೆ ಅರ್ಥವಾಗಿರಲಿಲ್ಲ. ಒಂದು ಸಲ ಹೀಗೆ ವೇದಿಕೆ ಮೇಲೆ ಭಾಷಣ ಮಾಡುವಾಗ ಕುಮಾರಸ್ವಾಮಿ ಹೆಗಲ ಮೇಲಿನ ಟವಲ್ ಬಿತ್ತು. ಅದನ್ನು ಎತ್ತಿಕೊಡಲು ಹೋದಾಗ ಏನೋ ವಾಸನೆ ಬಂತು. ಮೂಸಿ ನೋಡಿದರೆ ಟವಲ್ ತುಂಬಾ ವಿಕ್ಸ್ ಹಚ್ಚಲಾಗಿತ್ತು. ಆಗ ನನಗೆ ಕುಮಾರಸ್ವಾಮಿ ಸಲೀಸಾಗಿ ಅಳುವ ಗುಟ್ಟು ಗೊತ್ತಾಯಿತು’ ಎಂದು ಟಾಂಗ್ ನೀಡಿದರು.