ಲಿಂಗಾಯತ ಧರ್ಮ ಹೋರಾಟ: ಜಾಮದಾರ್ಗೆ ‘ವೈ’ ಶ್ರೇಣಿ ಭದ್ರತೆ
ಈಗಾಗಲೇ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬೇರೆ ಪ್ರಕರಣವೊಂದರಲ್ಲಿ ಜೀವ ಬೆದರಿಕೆ ಇದ್ದುದರಿಂದ ‘ಝಡ್’ ಶ್ರೇಣಿ ಭದ್ರತೆಯನ್ನು ಒದಗಿಸಲಾಗಿದೆ. ಇದೀಗ ಡಾ.ಜಾಮದಾರ್ ಅವರಿಗೆ ‘ವೈ’ ಶ್ರೇಣಿ ಭದ್ರತೆ ನೀಡಲಾಗಿದ್ದು, ಎಂ.ಬಿ.ಪಾಟೀಲ್ ಮತ್ತು ಶಾಸಕ ಹೊರಟ್ಟಿ ಯಾವುದೇ ಭದ್ರತೆ ಪಡೆಯಲು ನಿರಾಕರಿಸಿದ್ದಾರೆ.
ಬೆಂಗಳೂರು(09): ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟದ ಮುಂಚೂಣಿಯಲ್ಲಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ್ ಅವರಿಗೆ ರಾಜ್ಯ ಸರ್ಕಾರ ‘ವೈ’ ಶ್ರೇಣಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಜಾಮದಾರ ಅವರ ಜತೆ ಇಬ್ಬರು ಗನ್ಮ್ಯಾನ್ಗಳು ಸದಾ ಇರಲಿದ್ದಾರೆ.
ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಎಂಎಲ್ಸಿ ಬಸವರಾಜ ಹೊರಟ್ಟಿ ಮತ್ತು ಡಾ.ಶಿವಾನಂದ ಜಾಮದಾರ್ ಅವರಿಗೆ ಕೆಲವು ಪಟ್ಟಭದ್ರ ಶಕ್ತಿಗಳಿಂದ ಜೀವ ಬೆದರಿಕೆ ಇದೆ ಎಂದು ಗುಪ್ತದಳ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಗೃಹ ಇಲಾಖೆ ನಾಲ್ವರಿಗೂ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬೇರೆ ಪ್ರಕರಣವೊಂದರಲ್ಲಿ ಜೀವ ಬೆದರಿಕೆ ಇದ್ದುದರಿಂದ ‘ಝಡ್’ ಶ್ರೇಣಿ ಭದ್ರತೆಯನ್ನು ಒದಗಿಸಲಾಗಿದೆ. ಇದೀಗ ಡಾ.ಜಾಮದಾರ್ ಅವರಿಗೆ ‘ವೈ’ ಶ್ರೇಣಿ ಭದ್ರತೆ ನೀಡಲಾಗಿದ್ದು, ಎಂ.ಬಿ.ಪಾಟೀಲ್ ಮತ್ತು ಶಾಸಕ ಹೊರಟ್ಟಿ ಯಾವುದೇ ಭದ್ರತೆ ಪಡೆಯಲು ನಿರಾಕರಿಸಿದ್ದಾರೆ.
ಆದರೆ ಸರ್ಕಾರ ಸಚಿವ ಪಾಟೀಲ್ಗೆ ಒಬ್ಬ ಗನ್ಮ್ಯಾನ್ ಒದಗಿಸಲು ತೀರ್ಮಾನಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ.ಜಾಮದಾರ್ ಅವರಿಗೆ ತೀವ್ರ ಪ್ರಮಾಣದ ಬೆದರಿಕೆ ಇದೆ ಎಂದು ೨೦ ದಿನಗಳ ಹಿಂದೆಯೇ ಗುಪ್ತದಳ ಎಚ್ಚರಿಕೆ ನೀಡಿತ್ತು. ಹೀಗಾಗಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಲಿಂಗಾಯತ ಸಮಾವೇಶದ ವೇಳೆ ಬೆಳಗಾವಿ ಪೊಲೀಸರು ಒಬ್ಬ ಗನ್ಮ್ಯಾನ್ ಒದಗಿಸಿದ್ದರು. ಕಳೆದ ಮಂಗಳವಾರ ರಾತ್ರಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ಹಿನ್ನೆಲೆಯಲ್ಲಿ ಬುಧವಾರದಿಂದಲೇ ‘ವೈ’ ಶ್ರೇಣಿಯ ಭದ್ರತೆ ಒದಗಿಸಿಲಾಗಿದೆ