ಪಕ್ಷ ಮಾಡಿದ ಅವಮಾನಕ್ಕೆ ರಾಜೀನಾಮೆ ಬೀಸಾಕ್ತಾರಂತೆ ಬಿಜೆಪಿ ಮುಖಂಡ
ಪಕ್ಷ ಮಾಡಿದ ಅವಮಾನದಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದ್ದು ಈ ನಿಟ್ಟಿನಲ್ಲಿ ತಮ್ಮ ಸ್ಥಾನವನ್ನು ತೊರೆಯುವುದಾಗಿ ಗೋವಾ ಬಿಜೆಪಿ ಮುಖಂಡ ಪ್ರಾನ್ಸಿಸ್ ಡಿಸೋಜಾ ಹೇಳಿದ್ದಾರೆ.
ಪಣಜಿ : ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಗೋವಾ ಮಾಜಿ ಸಚಿವ ಪ್ರಾನ್ಸಿಸ್ ಡಿಸೋಜಾ ಅವರು ಇದೀಗ ಬಿಜೆಪಿ ಕೋರ್ ಕಮಿಟಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಇದು ತಮ್ಮ ಸ್ವಾಭೀಮಾನದ ವಿಚಾರವಾಗಿದ್ದು ಈ ನಿಟ್ಟಿನಲ್ಲಿ ರಾಜೀನಾಮೆ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.
ಸದ್ಯ ಸಚಿವ ಪ್ರಾನ್ಸಿಸ್ ಡಿಸೋಜಾ ಅನಾರೋಗ್ಯಕ್ಕೆ ಒಳಗಾಗಿದ್ದು, ಅಮೆರಿಕಾಗೆ ತೆರಳಿದ್ದು, ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಲ್ಲಿಂದ ವಾಪಸಾದ ಬಳಿಕ ತನ್ನ ಸ್ಥಾನವನ್ನು ತೊರೆಯುವುದಾಗಿ ಈ ವೇಳೆ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಶಾಸಕ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡುವ ಬಗ್ಗೆ ಗಾಳಿ ಸುದ್ದಿಗಳು ಹರದಾಡುತ್ತಿವೆ.
ಸದ್ಯ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರೂ ಕೂಡ ದಿಲ್ಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸೋಮವಾರವಷ್ಟೇ ಗೋವಾ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗಿದ್ದು ಈ ವೇಳೆ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು. ಫ್ರಾನ್ಸಿಸ್ ಡಿಸೋಜಾ ಹಾಗೂ ಪಾಂಡುರಂಗ ಮಡಕೈಕರ್ ಅವರಿಗೆ ಕೋಕ್ ನೀಡಲಾಗಿದ್ದು, ಅದರ ಸ್ಥಾನಕ್ಕೆ ಮಿಲಿಂದ್ ನಾಯ್ಕ್ ಮತ್ತು ನೀಲೇಶ್ ಕಬ್ರಾಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.