‘ಶಾಗೆ ಬೀಫ್ ಬಿರಿಯಾನಿ ಪಾರ್ಸಲ್ ಮಾಡಲು ಸಿಎಂ ಗೆ ಹೇಳ್ತಿನಿ’!
ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಅಸದುದ್ದೀನ್ ಒವೈಸಿ! ಎೖಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ! ಅಮಿತ್ ಶಾ ಗೆ ಬೀಫ್ ಬಿರಿಯಾನಿ ಕಳುಹಿಸುವಂತೆ ಕೆಸಿಆರ್ ಗೆ ಮನವಿ! ಷರೀಫ್ ಮಗಳ ಮದುವೆಯಲ್ಲಿ ಪ್ರಧಾನಿ ಮೋದಿ ಏನು ತಿಂದಿದ್ದರು?
ಹೈದರಾಬಾದ್(ನ.29): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಇಷ್ಟ ಪಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ, ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುವುದಾಗಿ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಮುಸ್ಲಿಮರಿಗೆ ಚಂದ್ರಶೇಖರ್ ರಾವ್ ಬಿರಿಯಾನಿ ನೀಡಿದ್ದರು. ಇದಕ್ಕೆ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಓವೈಸಿ, ಬೇಕಿದ್ದರೆ, ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸುವಂತೆ ಕೆಸಿಆರ್ ಅವರಿಗೆ ಶಿಫಾರಸು ಮಾಡುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಮೋದಿಯವರಿಗೆ ಟಾಂಗ್ ನೀಡಿರುವ ಒವೈಸಿ, ಆಹ್ವಾನವೇ ಇಲ್ಲದಿದ್ದರೂ ಮೋದಿ ಪಾಕಿಸ್ತಾನಕ್ಕೆ ತೆರಳಿ ಷರೀಫ್ ಅವರ ಮಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ತಿನ್ನಲು ಏನು ಕೊಟ್ಟರು? ಅಲ್ಲಿ ಮೋದಿಯವರಿಗೆ ಎಂತಹ ಆಹಾರ ಕೊಟ್ಟಿದ್ದರೋ ಗೊತ್ತಿಲ್ಲ ಎಂದು ಚುಚ್ಚಿದ್ದಾರೆ.